ಮೋಶೆ ಕೋಹೆನ್ ಪ್ರತಿ ವರ್ಷವೂ ತನ್ನ ಹೆಂಡತಿ ಸಾರಾ ಹಾಗು ಮಗಳು ಗೋಲ್ಡಾ ಜೊತೆಗೆ ಯೂರೋಪಿಗೆ ಪ್ರವಾಸಕ್ಕೆ ಹೋಗುತ್ತಾನೆ. ಸಾರಾಗೆ ಪೇಂಟಿಂಗ್ಸ್ ಗಳ ಹುಚ್ಚು. ಪ್ಯಾರಿಸ್ ಹಾಗು ವರ್ಸಲೇಸ್ ಗಳ ಮ್ಯೂಜಿಯಮ್ ಗಳಿಗೆ ಅವಳು ಭೇಟಿ ಕೊಡುವದನ್ನು ತಪ್ಪಿಸುವದಿಲ್ಲ. ಮೋಶೆಗೆ ಲಲಿತ ಕಲೆಗಳೆಂದರೆ ತಾತ್ಸಾರ. MOSSADದ ಎರಡನೆಯ ಮುಖ್ಯಸ್ಥನಾದ ಅವನಿಗೆ ಲಲಿತ ಕಲೆಗಳು ಲಲಿತೆಯರ ವಿಭಾಗವೆನ್ನುವ ಮನೋಭಾವ. ಹೆಂಡತಿ ಮ್ಯೂಜಿಯಮ್ ಗೆ ಹೋದ ತಕ್ಷಣ ಮೋಶೆ ಕ್ಯಾಬರೆಗೆ ಓಡುತ್ತಾನೆ.
ಫ್ರೆಂಚ ಕ್ಯಾಬರೆ ಎಂದರೆ ಅವನಿಗೆ ಇನ್ನಿಲ್ಲದ ಮೋಹ. ಕೇವಲ ಹತ್ತು ವರ್ಷದ ಗೋಲ್ಡಾ ತಾಯಿಯನ್ನು ಹಿಂಬಾಲಿಸುತ್ತಾಳೆ.

ಮೋಶೆ ನಗ್ನ ಫ್ರೆಂಚ್ ಸುಂದರಿಯರ ಸೌಂದರ್ಯವನ್ನು ಕಣ್ಣುಗಳಿಂದ ಹೀರುತ್ತ, ಶಾಂಪೇನ್ ಆಸ್ವಾದಿಸುತ್ತಿದ್ದಾನೆ. ಅವನ ಸೆಲ್ ಫೋನ್ ಧ್ವನಿ ಮಾಡಿತು. ಮೊನಿಟರ್ ದಲ್ಲಿ ಸಾರಾಳ ಹೆಸರು ಕಂಡಿತು.
“ಥತ್ತೇರಿ,…….ಸೂಪಿನಲ್ಲಿ ನೊಣ!”, ಎಂದು ಗೊಣಗುತ್ತ ಮೋಶೆ ಸೆಲ್ಲಿನಲ್ಲಿ ವ್ಹಿಸ್ಪರಿಸಿದಃ “ಪ್ರಿಯೆ, ನಾನೀಗ ಫ್ರೆಂಚ್ ಗುಪ್ತಚಾರ ಇಲಾಖೆಯ ಮುಖ್ಯಸ್ಥನೊಂದಿಗೆ ಮಹತ್ವದ ಮಾತುಕತೆಯಲ್ಲಿದ್ದೇನೆ. ಇನ್ನೊಂದು ಗಂಟೆಯ ಬಳಿಕ ಹೊಟೆಲ್ಲಿಗೇ ಬರುವೆ.”
“ಈಡಿಯಟ್! ಗೋಲ್ಡಾ ಕಾಣೆಯಾಗಿದ್ದಾಳೆ. ತಕ್ಷಣವೇ ಮ್ಯೂಜಿಯಮ್ಮಿಗೆ ಬಾ.”
