ರಾತ್ರಿ ಎಂಟರ ಸಮಯ. ಹುಡುಗಿಯರ ಹಾಸ್ಟೆಲ್ಲಿನಲ್ಲಿ, ಮಾಲಾ ಟಿ.ವಿ. ನೋಡುತ್ತ ಕುಳಿತಿದ್ದಳು. ಸಮಾಚಾರ ಪ್ರಾರಂಭವಾಯಿತು. “ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಯೋಧರೊಂದಿಗೆ ನಡೆದ ಎನ್ ಕೌಂಟರ್ ದಲ್ಲಿ ಭರತಖಾನ ಎನ್ನುವ ಕುಖ್ಯಾತ ಭಯೋತ್ಪಾದಕ ಕೊಲ್ಲಲ್ಪಟ್ಟಿದ್ದಾನೆ.” ಎಂದು ಸುದ್ದಿ ವಾಚಕರು ಹೇಳುತ್ತಿದ್ದರು. ಮಾಲಾ ಒಮ್ಮೆಲೆ ಎಲ್ಲ ಹುಡುಗಿಯರನ್ನು ಕೂಗಿ ಕರೆದಳು. ಪ್ರವಲ್ಲಿಕಾ, ತ್ರಿವೇಣಿ, ಜ್ಯೋತಿ, ಮೀರಾ ಎಲ್ಲರೂ ಓಡಿ ಬಂದರು.
“ಪ್ರವಲ್ಲಿಕಾಳನ್ನು ಅಪಹರಿಸಿದ್ದ ಭರತಖಾನನನ್ನು ನಮ್ಮ ಸೈನಿಕರು ಗುಂಡು ಹೊಡೆದು ಕೊಂದಿದ್ದಾರೆ”, ಮಾಲಾ ಆವೇಶದಿಂದ ಹೇಳಿದಳು.
“ಸರಿಯಾದ ಶಾಸ್ತಿ ಆಯಿತು ಆ ಕೀಚಕನಿಗೆ”, ಜ್ಯೋತಿ ಆಕ್ರೋಶದಿಂದ ನುಡಿದಳು. ಯಾಕೊ ಪ್ರವಲ್ಲಿಕಾಳ ಕಣ್ಣಾಲಿ ತುಂಬಿದವು. ಹೊರಳಿ ನಿಂತು ಗೆಳೆತಿಯಿಯರಿಗೆ ಕಾಣದಂತೆ ಕಣ್ಣೊರೆಸಿಕೊಂಡಳು.
ಆ ರಾತ್ರಿ ಅವಳಿಗೆ ನಿದ್ರೆ ಬರಲಿಲ್ಲ. ಕಣ್ಣೆದುರಿಗೆ ಭರತಖಾನನೆ ಬರುತ್ತಿದ್ದ. ಎತ್ತರದ ನಿಲುವಿನ, ಚೂಪುಗಲ್ಲದ, ದಟ್ಟ ಕೂದಲಿನ ಸುಂದರಾಂಗ. ತನ್ನ ನೆಚ್ಚಿನ ಹೀರೊ ಸುದೀಪನನ್ನೆ ಹೋಲುತ್ತಿದ್ದ. ಮೂಗು ಮಾತ್ರ ‘ಅಣ್ಣಾವ್ರ’ ಮೂಗಿನಂತೇ ನಿಡಿದಾಗಿತ್ತು. ‘ಫನಾ’ದಲ್ಲಿಯ ಆಮೀರಖಾನನಂತೆ ಹೋತದ ಗಡ್ಡ ಬೇರೆ.

