ಅಮೆರಿಕಾದ ಇಲಿನಾಯ್ ಕನ್ನಡ ಕೂಟ ‘ವಿದ್ಯಾರಣ್ಯ’ ಎರಡು ತಿಂಗಳಿಗೊಮ್ಮೆ ಹೊರ ತರುತ್ತಿರುವ “ಡಿಂಡಿಮ” ಪತ್ರಿಕೆಯಲ್ಲಿಯೂ ‘ಖೋ ಕಾದಂಬರಿ ಬರೆಯುವ ಪ್ರಯತ್ನ ಈಗ ನಡೆದಿದೆ. ವಿದ್ಯಾರಣ್ಯದ ಕನ್ನಡ ಕೂಟದ ಸದಸ್ಯರಾದ ಪ್ರಕಾಶ್ ಹೇಮಾವತಿಯವರು ಮೊದಲಿಗೆ ’ಬಲೆ’ ಎಂಬ ಹೆಸರಿನಲ್ಲಿ ಕಥೆಯನ್ನು ಪ್ರಾರಂಭಿಸಿದರು. ಅದನ್ನು ಮುಂದುವರೆಸಲು ಕೂಟದ ಇತರ ಸದಸ್ಯರಿಗೆ ಆಹ್ವಾನ ಕೊಡಲಾಯಿತು. ಈಗಾಗಲೇ ಐದು ಭಾಗ ಮುಂದುವರೆದಿದೆ. ಮೂರನೆಯ ಭಾಗ – “ಮನಸಿದು ಗೊಂದಲದ ಗೂಡು” ನಾನು ಮುಂದುವರೆಸಿದ್ದೇನೆ. ಮುಂದಿನ ಡಿಸೆಂಬರ್ ಸಂಚಿಕೆಯಲ್ಲಿ ಕೊನೆಯ ಕಥೆಗಾರರು ಕಥೆಯನ್ನು ಮುಕ್ತಾಯಗೊಳಿಸಲಿದ್ದಾರೆ.

ನಮ್ಮ ವಿದ್ಯಾರಣ್ಣಿಗರು ಹೆಣೆದಿರುವ ’ಬಲೆ’ ಖೋ ಕಥೆಯನ್ನು ನೀವಿಲ್ಲಿ ಓದಬಹುದು.

ಬಲೆ – ೧

ಬಲೆ -೨ ಮತ್ತು ೩

ಬಲೆ -೪

‘ತುಳಸೀವನ’ದಲ್ಲಿ ಕಥೆ ಕಟ್ಟುವ ಆಟ ಪ್ರಾರಂಭವಾದಾಗ ಸುನಾಥ ಮತ್ತು ಇತರರು ನೀಡಿದ ಕೆಲವು ಅಮೂಲ್ಯ ಮಾಹಿತಿಗಳು ಹಲವು ಕಡೆ ಹಂಚಿಹೋಗಿದ್ದವು. ಅವುಗಳನ್ನು ಈ ಹೊಸ ಎಳೆಯಲ್ಲಿ ಒಂದುಗೂಡಿಸಲು ಪ್ರಯತ್ನಿಸಿದ್ದೇನೆ. ಈ ಬಗ್ಗೆ ನಿಮಗೆ ತಿಳಿದ ಮತ್ತಷ್ಟು ಮಾಹಿತಿಗಳನ್ನು ಇಲ್ಲಿ ಹಂಚಿಕೊಳ್ಳಿ.