ಸೆಲ್ ಫೋನ್ ಬಂದಾಯಿತು. ಮೋಶೆಯ ಮುಖದಲ್ಲಿ ಬೆವರಿಳಿಯಿತು. ಹೊರಗೋಡಿ ಬಂದವನೇ, ಟ್ಯಾಕ್ಸಿಯನ್ನು ಮ್ಯೂಜಿಯಮ್ ಕಡೆಗೆ ಧಾವಿಸಲು ಹೇಳಿದ. ಮ್ಯೂಜಿಯಮ್ ಗೇಟಿನಲ್ಲಿ ಅಳುತ್ತಿದ್ದ ಸಾರಾ ನಿಂತಿಕೊಂಡಿದ್ದಳು. ಮೋಶೆ ಸಾರಾಳ ಹತ್ತಿರ ಬರುತ್ತಿದ್ದಂತೆಯೆ, ಅವನ ಸೆಲ್ ಫೋನ್ ಮತ್ತೆ ಗುಣಗುಣಿಸಿತು.” ಗಾಬರಿಯಾಗಬೇಡ, ಮಿಸ್ಟರ್ ಮೋಶೆ! ಗೋಲ್ಡಾ ನಮ್ಮ ಬಳಿ ಸುರಕ್ಷಿತವಾಗಿದ್ದಾಳೆ. ನೀನು ಫ್ರೆಂಚ್ ಪೋಲೀಸರನ್ನಾಗಲಿ ಅಥವಾ ಗುಪ್ತಚಾರ ಇಲಾಖೆಯನ್ನಾಗಲಿ ಸಂಪರ್ಕಿಸುವ ಮೂರ್ಖತನ ಮಾಡಬೇಡ. ನಿನ್ನ ಹೊಟೆಲ್ಲಿಗೆ ಮರಳು. ಅಲ್ಲಿ ನಿನಗೆ ಹೆಚ್ಚಿನ ವಿವರಗಳು ದೊರೆಯುವವು.”

ಹೊಟೆಲ್ಲಿಗೆ ಮರಳಿದ ಮೋಶೆಗೆ ರಿಸೆಪ್ಶನ್ನಿನಲ್ಲಿ ಒಂದು ಸಂದೇಶ ಕಾದಿತ್ತುಃ
“ಮೋಶೆ, ನಿನ್ನ ಮೂರ್ಖ ಗುಪ್ತಚಾರ ಪಡೆ, ದುಬೈದಿಂದ ‘ಪ್ರವಲ್ಲಿಕಾ’ ಎನ್ನುವ ಹೆಸರಿನ ಒಬ್ಬ ಇಂಡಿಯನ್ ಹುಡುಗಿಯನ್ನು ವಿನಾಕಾರಣವಾಗಿ ಅಪಹರಿಸಿದ್ದಾರೆ. ಅವಳನ್ನು ತಕ್ಷಣವೇ ಪೇಶಾವರಕ್ಕೆ ಕರೆ ತಂದು ಪಾಕಿಸ್ತಾನದ ISI HQSಗೆ ಒಪ್ಪಿಸಬೇಕು. ಈ ದಿನ ರಾತ್ರಿ ಹತ್ತು ಗಂಟೆಯವರೆಗೆ ಇಂಡಿಯನ್ ಹುಡುಗಿ ಪೇಶಾವರದಲ್ಲಿ ಕಾಣದಿದ್ದರೆ, ನಿನ್ನ ಮುದ್ದು ಮಗಳ ಮೇಲೆ ಹಿಂಸೆ ಪ್ರಾರಂಭವಾಗುವದು. ನೀನು ಜಾಣನಾದರೆ ನಿನಗೆ ನಿನ್ನ ಮಗಳು ಮರಳಿ ದೊರೆಯುವಳು. ಖುದಾ ಹಾಫೀಜ್!
………………………………………….