ದ್ವೇಷ ಮತ್ತು ಪ್ರೀತಿ ಇವುಗಳನ್ನು ಪ್ರಚೋದಿಸುವ ಕೇಂದ್ರಗಳು ಮಿದುಳಿನಲ್ಲಿ ಒಂದೇ ಕಡೆಗೆ ಇರುತ್ತವೆ ಎಂದು ನರಶಾಸ್ತ್ರಪಂಡಿತರು ಹೇಳುತ್ತಾರೆ. ಪಾಕಿಸ್ತಾನದಿಂದ ಬೆಂಗಳೂರಿಗೆ ಕರೆತರುವಾಗ ಭರತಖಾನ ತನ್ನನ್ನು ಪ್ರೀತಿ ಹಾಗು ಗೌರವದಿಂದ ನೋಡಿಕೊಂಡ ರೀತಿಯಿಂದ ಪ್ರವಲ್ಲಿಕಾಳಿಗೆ ಅವನ ಬಗೆಗಿನ ದ್ವೇಷ ಮಾಯವಾಗಿ ಅಲ್ಲಿ ಪ್ರೀತಿ ಚಿಗುರಿತ್ತು.
………………………………..
ಸಮಾಚಾರ ತಿಳಿಯುತ್ತಿದ್ದಂತೆ ಓಸಾಮಾ ಶೋಕತಪ್ತನಾದ. “ಭರತಖಾನನಿಂದ ತಿಳಿಯಬೇಕಾದ್ದನ್ನೆಲ್ಲ ತಿಳಿದುಕೊಂಡು ಆ ಬಳಿಕ ಅವನಿಗೆ ಚಿತ್ರಹಿಂಸೆ ಕೊಟ್ಟು ಕೊಂದಿದ್ದಾರೆ ಈ ನೀಚ ಇಂಡಿಯನ್ನರು. ಈಗ ಎನ್ ಕೌಂಟರ್ ದ ನಾಟಕ ಆಡುತ್ತಿದ್ದಾರೆ” ಎಂದುಕೊಂಡ. ಅವನಿಗೆ ಮತ್ತೊಂದು ಯೋಚನೆಯೂ ಹೊಳೆಯಿತು. ಶರಣು ಬಂದ ವೈರಿಯನ್ನು ಕೊಂದಂತೆ ನಾಟಕವಾಡಿ, ಅದಕ್ಕೆ ಪ್ರಚಾರ ಕೊಟ್ಟು, ಆ ಬಳಿಕ ಪ್ಲ್ಯಾಸ್ಟಿಕ್ ಸರ್ಜರಿಯ ಮೂಲಕ ಆ ವ್ಯಕ್ತಿಯ ರೂಪಾಂತರ ಮಾಡಿ ಗುಪ್ತಚಾರನಂತೆ ಉಪಯೋಗಿಸುವದು ಎರಡನೆಯ ಜಾಗತಿಕ ಯುದ್ಧಕಾಲದಿಂದಲೂ ಉಪಯೋಗದಲ್ಲಿರುವ ಒಂದು ತಂತ್ರ. ಭರತಖಾನನಿಗೂ ಹಾಗೆಯೇ ಆಗಿರಬಹುದೆ? “ಆಯಿತು, ಎಲ್ಲಾದರೂ ಸುಖವಾಗಿರಲಿ ಹಾಳಾದವನು” ಎಂದುಕೊಂಡ ಓಸಾಮಾ ಮಂಡಿಯೂರಿ ಅಲ್ಲಾನಿಗೆ ಪ್ರಾರ್ಥನೆ ಮಾಡಿದ.
……………………………………………….
ಬೆಂಗಳೂರಿನ ಹವ್ಯಾಸಿ ನಾಟ್ಯಸಂಘದವರು ‘ಯವನಿಕಾ’ದಲ್ಲಿ Parting Shot’ ಅನ್ನುವ ಇಂಗ್ಲಿಶ್ ನಾಟಕವಾಡುತ್ತಿದ್ದಾರೆ. ಪ್ರವಲ್ಲಿಕಾಳೆ ಹೀರೋಯಿನ್ ನಾಟಕದ ಕೊನೆಗೆ ಪ್ರಚಂಡ ಕರತಾಡನ.
ಪ್ರೇಕ್ಷಾಗೃಹ ಖಾಲಿಯಾದ ನಂತರ ಮುಂದಿನ ಸಾಲಿನಲ್ಲಿ ಕುಳಿತ ವ್ಯಕ್ತಿಯೊಬ್ಬ ರಂಗದ ಮೇಲೆ ಬಂದ. ಅಚ್ಚುಕಟ್ಟಾಗಿ ಶೇವ್ ಮಾಡಿದ ದುಂಡು ಮುಖ, ಮಂಡ ಮೂಗು, ಕ್ಲೋಜ್ ಕಟ್ ಕ್ರಾಪು. ನೀಲಿ ಸಫಾರಿ ಧರಿಸಿದ್ದಾನೆ.
ಆತ ಪ್ರವಲ್ಲಿಕಾಳಿಗೆ ನಮಸ್ಕಾರ ಮಾಡಿ “ತುಂಬಾ ಚೆನ್ನಾಗಿ ಅಭಿನಯಿಸುತ್ತೀರಿ” ಎಂದು ಹೇಳಿ ತಿರುಗಿ ನಡೆದ.
ಆತ ಎರಡು ಹೆಜ್ಜೆ ಇಟ್ಟಿರಲಿಲ್ಲ, ಪ್ರವಲ್ಲಿಕಾ ಕೂಗಿದಳುಃ “ಭರತಖಾನ್!”
ಆತ ಆಶ್ಚರ್ಯದಿಂದ ಹೊರಳಿ, ಹೇಳಿದಃ ” ನೀವು ತಪ್ಪು ತಿಳಿದಿರಬೇಕು; ನನ್ನ ಹೆಸರು ಹರಿದಾಸ.”
ಪ್ರವಲ್ಲಿಕಾ ನಕ್ಕಳು. “ಭರತಖಾನ, ನೀನು ಯಾರನ್ನಾದರೂ ಮೋಸಗೊಳಿಸಬಹುದು. ಆದರೆ ನಿನ್ನ ಪ್ರಿಯತಮೆಯನ್ನು ಮೋಸಗೊಳಿಸಲಾರೆ.”
ಆತ ಗಲಿಬಿಲಿಗೊಂಡು ಅವಳ ನಗುತ್ತಿರುವ ಕಣ್ಣುಗಳನ್ನೇ ನೋಡತೊಡಗಿದ.
ಪ್ರವಲ್ಲಿಕಾ ತನ್ನೆರಡೂ ತೋಳುಗಳನ್ನು ಚಾಚಿ, “ನಮ್ಮ ನಿಕಾ ಎಲ್ಲಿ? ದುಬೈ ಅಥವಾ ಅಫಘಾನಿಸ್ತಾನ?” ಎಂದು ನಕ್ಕಳು.
ಆತ ಸರ್ರನೆ ಅವಳ ತೋಳುಗಳಲ್ಲಿ ಸೇರಿಕೊಂಡ.
“ಇಲ್ಲಿಯೇ, ಈ ರಂಗದ ಮೇಲೆ” ಎನ್ನುತ್ತ ಆತ ತನ್ನ ಬಿಳಿ ಪಾರಿವಾಳಕ್ಕೆ ಮುತ್ತು ಕೊಟ್ಟ.

