ಭಾರತದ ಮುಖ್ಯ ಭೂಮಿ ದೂರಾಗತೊಡಗಿತು. ಸರಿಯುತ್ತಿದ್ದ ಭಾರತವನ್ನು ಸುಮಾರು ಹೊತ್ತು ಸುಮಾರು ಹೊತ್ತು ವೀಕ್ಷಿಸಿದ ಚಂದ್ರು ನನ್ನತ್ತ ತಿರುಗಿ ನನ್ನ ಕೈಕುಲುಕಿದರು. ನಾನು ಅವರತ್ತ ತಿರುಗಿ ಏಕೆನ್ನುವಂತೆ ನೋಡಿದೆ.

“ಈ ದೇಶವನ್ನು ಒಂದು ಸಾರಿಯಾದರೂ ನಮ್ಮ ಜೀವಿತದಲ್ಲಿ ಬಿಟ್ಟು ಹೋಗುತ್ತಿದ್ದೆವಲ್ಲ” ಎಂದರು.

ನನಗೆ ಭಾರತದ ಭಯಾಜನಕ ಸ್ವರೂಪ ಒಮ್ಮೆಲೆ ಕಣ್ಣಿಗೆ ಕಟ್ಟಿತು. “ದರಿದ್ರ ದೇಶ. ನೋಡಿ ಹೇಗಿದೆ ಆ ಬಡತನ, ಆ ರಾಜಕಾರಣಿಗಳು. ಆ ಭ್ರಷ್ಟಾಚಾರ, ಆ ಜನಸಂಖ್ಯೆ, ಆ ಪರಿಸರ ನಾಶ ಸಾಕಪ್ಪ! ಈ ಶನಿಯನ್ನು ಬಿಟ್ಟು ದೂರ ಹೋಗುತ್ತಿರುವುದಕ್ಕೆ ನನಗೇನೋ ಸಂತೋಷವೇ ಆಗುತ್ತಿದೆ” ಎಂದೆ.

ಇಬ್ಬರೂ ಸೇರಿಕೊಂಡು ಭಾರತವನ್ನು ಮನಸ್ಸು ತೃಪ್ತಿಯಾಗುವರೆಗೂ ಬಯ್ದೆವು. ನಾವು ಇಷ್ಟೊಂದು ದೇಶಪ್ರೇಮವೇ ಇಲ್ಲದವರೆಂದು ಗೊತ್ತಾದುದು ಆಗಲೇ………..”

ಈ ಪುಸ್ತಕವನ್ನು ಈಗಾಗಲೇ ಬಹಳಷ್ಟು ಜನ ಓದಿ ಹಳೆಯದಾಗಿರಬೇಕು. ನನಗೆ ಈಗ ಸಿಕ್ಕಿತು. ಇದರಲ್ಲಿ ಬರುವ ಕೆಲವು ವಾಕ್ಯ, ಸಂಭಾಷಣೆಗಳನ್ನು ಗುಂಪಿನಲ್ಲಿ ಕುಳಿತು ಗಟ್ಟಿಯಾಗಿ ಓದಿ ನಗಬೇಕೆನ್ನಿಸುತ್ತದೆ. ಈ ಪುಸ್ತಕ ಓದುವಾಗ ಆಗಾಗ ನಗಲು ನನಗೆ ಕನಿಷ್ಟ ಒಂದೆರಡು ನಿಮಿಷಗಳು ಬೇಕಾಗುವುದರಿಂದ ಮುಗಿಸುವುದು ಬಹಳ ನಿಧಾನವಾಗಬಹುದು. ಅಷ್ಟರಲ್ಲಿ ಈ ಪುಸ್ತಕ ಯಾವುದಿರಬಹುದೆಂದು ಊಹಿಸುತ್ತೀರಾ? ಒಂದು ಸುಳಿವು – ಇದು ತಿಳಿಹಾಸ್ಯದ ಶೈಲಿಯಲ್ಲಿರುವ ಒಂದು ಪ್ರವಾಸ ಕಥನ.

ಉತ್ತರಿಸುವವರೂ ಉತ್ತರಿಸದವರೂ ಇಲ್ಲಿ ಸರಿ ಸಮಾನರು. ಯಾಕೆಂದರೆ ಯಾರಿಗೂ ಬಹುಮಾನವಿಲ್ಲ! 🙂

7 thoughts on “ಪುಸ್ತಕ, ಲೇಖಕರನ್ನು ಊಹಿಸುತ್ತೀರಾ?”

  1. ನಮಸ್ಕಾರ ತ್ರಿವೇಣಿ, ನಾನೂ ಸಹ ಈ ಪುಸ್ತಕವನ್ನು ಮೊನ್ನೆ ಮೊನ್ನೆ ಓದಿದೆ.ಹಾಗಾಗಿ ನೆನಪಿದೆ. ಪೂ.ಚಂ.ತೇ ಅವರ “ಅಲೆಮಾರಿಯ ಅಂಡಮಾನ ಮತ್ತು ಮಹಾನದಿ ನೈಲ್”.

  2. ಪೂರ್ಣಿಮಾ, ಸರಿಯಾಗಿದೆ ನಿಮ್ಮ ಉತ್ತರ. ಕೆಲವು ಸಾಲುಗಳಿಂದಲೇ ಪುಸ್ತಕ ಯಾವುದೆಂದು ಪತ್ತೆ ಮಾಡಿದ ನಿಮ್ಮ ನೆನಪಿನ ಶಕ್ತಿಗೆ ಅಭಿನಂದನೆಗಳು! 🙂

  3. ==ಪೂಚಂತೇ ಅವರ ಕಾದಂಬರಿ==
    ಭಲೆ! ಪೂರ್ಣಿಮಾರವರೆ!
    ನಿಮಗೆ ಅಭಿನಂದನೆಗಳು.

  4. ಅದ್ಯಾರ್ರೀ ಅದು, ನಮ್ ಭಾರ್‌ತಾನ ಬೈದಿರೋದು…ಮುಂಚೇ ಗೊತ್ತಾಗಿದ್ರೆ ಅವರ ಮನೆ ಮುಂದೆ ಧರಣೀ ಮಾಡ್ತಿದ್ವಲ್ಲಾ…

    ಬೇಕಂದೇ ಈ ವಾಕ್ಯಗಳನ್ನ ತಡವಾಗಿ ಹಾಕಿದ್ದೀರೋ ಏನೋ?

  5. ಕಾಳಣ್ಣಾ, ಇದ್ದದ್ದು ಇದ್ದ ಹಾಗೇ ಹೇಳಿದ್ರೆ ಯಾರ ಮನೆ ಮುಂದಾದ್ರೂ ಹೋಗಿ ಧರಣಿ ಮಾಡೋದಾದ್ರೂ ಯಾಕಣ್ಣಾ? 🙂

    ಅಲ್ಲದೆ ನಾನು ಆ paraದ ಕೆಲವು ಸಾಲುಗಳನ್ನು ಮಾತ್ರ ಬರೆದಿದ್ದೆ. ಅದರ ಮುಂದಿನ ಸಾಲುಗಳನ್ನು ಓದಿದರೆ ಮಾತ್ರ ಸರಿಯಾಗಿ ಅರ್ಥವಾಗುತ್ತದೆ .

  6. ಅವೆಲ್ಲಾ ಗೊತ್ತಿಲ್ಲಾ, ಪೂರ್ತೀ ಓದೋಷ್ಟ್ ಟೈಮ್ ಯಾರಿಗೈತೆ ಈ ಕಾಲ್ದಲ್ಲಿ? ಹೇಳೋದೇನಿದ್ರೂ ಮೊದಲೇ ಹೇಳ್ಬೇಕಪಾ! 🙂

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.