ಬ್ರಾಹ್ಮೀ ಮುಹೂರ್ತದಲ್ಲಿ ಎದ್ದ ಶಾಸ್ತ್ರಿಗಳಿಗೆ ಹರಿದಾಸರು ಕಾಣಲಿಲ್ಲ. ಶೌಚಕ್ಕೆ ಹೋಗಿರಬಹುದು ಎಂದುಕೊಂಡರು. ಸಂಜೆಯಾದರೂ ಅವರ ಸುಳಿವಿಲ್ಲ. ತಂಬೂರಿಯೇನೋ ಅಲ್ಲಿಯೇ ಇದೆ. ಅದರ ಬುರುಡೆಯ ಬಿರಟೆಯೊಂದು ಬಿಚ್ಚಿದ್ದು ಕಂಡಿತು. ಅದನ್ನು ಸರಿಪಡಿಸಿ ತಂತಿಗಳ ಮೇಲೆ ಕೈ ಎಳೆದರು. ಸುಶ್ರಾವ್ಯ ಆಲಾಪವಾಯಿತು. ಹರಿದಾಸರು ನಾರದ ಮುನಿಗಳೇ ಎನ್ನುವದರಲ್ಲಿ ಶಾಸ್ತ್ರಿಗಳಿಗೆ ಏನೂ ಸಂಶಯ ಉಳಿಯಲಿಲ್ಲ. ಎಲ್ಲಿಂದಲೋ ಪ್ರತ್ಯಕ್ಷತರಾಗಿ, ಈಗ ಎಲ್ಲಿಯೋ ಮಾಯವಾಗಬೇಕಾದರೆ, ಇದು ತ್ರಿಲೋಕಸಂಚಾರಿಯಾದ ನಾರದ ಮಹರ್ಷಿಗಳಿಗೆ ಮಾತ್ರ ಸಾಧ್ಯ. ತಮ್ಮ ನೆನಪಿಗಾಗಿ ಈ ತಂಬೂರಿಯನ್ನು ಬಿಟ್ಟು ಹೋಗಿರಬೇಕು! ಶಾಸ್ತ್ರಿಗಳು ತಂಬೂರಿಗೆ ಸಾಷ್ಟಾಂಗ ಪ್ರಣಾಮ ಹಾಕಿದರು.
……………………………………………..
ಪೇಶಾವರದಲ್ಲಿ ಇಳಿದ ಭರತಖಾನ ಅಲ್ಲಿಯ ISI HQSಗೆ ತೆರಳಿದ. ಅವನ ಬಿಳಿಯ ಪಾರಿವಾಳ ಅಲ್ಲಿಯೇ ಮುದುಡಿಕೊಂಡು ನಿಂತಿತ್ತು. HQSದ ಅಧಿಕಾರಿ, “ನಿಮಗಾಗಿ ಹೆಲಿಕಾಪ್ಟರ್ ಸಿದ್ಧವಿದೆ. ಓಸಾಮಾ ಅಫಘಾನದ ಗವಿಯಲ್ಲಿ ತಮಗಾಗಿ ಕಾಯುತ್ತಿದ್ದಾರೆ” ಏಂದು ಹೇಳಿದ. ಪ್ರವಲ್ಲಿಕಾಳಿಗೆ ಬಲವಂತವಾಗಿ ಹಿಮದುಡುಗೆ ತೊಡಿಸಿ, ಹೆಲಿಕಾಪ್ಟರನಲ್ಲಿ ಹತ್ತಿಸಿದ ಭರತಖಾನ ಅಫಘಾನದ ಕಡೆಗೆ ಹಾರಿದ.

ಒಂದರ್ಧ ಗಂಟೆಯಲ್ಲಿಯೇ ಅಕಾಲಿಕ ಹಿಮವರ್ಷ ಹಾಗು ಭೀಕರ ಬಿರುಗಾಳಿ ಪ್ರಾರಂಭವಾಯಿತು. ಈ ಋತುವಿನಲ್ಲಿ ಹೀಗಾಗಬಾರದು. ಭರತಖಾನನಿಗೆ ಹೆಲಿಕಾಪ್ಟರ್ ನಿಯಂತ್ರಣ ಬಹಳ ಕಷ್ಟವಾಯಿತು. ತಾನು ಎಲ್ಲಿ ಹೋಗುತ್ತಿದ್ದೇನೆ ಎನ್ನುವದೇ ಅವನಿಗೆ ತಿಳಿಯದಾಯಿತು. ಕೊನೆಗೊಮ್ಮೆ ಹೆಲಿಕಾಪ್ಟರ್ ಗಿರಕಿ ಹೊಡೆಯುತ್ತ ಹಿಮಬಂಡೆಯೊಂದಕ್ಕೆ ಅಪ್ಪಳಿಸಿತು. ಭರತಖಾನನಿಗೆ ತನ್ನ ಕೈಕಾಲುಗಳನ್ನು ಚಲಿಸಲೂ ಆಗಲಿಲ್ಲ. ಭೂಮಿ ಹಾಗು ಆಕಾಶ ತುಂಬಿದ ಬಿಳಿ ಹಿಮ ಬಿಟ್ಟು ಮತ್ತೇನೂ ಕಾಣದು. ಈ ಹಿಮದ ಮಧ್ಯೆ ಓರ್ವ ದೇವತೆ ಪ್ರತ್ಯಕ್ಷಳಾದಂತೆ ಅವನಿಗೆ ತೋರಿತು. ತನ್ನ ಮರಗಟ್ಟಿದ ದೇಹವನ್ನು ಅವಳೇ ಎಳೆಯುತ್ತ ಸಾಗಿಸುತ್ತಿರುವಂತೆ ಅವನಿಗೆ ಭಾಸವಾಯಿತು. ತಾನು ಚಿಕ್ಕವನಿದ್ದಾಗ ತನ್ನ ತಂದೆ ಹೇಳುತ್ತಿದ್ದ ಸಂಸ್ಕೃತ ಶ್ಲೋಕಗಳು ಅವ ಮನಸ್ಸಿನಲ್ಲಿ ಕೇಳತೊಡಗಿದವುಃ “ಯಾ ದೇವಿ ಸರ್ವಭೂತೇಷು ಚೈತನ್ಯರೂಪೇಣ ಸಂಸ್ಥಿತಾ, ನಮಸ್ತಸ್ಮೈ, ನಮಸ್ತಸ್ಮೈ, ನಮಸ್ತಸ್ಮೈ ನಮೋ ನಮಹ”.
…………………………………………………
ಹೀಗೆ ಎಷ್ಟು ಹೊತ್ತು ಕಳೆಯಿತೊ ಅವನಿಗೆ ತಿಳಿಯದು. ಎಚ್ಚರವಾದಾಗ, ಎಣ್ಣೆ ದೀಪದ ಮಂದ ಬೆಳಕಿನಲ್ಲಿ ಶಾಂತ ಮುಖದ ವೃದ್ಧರೊಬ್ಬರು ಕಂಡರು. ಅವರ ಪಕ್ಕದಲ್ಲಿ ಪ್ರವಲ್ಲಿಕಾ.
“ಎಚ್ಚರವಾಯಿತೆ ಮಗೂ? ಸ್ವಲ್ಪ ಬಿಸಿ ಗಂಜಿ ಕುಡಿ”, ವೃದ್ಧರು ಮೃದುವಾಗಿ ನುಡಿದರು.
“ನೀವಾರು? ಇದು ಯಾವ ಜಾಗ?”,ಭರತಖಾನ ಕೇಳಿದ.
“ಮಗು, ನೀನು ಪಾಕಿಸ್ತಾನದ ಹಿಂಗ್ಲಾಜ ಹಳ್ಳಿಯಲ್ಲಿರುವ ಮಾತಾ ಹಿಂಗ್ಲಜಾ ದೇವಿಯ ಗುಡಿಯಲ್ಲಿರುವೆ. ನೀನು ಎಚ್ಚರ ತಪ್ಪಿ ಬಿದ್ದಾಗ, ಈ ಹುಡುಗಿ ನಿನ್ನನ್ನು ನಾಲ್ಕು ಕಿಲೋಮೀಟರ್ ದೂರದವರೆಗೆ ಎಳೆಯುತ್ತ, ಇಲ್ಲಿಗೆ ತಂದಿದ್ದಾಳೆ. ನಿನಗೆ ಎರಡು ದಿನಗಳವರೆಗೆ ಎಚ್ಚರವಿರಲಿಲ್ಲ.”,ವೃದ್ಧರು ನುಡಿದರು.