***********
ಶಾಸ್ತ್ರಿಗಳಿಗೆ ಭರತಖಾನನಾಡಿದ ಕಪಟನಾಟಕ ಗೊತ್ತಾಗಿತ್ತು. ಹರಿದಾಸನ ವೇಷ ಹಾಕಿಕೊಂಡು ಬಂದು ತಮ್ಮನ್ನೆಲ್ಲಾ ಮರುಳುಗೊಳಿಸಿದವನು ಭಯೋತ್ಪಾದಕ ಭರತಖಾನನೇ ಎಂದು ತಿಳಿದು ನೊಂದುಹೋಗಿದ್ದರು. ಮೇಲಿಂದ ಮೇಲೆ ಬಂದೆರಗಿದ ಆಘಾತಗಳು ಅವರ ಸೂಕ್ಷ್ಮ ಮನಸ್ಸನ್ನು ಘಾಸಿಗೊಳಿಸಿದ್ದವು. ಮನೆತನದ ಶಾಸ್ತ್ರ, ಸಂಪ್ರದಾಯಗಳನ್ನೆಲ್ಲಾ ಗಾಳಿಗೆ ತೂರಿ ವಿದೇಶೀಯಳೊಬ್ಬಳನ್ನು ಸಂಗಾತಿಯಾಗಿ ಸ್ವೀಕರಿಸಿ, ಈಗ ಕಣ್ಮರೆಯಾಗಿಹೋಗಿರುವ ಮಗ, ಅದೆಷ್ಟೋ ಅಮಾಯಕರ ಬದುಕನ್ನು ಬಲಿ ತೆಗೆದುಕೊಂಡಿರುವ ನರರಾಕ್ಷಸ ಭರತಖಾನನನ್ನು ಮದುವೆಯಾಗುತ್ತೇನೆಂದು ಹಟ ಹಿಡಿದಿರುವ ಮಗಳು ಪ್ರವಲ್ಲಿಕಾ, ಅಪಾಯವೆಂದು ತಿಳಿದಿದ್ದೂ ಬಿಸಿಲುಗುದುರೆಯ ಬೆನ್ನುಹತ್ತಿರುವ ಹಿರಿಯ ಮಗಳು ಧಾರಿಣಿ… ಎತ್ತ ನೋಡಿದರೂ ಅವರಿಗೆ ನಿರಾಸೆಯೇ ಕಾದಿತ್ತು. ಬದುಕು ಸಾಕುಸಾಕೆನ್ನಿಸಿತ್ತು.

