ಕವಿ – ನಿಸಾರ್ ಅಹಮದ್
ಸಂಗೀತ – ಸಿ.ಅಶ್ವಥ್
ಗಾಯಕರು – ಪುತ್ತೂರು ನರಸಿಂಹ ನಾಯಕ್, ಇಂದು ವಿಶ್ವನಾಥ್

ಹಾಡು ಕೇಳಿ

ಈ ದಿನಾಂತ ಸಮಯದಲಿ
ಉಪವನ ಏಕಾಂತದಲಿ
ಗೋಧೂಳಿ ಹೊನ್ನಿನಲಿ

ಬರದೆ ಹೋದೆ ನೀನು
ಮರೆತು ಹೋದೆ ನೀನು

ನಾ ಬಿಸುಸುಯ್ಯುವ ಹಂಬಲವೋ
ಶುಭ ಸಮ್ಮಿಲನದ ಕಾತರವೋ
ಬಾ ಇನಿಯ ಕರೆವೆ ನೊಂದು

ಬರದೆ ಹೋದೆ ನೀನು
ಮರೆತು ಹೋದೆ ನೀನು

ತನುಮನದಲಿ ನೀನೇ ನೆಲೆಸಿ
ಕಣಕಣವೂ ನಿನ್ನ ಕನಸಿ
ಕಣ್ಣು ಹನಿದು ಕರೆವೆ ನಿನ್ನ

ಬರದೆ ಹೋದೆ ನೀನು
ಮರೆತು ಹೋದೆ ನೀನು

ಇಳೆಗಿಳಿದಿದೆ ಇರುಳ ನೆರಳು
ದನಿ ಕಳೆದಿದೆ ಹಕ್ಕಿಗೊರಳು
ಶಶಿ ಮೆರೆಸಿರೆ ತೋರು ಬೆರಳು

ಬರದೆ ಹೋದೆ ನೀನು
ಮರೆತು ಹೋದೆ ನೀನು

ಹಗಲಿರುಳಿನ ಈ ನಿರೀಕ್ಷೆ
ಈ ಯಾಚನೆ ಪ್ರಣಯ ಭಿಕ್ಷೆ
ಮೊರೆಯಾಲಿಸಿ ಕಳೆಯೆ ಶಿಕ್ಷೆ

ಬರದೆ ಹೋದೆ ನೀನು
ಮರೆತು ಹೋದೆ ನೀನು

***

10 thoughts on “ಬರದೆ ಹೋದೆ ನೀನು – ನಿಸಾರ್ ಅಹಮದ್”

  1. ತ್ರಿವೇಣಿಯವರೆ, ತುಂಬ ಸುಂದರವಾದ ಗೀತೆಯನ್ನು post ಮಾಡಿದ್ದೀರಿ.
    ಧನ್ಯವಾದಗಳು. ಇದನ್ನು ಓದುತ್ತಿದ್ದಂತೆ Keatsನ La Bella Dame sans merci ಹಾಗು ಬೇಂದ್ರೆಯವರ “ನೀ ಹೊರಟಿದ್ದೀಗ ಎಲ್ಲಿಗಿ..” ಕವನಗಳು ನೆನಪಾದವು.

  2. ಸುನಾಥರೇ,ಧನ್ಯವಾದಗಳು.

    ಜೋಶಿಯವರೇ, ದನಗಳು ನುಗ್ಗಲಿಲ್ಲ. ಇಲ್ಲೇ ಇವೆ 🙂

  3. ಈ ಹಾಡನ್ನು ನಾನು ಮೂದಲು ಕೇಳಿದ್ದು ಚಂದನ ವಾಹಿನಿಯಲ್ಲಿ ಬರುತ್ತಿದ್ದ ಭಾವಗೀತೆಯ ಕಾರ್ಯಕ್ರಮದಲ್ಲಿ ಕೇಳಿದ್ದು. ಬಹಳ ಸೊಗಸಾಗಿದೆ.

  4. SJ,

    ಮೊನ್ನೆ ತಾನೇ ಬೇಲಿ-ಗೀಲಿ ರಿಪೇರಿ ಅಂತ ಐದಾರು ದಿನ ನಮ್ಗೆಲ್ಲಾ ವನದೊಳಗೆ ಪ್ರವೇಶ ಕೊಟ್ಟಿರ್ಲಿಲ್ಲ.. ಈಗ ಮತ್ತೆ ದನ ಹೇಗೆ ನುಗ್ಗಿತು?

  5. ಶ್ರೀಲತಾ, ನಂದನಗಳೆಲ್ಲ ಈಗ ವಿಶ್ವ ಗೋ ಸಮ್ಮೇಳನದಲ್ಲಿ ಬ್ಯುಸಿಯಾಗಿವೆ. ಖುಸಿಯಾಗಿವೆ.:)

  6. ತ್ರಿವೇಣಿಯವರೆ,

    ಪದ್ಯ ತುಂಬಾ ಚೆನ್ನಾಗಿದೆ. ಈ ಹಾಡನ್ನು ಓದುತ್ತಾ ಇದ್ದ ಹಾಗೆ, ನಿಸಾರ್ ಅಹ್ಮದ್ ರವರದ್ದೇ ಆದ, “ಮತ್ತದೇ ಬೇಸರ, ಅದೆ ಸಂಜೆ, ಅದೆ ಏಕಾಂತ; ನಿನ್ನ ಜೊತೆಯಿಲ್ಲದೆ, ಮಾತಿಲ್ಲದೆ, ಮನ ವಿಭ್ರಾಂತ ..” ಹಾಡು ನೆನಪಿಗೆ ಬಂತು!

  7. ಹೌದು ಪ್ರದೀಪ್, ಕೆಲವು ದಿನಗಳ ಹಿಂದೆ “ಎದೆ ತುಂಬಿ ಹಾಡುವೆನು” ಕಾರ್ಯಕ್ರಮದಲ್ಲಿ ನಿಸಾರ್ ಅಹಮದ್ “ಮತ್ತದೇ ಬೇಸರ’ ಹಾಡಿನ ಪ್ರೇರಣೆ ಬಗ್ಗೆ ಮಾತಾಡಿದ್ದರು. ನೀವು ಕೇಳಿದಿರಾ?

  8. ಇಲ್ಲ, ನಾನು ಕೇಳಲಿಲ್ಲ. ಕಾರಣ ಇಷ್ಟೇ, ನಾನು ಟಿವಿ ಇಟ್ಟುಕೊಂಡಿಲ್ಲ 😉 ಕಳೆದ ವರ್ಷ ಭಾರತಕ್ಕೆ ಹೋದಾಗ ಒಂದೆರಡು ಬಾರಿ ಈ ಕಾರ್ಯಕ್ರಮವನ್ನು ನೋಡಿದ್ದೆ. ಕಾರ್ಯಕ್ರಮ ಚೆನ್ನಾಗಿದೆ; ಎಸ್ಪಿಬಿ ನಡೆಸಿಕೊಡುತ್ತಾರೆಯಲ್ಲವೆ?

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.