“ಹಾಗಾದರೆ ತಾನು ಕನಸಿನಲ್ಲಿ ಕಂಡ ದೇವಿ ಪ್ರವಲ್ಲಿಕಾಳೆ? ನನ್ನನ್ನು ಬಿಟ್ಟು ಓಡಿ ಹೋಗದೆ, ನನಗೆ ಆರೈಕೆ ಮಾಡಿದವಳು ಪ್ರವಲ್ಲಿಕಾಳೆ?”, ಭರತಖಾನ ಅಚಚರಿಪಟ್ಟ. ತಂದೆ ತನ್ನೆದುರು ನುಡಿಯುತ್ತಿದ್ದ ಶ್ಲೋಕಗಳು ನೆನಪಾದವುಃ “ಯಾ ದೇವಿ ಸರ್ವಭೂತೇಷು ಕ್ಷಮಾರೂಪೇಣ ಸಂಸ್ಥಿತಾ, ನಮಸ್ತಸ್ಮೈ, ನಮಸ್ತಸ್ಮೈ, ನಮಸ್ತಸ್ಮೈ ನಮೋ ನಮಹ”.
ಭರತಖಾನ ಎದ್ದು ನಿಂತ. ವೃದ್ಧರ ಕಾಲಿಗೆರಗಿ, “ನನ್ನನ್ನು ಕ್ಷಮಿಸಿರಿ; ನಾನೊಬ್ಬ ಭಯೋತ್ಪಾದಕ”, ಎಂದು ನುಡಿದ.
“ಕ್ಷಮಿಸಲು ನಾನಾರಪ್ಪ, ಪ್ರವಲ್ಲಿಕಾಳೆ ನಿನ್ನನ್ನು ಕ್ಷಮಿಸಿದ್ದಾಳಲ್ಲ!”, ಎಂದರು ವೃದ್ಧರು.
“ಪ್ರವಲ್ಲಿಕಾ, ಮೊದಲು ನಿನ್ನನ್ನು ಸುರಕ್ಷಿತವಾಗಿ ನಿಮ್ಮೂರಿಗೆ ಮುಟ್ಟಿಸುವೆ. ಆ ಬಳಿಕ ನಾನು ಅಫಘಾನಿಸ್ತಾನಕ್ಕೆ ಹೋಗುವೆ”, ಭರತಖಾನ ಹೇಳಿದ.
………………………………..
ಓಸಾಮಾ ಬಿನ್ ಲಾಡೆನ್ ಅಚ್ಚರಿಯಿಂದ ನೋಡುತ್ತಿದ್ದಾನೆ. ಭರತಖಾನ ತನ್ನ ಪಿಸ್ತೂಲನ್ನು ಓಸಾಮಾನ ಎದುರಿಗೆ ಇಟ್ಟು, “ವಲೀಸಾಬ್, ನನ್ನ ಮನಸ್ಸು ಬದಲಾಗಿದೆ. ನಾನು ಭಯೋತ್ಪಾದನೆಯನ್ನು ಬಿಟ್ಟು ಬಿಡುತ್ತಿದ್ದೇನೆ”, ಎಂದು ಹೇಳುತ್ತಿದ್ದಾನೆ.
“ಎಲ್ಲಿ ಹೋಗುತ್ತಿ?”, ಓಸಾಮಾ ಕೇಳಿದ.
“ಇಂಡಿಯನ್ ಆರ್ಮಿಗೆ ಸರೆಂಡರ್ ಆಗುತ್ತೇನೆ.”, ಭರತಖಾನ ದೃಢವಾದ ದನಿಯಲ್ಲಿ ಉತ್ತರಿಸಿದ.
ಓಸಾಮಾ ನಿಬ್ಬೆರಗಾದ, ಸಿಂಹದ ಗವಿಯಲ್ಲಿ ನಿಂತುಕೊಂಡೆ, ಸಿಂಹದ ಹಲ್ಲೆಣಿಸುವ ಧೈರ್ಯಕ್ಕೆ! ಅದಕ್ಕೆ ಅಲ್ಲವೆ ಈ ಬಚ್ಚಾ ತನಗೆ ಅಷ್ಟು ಪ್ರೀತಿಯವನಾದದ್ದು, ತನ್ನ ಮಾನಸಪುತ್ರನಾದದ್ದು. ಆದರೆ ಈಗ ತನಗೇ ದ್ರೋಹ ಬಗೆಯುತ್ತಿದ್ದಾನೆ. ಅಪ್ಪನನ್ನೇ ಬಾಂಬು ಹಾಕಿ ಉಡಾಯಿಸಿದವನಿಗೆ ಚಿಕ್ಕಪ್ಪನ ಮೇಲೆಂತಹ ಪ್ರೀತಿ?