ಶಾರದಮ್ಮ ಪ್ರವಲ್ಲಿಕಾಳಿಗೆ ಎಷ್ಟೆಷ್ಟೋ ತಿಳುವಳಿಕೆ ಹೇಳಿನೋಡಿದರು. ಅವಳು ತನ್ನ ನಿರ್ಧಾರವನ್ನು ಬದಲಿಸಲು ತಯಾರಿರಲಿಲ್ಲ. ತಾಯಿ-ಮಗಳ ಮಾತುಕತೆಯನ್ನು ನಿರ್ವಿಕಾರ ಚಿತ್ತದಿಂದ ಕೇಳುತ್ತಿದ್ದ ಶಾಸ್ತ್ರಿಗಳು ಸರಸರನೆ ಎದ್ದು ಮನೆಯಿಂದ ಹೊರನಡೆದರು. ಪ್ರವಲ್ಲಿಕಾ ಮತ್ತು ಶಾರದಮ್ಮನವರೂ ಭಯದಿಂದ ಅವರನ್ನು ಹಿಂಬಾಲಿಸಿದರು. ಶಾಸ್ತ್ರಿಗಳು ಯಾವುದೋ ಕರೆಯನ್ನು ಹಿಂಬಾಲಿಸಿದವರಂತೆ ದೊಡ್ದದೊಡ್ದ ಹೆಜ್ಜೆ ಹಾಕುತ್ತಾ ಮುನ್ನಡೆಯುತ್ತಿದ್ದರೆ ಪ್ರವಲ್ಲಿಕಾ, ಶಾರದಮ್ಮ ಅವರ ಹಿಂದೆ ಓಡು ನಡಿಗೆಯಲ್ಲಿ ಅವರನ್ನು ಕೂಗಿ ಕರೆಯುತ್ತಾ ಹಿಂದೆ ಓಡಿದರು. ಶಾಸ್ತ್ರಿಗಳು ಊರ ಮುಂದಿನ ದೇವಾಲಯ ತಲುಪಿದವರೇ ಮುಖ್ಯ ದ್ವಾರದ ಮುಂದೆ ಕುಸಿದುಬಿದ್ದರು. “ಲಕ್ಷ್ಮೀ ನರಸಿಂಹಾ… ನಿನ್ನ ಪರೀಕ್ಷೆ ಸಾಕಾಯಿತಪ್ಪಾ, ನನ್ನ ಕಣ್ಣ ಮುಂದೆ ನಡೆಯುತ್ತಿರುವ ಈ ಅನಾಚಾರಗಳನ್ನು ಸಹಿಸಿಕೊಳ್ಳುವ ಶಕ್ತಿ ನನಗಿಲ್ಲ. ಮುಂದೆ ನಡೆಯಲಿರುವ ಅನರ್ಥಗಳಿಗೆ ಸಾಕ್ಷಿಯಾಗಿ ನನ್ನನ್ನು ಇಲ್ಲಿ ಉಳಿಸಬೇಡ. ಇನ್ನು ನಿನ್ನ ಪಾದಕ್ಕೆ ಸೇರಿಸಿಕೋ.” ಎಂದು ಕೊನೆಯ ಬಾರಿಗೆ ಕೈಮುಗಿದು ಬೇಡಿದರು.

ಪ್ರವಲ್ಲಿಕಾ ನೆಲದ ಮೇಲೆ ಬಿದ್ದಿದ್ದ ಶಾಸ್ತ್ರಿಗಳನ್ನು ಅಲುಗಾಡಿಸಿದಳು. ಆದರೆ ಶಾಸ್ತ್ರಿಗಳ ಜೀವದ ಹಕ್ಕಿ ಅವರ ಇಷ್ಟ ದೈವ ನರಸಿಂಹನ ಸನ್ನಿಧಿಯನ್ನು ಸೇರಿ ಕೆಲವು ಕ್ಷಣಗಳೇ ಕಳೆದಿದ್ದವು.

6 thoughts on “ಭಾಗ – 17”