ಓಸಾಮಾ ವ್ಯಗ್ರನಾದ. ಅವನ ಬೆರಳು ಪಿಸ್ತೂಲಿನ ಸೇಫ್ಟಿ ಕ್ಯಾಚನ್ನು ಹಿಂದೆ ಸರಿಸಿತು. ಒಡೆಯನ ಅಪ್ಪಣೆಯಾದರೆ ಭರತಖಾನನನ್ನು ಕೊಚ್ಚಿಹಾಕಲು, ಓಸಾಮಾನ ಅನುಯಾಯಿಗಳು ಸಿದ್ಧರಾಗಿ ನಿಂತಿದ್ದರು.
ಭರತಖಾನನ ಕಡೆಗೆ ಬೆನ್ನು ಮಾಡಿದ ಓಸಾಮಾ ತನ್ನ ಅನುಚರರಿಗೆ ಅಪ್ಪಣೆ ಮಾಡಿದಃ”ಇವನನ್ನು ಭಾರತದ ಗಡಿಯಲ್ಲಿ ಸುರಕ್ಷಿತವಾಗಿ ಇಳಿಸಿ ಬನ್ನಿರಿ”.
ಅವನ ಜೀವನದಲ್ಲಿಯೆ ಮೊದಲ ಬಾರಿಗೆ ಒಂದು ಹನಿ ನೀರು ಓಸಾಮಾನ ಕಣ್ಣಿನಿಂದ ಜಾರಿತು.

One thought on “ಭಾಗ – 16”

  1. ರಾತ್ರಿ ಎಂಟರ ಸಮಯ. ಹುಡುಗಿಯರ ಹಾಸ್ಟೆಲ್ಲಿನಲ್ಲಿ, ಮಾಲಾ ಟಿ.ವಿ. ನೋಡುತ್ತ ಕುಳಿತಿದ್ದಳು. ಸಮಾಚಾರ ಪ್ರಾರಂಭವಾಯಿತುಃ
    “ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಯೋಧರೊಂದಿಗೆ ನಡೆದ ಎನ್ ಕೌಂಟರ್ ದಲ್ಲಿ ಭರತಖಾನ ಎನ್ನುವ ಕುಖ್ಯಾತ ಭಯೋತ್ಪಾದಕ ಕೊಲ್ಲಲ್ಪಟ್ಟಿದ್ದಾನೆ.” ಎಂದು ಸುದ್ದಿ ವಾಚಕರು ಹೇಳುತ್ತಿದ್ದರು.
    ಮಾಲಾ ಒಮ್ಮೆಲೆ ಎಲ್ಲ ಹುಡುಗಿಯರನ್ನು ಕೂಗಿ ಕರೆದಳು. ಪ್ರವಲ್ಲಿಕಾ, ತ್ರಿವೇಣಿ, ಜ್ಯೋತಿ, ಮೀರಾ ಎಲ್ಲರೂ ಓಡಿ ಬಂದರು.
    “ಪ್ರವಲ್ಲಿಕಾಳನ್ನು ಅಪಹರಿಸಿದ್ದ ಭರತಖಾನನನ್ನು ನಮ್ಮ ಸೈನಿಕರು ಗುಂಡು ಹೊಡೆದು ಕೊಂದಿದ್ದಾರೆ”, ಮಾಲಾ ಆವೇಶದಿಂದ ಹೇಳಿದಳು.
    “ಸರಿಯಾದ ಶಾಸ್ತಿ ಆಯಿತು ಆ ಕೀಚಕನಿಗೆ”, ಜ್ಯೋತಿ ಆಕ್ರೋಶದಿಂದ ನುಡಿದಳು.
    ಯಾಕೊ ಪ್ರವಲ್ಲಿಕಾಳ ಕಣ್ಣಾಲಿ ತುಂಬಿದವು. ಹೊರಳಿ ನಿಂತು ಗೆಳೆತಿಯಿಯರಿಗೆ ಕಾಣದಂತೆ ಕಣ್ಣೊರೆಸಿಕೊಂಡಳು.