  1. ಶಾಸ್ತ್ರಿಗಳಿಗೆ ಭರತಖಾನನಾಡಿದ ಕಪಟನಾಟಕ ಗೊತ್ತಾಗಿತ್ತು. ಹರಿದಾಸನ ವೇಷ ಹಾಕಿಕೊಂಡು ಬಂದು ತಮ್ಮನ್ನೆಲ್ಲಾ ಮರುಳುಗೊಳಿಸಿದವನು ಭಯೋತ್ಪಾದಕ ಭರತಖಾನನೇ ಎಂದು ತಿಳಿದು ನೊಂದುಹೋಗಿದ್ದರು. ಮೇಲಿಂದ ಮೇಲೆ ಬಂದೆರಗಿದ ಆಘಾತಗಳು ಅವರ ಸೂಕ್ಷ್ಮ ಮನಸ್ಸನ್ನು ಘಾಸಿಗೊಳಿಸಿದ್ದವು. ಮನೆತನದ ಶಾಸ್ತ್ರ, ಸಂಪ್ರದಾಯಗಳನ್ನೆಲ್ಲಾ ಗಾಳಿಗೆ ತೂರಿ ವಿದೇಶೀಯಳೊಬ್ಬಳನ್ನು ಸಂಗಾತಿಯಾಗಿ ಸ್ವೀಕರಿಸಿ, ಈಗ ಕಣ್ಮರೆಯಾಗಿಹೋಗಿರುವ ಮಗ, ಅದೆಷ್ಟೋ ಅಮಾಯಕರ ಬದುಕನ್ನು ಬಲಿ ತೆಗೆದುಕೊಂಡಿರುವ ನರರಾಕ್ಷಸ ಭರತಖಾನನನ್ನು ಮದುವೆಯಾಗುತ್ತೇನೆಂದು ಹಟ ಹಿಡಿದಿರುವ ಮಗಳು ಪ್ರವಲ್ಲಿಕಾ, ಅಪಾಯವೆಂದು ತಿಳಿದಿದ್ದೂ ಬಿಸಿಲುಗುದುರೆಯ ಬೆನ್ನುಹತ್ತಿರುವ ಹಿರಿಯ ಮಗಳು ಧಾರಿಣಿ… ಎತ್ತ ನೋಡಿದರೂ ಅವರಿಗೆ ನಿರಾಸೆಯೇ ಕಾದಿತ್ತು. ಬದುಕು ಸಾಕುಸಾಕೆನ್ನಿಸಿತ್ತು.

    ಶಾರದಮ್ಮ ಪ್ರವಲ್ಲಿಕಾಳಿಗೆ ಎಷ್ಟೆಷ್ಟೋ ತಿಳುವಳಿಕೆ ಹೇಳಿನೋಡಿದರು. ಅವಳು ತನ್ನ ನಿರ್ಧಾರವನ್ನು ಬದಲಿಸಲು ತಯಾರಿರಲಿಲ್ಲ. ತಾಯಿ-ಮಗಳ ಮಾತುಕತೆಯನ್ನು ನಿರ್ವಿಕಾರ ಚಿತ್ತದಿಂದ ಕೇಳುತ್ತಿದ್ದ ಶಾಸ್ತ್ರಿಗಳು ಸರಸರನೆ ಎದ್ದು ಮನೆಯಿಂದ ಹೊರನಡೆದರು. ಪ್ರವಲ್ಲಿಕಾ ಮತ್ತು ಶಾರದಮ್ಮನವರೂ ಭಯದಿಂದ ಅವರನ್ನು ಹಿಂಬಾಲಿಸಿದರು. ಶಾಸ್ತ್ರಿಗಳು ಯಾವುದೋ ಕರೆಯನ್ನು ಹಿಂಬಾಲಿಸಿದವರಂತೆ ದೊಡ್ದದೊಡ್ದ ಹೆಜ್ಜೆ ಹಾಕುತ್ತಾ ಮುನ್ನಡೆಯುತ್ತಿದ್ದರೆ ಪ್ರವಲ್ಲಿಕಾ, ಶಾರದಮ್ಮ ಅವರ ಹಿಂದೆ ಓಡು ನಡಿಗೆಯಲ್ಲಿ ಅವರನ್ನು ಕೂಗಿ ಕರೆಯುತ್ತಾ ಹಿಂದೆ ಓಡಿದರು. ಶಾಸ್ತ್ರಿಗಳು ಊರ ಮುಂದಿನ ದೇವಾಲಯ ತಲುಪಿದವರೇ ಮುಖ್ಯ ದ್ವಾರದ ಮುಂದೆ ಕುಸಿದುಬಿದ್ದರು. “ಲಕ್ಷ್ಮೀ ನರಸಿಂಹಾ… ನಿನ್ನ ಪರೀಕ್ಷೆ ಸಾಕಾಯಿತಪ್ಪಾ, ನನ್ನ ಕಣ್ಣ ಮುಂದೆ ನಡೆಯುತ್ತಿರುವ ಈ ಅನಾಚಾರಗಳನ್ನು ಸಹಿಸಿಕೊಳ್ಳುವ ಶಕ್ತಿ ನನಗಿಲ್ಲ. ಮುಂದೆ ನಡೆಯಲಿರುವ ಅನರ್ಥಗಳಿಗೆ ಸಾಕ್ಷಿಯಾಗಿ ನನ್ನನ್ನು ಇಲ್ಲಿ ಉಳಿಸಬೇಡ. ಇನ್ನು ನಿನ್ನ ಪಾದಕ್ಕೆ ಸೇರಿಸಿಕೋ.” ಎಂದು ಕೊನೆಯ ಬಾರಿಗೆ ಕೈಮುಗಿದು ಬೇಡಿದರು.

    ಪ್ರವಲ್ಲಿಕಾ ನೆಲದ ಮೇಲೆ ಬಿದ್ದಿದ್ದ ಶಾಸ್ತ್ರಿಗಳನ್ನು ಅಲುಗಾಡಿಸಿದಳು. ಆದರೆ ಶಾಸ್ತ್ರಿಗಳ ಜೀವದ ಹಕ್ಕಿ ಅವರ ಇಷ್ಟ ದೈವ ನರಸಿಂಹನ ಸನ್ನಿಧಿಯನ್ನು ಸೇರಿ ಕೆಲವು ಕ್ಷಣಗಳೇ ಕಳೆದಿದ್ದವು.

  2. ಸುದ್ದಿ ತಿಳಿದು ಬೆಂಗಳೂರಿಂದ ರಾಜೀವ, ಆಕಾಶ, ಜೆನ್ನಿ, ಹ್ಯಾರಿ, ಕೇಶವ ಮತ್ತವನ ಸಂಸಾರ, ಎಲ್ಲರೂ ಹಳ್ಳಿಗೆ ಬಂದಿಳಿದರು. ಬಹಳಷ್ಟು ಚರ್ಚೆಗಳ ಬಳಿಕ ಹ್ಯಾರಿ ತಾತನ ಸಂಸ್ಕಾರ ಮಾಡುವುದೆ ಸೂಕ್ತವೆಂದು ಎಲ್ಲರಿಗೂ ತೋಚಿತು, ಆದರೆ ಆತನಿಗೆ ಉಪನಯನವಾಗಿಲ್ಲ ಎನ್ನುವುದನ್ನು ಶಾರದಮ್ಮ ಸೂಚಿಸಿದಾಗ ರಾಜೀವ ತಾನು ಮಾಡುವುದಾಗಿ ಮುಂದೆ ನಿಂತ. ಎಲ್ಲರ ಸಮ್ಮತಿಯಿತ್ತು, ಧಾರಿಣಿಯ ಗೈರುಹಾಜರಿಯ ನೋವಿನ ಜೊತೆಗೆ.

    ಹತ್ತನೇ ದಿನ ಹೊಸರೂಪಿನ ಭರತ ಖಾನ ಮನೆಗೆ ಬಂದಿಳಿದಾಗ ಶಾರದಮ್ಮ ವ್ಯಗ್ರರಾದರು. “ನೀನೇ ನನ್ನ ಕುಂಕುಮ ಅಳಿಸಿದ ನೀಚ, ರಾಕ್ಷಸ… ಬರಬೇಡ ಇಲ್ಲಿಗೆ… ಹೋಗು… ದೂರ ಹೋಗು…” ಎಂದೆಲ್ಲ ಅರಚಾಡಿ ನೊಂದುಕೊಂಡರು. ಅವರನ್ನು ಸಮಾಧಾನಿಸಲು ಸಾಕುಬೇಕಾಯಿತು. ಎಲ್ಲರೂ ಸ್ವಲ್ಪ ಶಾಂತರಾದಾಗ ಭರತ ಖಾನ ತನ್ನ ಹೊಸ ರೂಪದ ಹಿಂದಿನ ರಹಸ್ಯ, ತನಗೆ ಭಾರತ ಸರಕಾರ ಕೊಟ್ಟಿರುವ ಹೊಸ ಜವಾಬ್ದಾರಿಯ ಹುದ್ದೆ ಮತ್ತು ತಾನದನ್ನು ಭಾರತೀಯನಾಗಿ ಸ್ವೀಕರಿಸಿ, ಭಾರತೀಯನಾಗಿ ನಿಭಾಯಿಸುವ ನಿರ್ಧಾರಗಳನ್ನು ತಿಳಿಸಿದಾಗ ರಾಜೀವ, ಆಕಾಶ್, ಪ್ರವಲ್ಲಿಕಾ ತುಸು ನಿರಾಳಗೊಂಡರು.