    ಆ ರಾತ್ರಿ ಅವಳಿಗೆ ನಿದ್ರೆ ಬರಲಿಲ್ಲ. ಕಣ್ಣೆದುರಿಗೆ ಭರತಖಾನನೆ ಬರುತ್ತಿದ್ದ. ಎತ್ತರದ ನಿಲುವಿನ, ಚೂಪುಗಲ್ಲದ, ದಟ್ಟ ಕೂದಲಿನ ಸುಂದರಾಂಗ. ತನ್ನ ನೆಚ್ಚಿನ ಹೀರೊ ಸುದೀಪನನ್ನೆ ಹೋಲುತ್ತಿದ್ದ. ಮೂಗು ಮಾತ್ರ ‘ಅಣ್ಣಾವ್ರ’ ಮೂಗಿನಂತೇ ನಿಡಿದಾಗಿತ್ತು. ‘ಫನಾ’ದಲ್ಲಿಯ ಆಮೀರಖಾನನಂತೆ ಹೋತದ ಗಡ್ಡ ಬೇರೆ.

    ದ್ವೇಷ ಮತ್ತು ಪ್ರೀತಿ ಇವುಗಳನ್ನು ಪ್ರಚೋದಿಸುವ ಕೇಂದ್ರಗಳು ಮಿದುಳಿನಲ್ಲಿ ಒಂದೇ ಕಡೆಗೆ ಇರುತ್ತವೆ ಎಂದು ನರಶಾಸ್ತ್ರಪಂಡಿತರು ಹೇಳುತ್ತಾರೆ. ಪಾಕಿಸ್ತಾನದಿಂದ ಬೆಂಗಳೂರಿಗೆ ಕರೆತರುವಾಗ ಭರತಖಾನ ತನ್ನನ್ನು ಪ್ರೀತಿ ಹಾಗು ಗೌರವದಿಂದ ನೋಡಿಕೊಂಡ ರೀತಿಯಿಂದ ಪ್ರವಲ್ಲಿಕಾಳಿಗೆ ಅವನ ಬಗೆಗಿನ ದ್ವೇಷ ಮಾಯವಾಗಿ ಅಲ್ಲಿ ಪ್ರೀತಿ ಚಿಗುರಿತ್ತು.
    ………………………………..
    ಸಮಾಚಾರ ತಿಳಿಯುತ್ತಿದ್ದಂತೆ ಓಸಾಮಾ ಶೋಕತಪ್ತನಾದ. “ಭರತಖಾನನಿಂದ ತಿಳಿಯಬೇಕಾದ್ದನ್ನೆಲ್ಲ ತಿಳಿದುಕೊಂಡು ಆ ಬಳಿಕ ಅವನಿಗೆ ಚಿತ್ರಹಿಂಸೆ ಕೊಟ್ಟು ಕೊಂದಿದ್ದಾರೆ ಈ ನೀಚ ಇಂಡಿಯನ್ನರು. ಈಗ ಎನ್ ಕೌಂಟರ್ ದ ನಾಟಕ ಆಡುತ್ತಿದ್ದಾರೆ” ಎಂದುಕೊಂಡ. ಅವನಿಗೆ ಮತ್ತೊಂದು ಯೋಚನೆಯೂ ಹೊಳೆಯಿತು. ಶರಣು ಬಂದ ವೈರಿಯನ್ನು ಕೊಂದಂತೆ ನಾಟಕವಾಡಿ, ಅದಕ್ಕೆ ಪ್ರಚಾರ ಕೊಟ್ಟು, ಆ ಬಳಿಕ ಪ್ಲ್ಯಾಸ್ಟಿಕ್ ಸರ್ಜರಿಯ ಮೂಲಕ ಆ ವ್ಯಕ್ತಿಯ ರೂಪಾಂತರ ಮಾಡಿ ಗುಪ್ತಚಾರನಂತೆ ಉಪಯೋಗಿಸುವದು ಎರಡನೆಯ ಜಾಗತಿಕ ಯುದ್ಧಕಾಲದಿಂದಲೂ ಉಪಯೋಗದಲ್ಲಿರುವ ಒಂದು ತಂತ್ರ. ಭರತಖಾನನಿಗೂ ಹಾಗೆಯೇ ಆಗಿರಬಹುದೆ? “ಆಯಿತು, ಎಲ್ಲಾದರೂ ಸುಖವಾಗಿರಲಿ ಹಾಳಾದವನು” ಎಂದುಕೊಂಡ ಓಸಾಮಾ ಮಂಡಿಯೂರಿ ಅಲ್ಲಾನಿಗೆ ಪ್ರಾರ್ಥನೆ ಮಾಡಿದ.