    ಇತ್ತ ಧಾರಿಣಿಯನ್ನು ಕಾಯುತ್ತಿರುವ ಟಿಮ್ ಮತ್ತವನ ಕೂಟಕ್ಕೆ ಅತ್ತ ಕಡೆ ಜೋಯಿಯಿಂದ ಒತ್ತಡ ಹೆಚ್ಚುತ್ತಿತ್ತು. ಇತ್ತ ಕಡೆ ಯಾವುದೇ ರೀತಿಯ ಮುನ್ನಡೆ ಸಾಧಿಸಲಾಗದೆ ಟಿಮ್ ಒದ್ದಾಡುತ್ತಿದ್ದ. ಅದೇ ಸಮಯಕ್ಕೆ `ಶಶ್’ ಶಾರದಮ್ಮನ ದೇಹಾಂತದ ಸುದ್ದಿಯನ್ನು ತಂದೊಪ್ಪಿಸಿದ, ಟಿಮ್ ಮುಂದೆ ಧಾರಿಣಿಗೆ. ಧಾರಿಣಿಯನ್ನು ಈ ನೆಪದಲ್ಲಾದರೂ ಬಿಡಿಸಬಹುದು ಅನ್ನುವುದು ಆತನ ಹಂಚಿಕೆ. ಆತ ಅಂದುಕೊಂಡಂತೆಯೇ ಧಾರಿಣಿ ಅಧೀರಳಾಗಿ, ಮೂರ್ಛೆತಪ್ಪಿ ಬಿದ್ದು, ಮತ್ತೆ ಎದ್ದು ಗೋಳಾಡತೊಡಗಿದಳು. ಟಿಮ್ ಗೊಂದಲಗೊಂಡ. ಏನು ಮಾಡುವುದೆಂದು ತಿಳಿಯದೆ, ಕೂಡಲೇ ಜೋಯಿಗೆ ಕರೆಮಾಡಿದ.

  3. …ದುಃಖದಿಂದ ತತ್ತರಿಸುತ್ತಿದ್ದ ಶಾರದಮ್ಮನವರಿಗೆ ಬಲವಂತದಿಂದ ಸ್ವಲ್ಪ ಹಾಲು ಕುಡಿಸಿ ಮಲಗಿಸಿ ಹೊರ ಬಂದ ಸರೋಜ ಹಾಲಿನಲ್ಲಿ ಕಾಣಿಸಿಕೊಂಡ ಆ ವ್ಯಕ್ತಿಯನ್ನು ನೋಡಿ ಸ್ಥಂಭೀಭೂತರಾಗಿ ನಿಂತುಬಿಟ್ಟರು
    `ನನ್ನ ಮಗ ಭರತ…!’ ಮನಸ್ಸು ಗುಣು ಗುಣಿಸಿತು ತುಟಿ ಒಡೆದು ಆಡಲಿಲ್ಲ…
    `ಏನಾಯ್ತೇ ಸರೋಜಾ…’ ಕೇಶವಚಿಕ್ಕಪ್ಪ ತಲೆ ಸುತ್ತಿ ನೆಲಕ್ಕೆ ಬೀಳುತ್ತಿದ್ದ ತಮ್ಮ ಪತ್ನಿಯನ್ನು ಹಿಡಿದುಕೊಳ್ಳುತ್ತಾ ನುಡಿದರು…

  4. ಮೊದಲಿಗೆ ಕಿರುಚಾಡಿದ ಜೋಯಿ, ನಂತರ ಯಾರಾದರೂ ನಂಬಿಕಸ್ತರ ಜೊತೆ ಧಾರಿಣಿಯನ್ನು ಹಳ್ಳಿಗೆ ಕಳಿಸಿ ಕ್ರಿಮೇಷನ್ ಮುಗಿದೊಡನೆ ಮತ್ತೆ ಬೆಂಗಳೂರಿಗೆ ಕರೆಸುವ ಏರ್ಪಾಡು ಮಾಡಲು ಆಜ್ಞೆ ಮಾಡಿದ. ಟಿಮ್’ಗೆ ಈ ಕೆಲಸಕ್ಕೆ ಶಶ್’ಗಿಂತ ಉತ್ತಮ ವ್ಯಕ್ತಿ ಇಲ್ಲವೆನಿಸಿತು. ಆತನ ಜೊತೆಗೆ ಧಾರಿಣಿಯನ್ನು ಕಳಿಸಲು ಮುಂದಾದ. ಅತ್ತೂ ಅತ್ತೂ ಸುಸ್ತಾಗಿದ್ದ ಧಾರಿಣಿಗೆ ಯಾವುದೇ ಪ್ರತಿಕ್ರಿಯೆ ತೋರಿಸುವ ಹುಮ್ಮಸ್ಸೂ ಇಲ್ಲವಾಗಿತ್ತು. ನಿರ್ಜೀವ ದೇಹದಂತೆ ಶಶ್ ಜೊತೆ ಅವನೇ ತಂದ ಟ್ಯಾಕ್ಸಿಯಲ್ಲಿ ಹಳ್ಳಿ ಕಡೆ ಹೊರಟಳು.

  5. ಹಳ್ಳಿಗೆ ಇನ್ನೂ ಸ್ವಲ್ಪ ದೂರ ಇದೆ ಅನ್ನುವಾಗಲೇ ಶಶಾಂಕ ಟ್ಯಾಕ್ಸಿ ಬಿಟ್ಟ. ರಸ್ತೆ ಬದಿಯ ಮರದ ನೆರಳಲ್ಲಿ ಒಂದಿಷ್ಟು ಕೂತು, ಧಾರಿಣಿಗೆ ತನ್ನ ನಾಟಕದ ಕಥೆಯನ್ನು ವಿವರಿಸಿದ. ಅಮ್ಮನಿಗೆ ಏನೂ ಆಗಿಲ್ಲವೆಂದೂ ಇವಳನ್ನು ಬಿಡಿಸಲು ತನ್ನ ನಾಟಕವೆಂದೂ ತಿಳಿಸಿದ. ಇಷ್ಟು ದಿನ ಬಂಧಿಯಾಗಿದ್ದ ಧಾರಿಣಿ ಇದನ್ನು ನಂಬಲು ಕೆಲ ಕ್ಷಣಗಳೇ ಹಿಡಿದವು. ಆದರೂ ಮನಸ್ಸನ್ನು ಯಾವುದೋ ಬಾಧೆ ಹಿಂಡುತ್ತಿತ್ತು. “ಥ್ಯಾಂಕ್ಸ್” ಎಂದಷ್ಟೇ ಅಂದಳು. ಹಳ್ಳಿಗೆ ಹೋಗುವ ಬಸ್ಸು ಬಂದಾಗ, ಕೈತೋರಿಸಿ ಇಬ್ಬರೂ ಬಸ್ಸೇರಿ ಮೌನವಾಗಿ ಮನೆ ಸೇರಿದರು.

    ಚಾವಡಿಯಲ್ಲಿ ಯಾವುದೋ ಚರ್ಚೆಯಲ್ಲಿ ಮುಳುಗಿದ್ದ ರಾಜೀವ, ಆಕಾಶ, ಭರತರನ್ನು ಕಂಡ ಧಾರಿಣಿಗೆ ಏನೋ ನಡೆದಿದೆ ಅನ್ನುವ ಅರಿವು ಮೂಡಿತು. “ಅಕ್ಕಾ” ಅನ್ನುತ್ತಾ ಪ್ರವಲ್ಲಿಕಾ ಓಡಿ ಬಂದಾಗಲೇ ಉಳಿದವರೆಲ್ಲರೂ ಇವರಿಬ್ಬರತ್ತ ಗಮನ ಹರಿಸಿದರು. ತಂಗಿಯ ಹಿಂದೆಯೇ ಓಡಿ ಬಂದ ಬರಿಹಣೆಯ ಅಮ್ಮನನ್ನು ಕಂಡಾಗ ಧಾರಿಣಿಯ ಹೃದಯ ಕುಸಿದು ಬಿತ್ತು. “ಅಪ್ಪಾ..” ಎಂದದ್ದಷ್ಟೇ, ಅವಳ ಸ್ವರ ಅಡಗಿಕೂತಿತು. ಇಬ್ಬರನ್ನು ಸಮಾಧಾನ ಮಾಡುವ ಸರದಿ ಪ್ರವಲ್ಲಿಕಾ ಸರೋಜಮ್ಮನವರಿಗೆ. ಇವೆಲ್ಲದರ ನಡುವೆಯೇ ಶಶಾಂಕ ಟಿಮ್ ಮತ್ತವನ ಕಾರ್ಯಾಚರಣೆಯ ವಿವರ ನೀಡಿದ್ದು ರಾಜೀವ ಮತ್ತು ಆಕಾಶ್ ಇಬ್ಬರಿಗೂ ಪರಿಸ್ಥಿತಿಯ ಹಿನ್ನೆಲೆ ಒದಗಿಸಿತು. ಭರತ ಇದನ್ನು ತಾನು ಸಂಭಾಳಿಸುವುದಾಗಿ ಭರವಸೆ ನೀಡಿದ. ಭರತನ ಪ್ರತಿಯೊಂದು ಚರ್ಯೆಯನ್ನೂ ಗಮನಿಸುತ್ತಿದ್ದರು ಸರೋಜಮ್ಮ. ಆದರೆ ಅದು ಬೇರೆ ಯಾರ ದೃಷ್ಟಿಗೂ ಬಿದ್ದಿರಲಿಲ್ಲ.

    ಶಾಸ್ತ್ರಿಗಳ ಸಂಸ್ಕಾರಗಳೆಲ್ಲ ಮುಗಿದವು. ಮುಂದೇನು ಎನ್ನುವ ಪ್ರಶ್ನೆ ಎಲ್ಲರೆದುರು ಮತ್ತೊಮ್ಮೆ ಎದ್ದು ನಿಂತಿತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.