    ……………………………………………….
    ಬೆಂಗಳೂರಿನ ಹವ್ಯಾಸಿ ನಾಟ್ಯಸಂಘದವರು ‘ಯವನಿಕಾ’ದಲ್ಲಿ Parting Shot’ ಅನ್ನುವ ಇಂಗ್ಲಿಶ್ ನಾಟಕವಾಡುತ್ತಿದ್ದಾರೆ. ಪ್ರವಲ್ಲಿಕಾಳೆ ಹೀರೋಯಿನ್ ನಾಟಕದ ಕೊನೆಗೆ ಪ್ರಚಂಡ ಕರತಾಡನ.
    ಪ್ರೇಕ್ಷಾಗೃಹ ಖಾಲಿಯಾದ ನಂತರ ಮುಂದಿನ ಸಾಲಿನಲ್ಲಿ ಕುಳಿತ ವ್ಯಕ್ತಿಯೊಬ್ಬ ರಂಗದ ಮೇಲೆ ಬಂದ. ಅಚ್ಚುಕಟ್ಟಾಗಿ ಶೇವ್ ಮಾಡಿದ ದುಂಡು ಮುಖ, ಮಂಡ ಮೂಗು, ಕ್ಲೋಜ್ ಕಟ್ ಕ್ರಾಪು. ನೀಲಿ ಸಫಾರಿ ಧರಿಸಿದ್ದಾನೆ.
    ಆತ ಪ್ರವಲ್ಲಿಕಾಳಿಗೆ ನಮಸ್ಕಾರ ಮಾಡಿ “ತುಂಬಾ ಚೆನ್ನಾಗಿ ಅಭಿನಯಿಸುತ್ತೀರಿ” ಎಂದು ಹೇಳಿ ತಿರುಗಿ ನಡೆದ.
    ಆತ ಎರಡು ಹೆಜ್ಜೆ ಇಟ್ಟಿರಲಿಲ್ಲ, ಪ್ರವಲ್ಲಿಕಾ ಕೂಗಿದಳುಃ “ಭರತಖಾನ್!”
    ಆತ ಆಶ್ಚರ್ಯದಿಂದ ಹೊರಳಿ, ಹೇಳಿದಃ ” ನೀವು ತಪ್ಪು ತಿಳಿದಿರಬೇಕು; ನನ್ನ ಹೆಸರು ಹರಿದಾಸ.”
    ಪ್ರವಲ್ಲಿಕಾ ನಕ್ಕಳು. “ಭರತಖಾನ, ನೀನು ಯಾರನ್ನಾದರೂ ಮೋಸಗೊಳಿಸಬಹುದು. ಆದರೆ ನಿನ್ನ ಪ್ರಿಯತಮೆಯನ್ನು ಮೋಸಗೊಳಿಸಲಾರೆ.”
    ಆತ ಗಲಿಬಿಲಿಗೊಂಡು ಅವಳ ನಗುತ್ತಿರುವ ಕಣ್ಣುಗಳನ್ನೇ ನೋಡತೊಡಗಿದ.
    ಪ್ರವಲ್ಲಿಕಾ ತನ್ನೆರಡೂ ತೋಳುಗಳನ್ನು ಚಾಚಿ, “ನಮ್ಮ ನಿಕಾ ಎಲ್ಲಿ? ದುಬೈ ಅಥವಾ ಅಫಘಾನಿಸ್ತಾನ?” ಎಂದು ನಕ್ಕಳು.
    ಆತ ಸರ್ರನೆ ಅವಳ ತೋಳುಗಳಲ್ಲಿ ಸೇರಿಕೊಂಡ.
    “ಇಲ್ಲಿಯೇ, ಈ ರಂಗದ ಮೇಲೆ” ಎನ್ನುತ್ತ ಆತ ತನ್ನ ಬಿಳಿ ಪಾರಿವಾಳಕ್ಕೆ ಮುತ್ತು ಕೊಟ್ಟ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.