7 thoughts on ““ಖೋ” ಕಾದಂಬರಿ”

  1. ೧೯೫೭ನೆಯ ಇಸ್ವಿಯಲ್ಲಿ ಧಾರವಾಡದಲ್ಲಿರುವ ಮನೊಹರ ಗ್ರಂಥಮಾಲೆಯವರು ಒಂದು ಸಾಹಿತ್ಯ ಪ್ರಯೋಗ ಮಾಡಿದರು. ೧೧ ಜನ ಲೇಖಕರು ಒಟ್ಟಾಗಿ ಒಂದು ಕಾದಂಬರಿ ಬರೆದರು. ಈ ಕಾದಂಬರಿಗೆ ಪೂರ್ವಕಲ್ಪನೆ ಇರಲಿಲ್ಲ. ಒಬ್ಬ ಸಾಹಿತಿ ಒಂದು ಅಧ್ಯಾಯ ಬರೆದು ಎರಡನೆಯ ಲೇಖಕನಿಗೆ ಕೊಡುತ್ತಾನೆ; ಆತ ಮುಂದುವರಿಸಿ ಮೂರನೆಯವನಿಗೆ ಹಸ್ತಾಂತರಿಸುತ್ತಾನೆ. ಈ ರೀತಿಯಾಗಿ ೧೧ ಅಧ್ಯಾಯಗಳಲ್ಲಿ ಪೂರ್ಣಗೊಂಡ ಈ ಕಾದಂಬರಿಯ ಹೆಸರುಃ “ಖೋ”. ಬಹುಶಃ ಕನ್ನಡದಲ್ಲಿ ಇದು ಈ ರೀತಿಯ ಮೊದಲ ಪ್ರಯೋಗವಿರಬೇಕು.

  2. ಸುನಾಥರೇ,

    ಈ ವಿಷಯ ಗೊತ್ತಿರಲಿಲ್ಲ! ಬಹಳ ಅಪರೂಪದ ಮಾಹಿತಿ ಹೊರಗೆಡವಿದ್ದೀರಿ. ಧನ್ಯವಾದಗಳು.

    “ಖೋ” ಕಾದಂಬರಿ ಆಟ ಆಡಿದ ಹನ್ನೊಂದು ಮಂದಿ ಆಟಗಾರರು ಯಾರು? ೧೯೫೭ನೆಯ ವರ್ಷ ಅಂದರೆ ನೆನಪಾಗುವ ಕೆಲವು ಹೆಸರುಗಳು…. ಶಿವರಾಮ ಕಾರಂತ, ಚದುರಂಗ, ಬಸವರಾಜ ಕಟ್ಟೀಮನಿ, ಕೃಷ್ಣಮೂರ್ತಿ ಪುರಾಣಿಕ, ಗೀತಾ ಕುಲಕರ್ಣಿ, ಇನಾಂದಾರ್, ಅನಕೃ, ತರಾಸು…?

  3. ತ್ರಿವೇಣಿಯವರೆ,
    “ಖೋ” ಕಾದಂಬರಿಯ ಹನ್ನೊಂದು ಅಧ್ಯಾಯಗಳನ್ನು ರಚಿಸಿದ ಹನ್ನೊಂದು ಜನ ಲೇಖಕರು ಅನುಕ್ರಮವಾಗಿ ಈ ರೀತಿಯಾಗಿದ್ದಾರೆಃ
    (೧) ಎನ್ಕೆ ಕುಲಕರ್ಣಿ
    (೨) ಶಂಕರ ಮೊಕಾಶಿ ಪುಣೇಕರ
    (೩) ವ್ಹಿ. ಎಂ. ಇನಾಮದಾರ
    (೪) ಕೀರ್ತಿನಾಥ ಕುರ್ತಕೋಟಿ
    (೫) ಎಂ.ಕೆ.ವರಗಿರಿ
    (೬) ದ.ಬಾ.ಕುಲಕರ್ಣಿ
    (೭) ಶಾಂತಿನಾಥ ದೇಸಾಯಿ
    (೮) ಶಂಕರ ಮೊಕಾಶಿ ಪುಣೇಕರ
    (೯) ಏ.ಕೆ.ರಾಮಾನುಜನ್
    (೧೦) ವಿ.ಕೃ.ಗೋಕಾಕ
    (೧೧) ದ.ರಾ.ಬೇಂದ್ರೆ

    ಶಂಕರ ಮೊಕಾಶಿ ಪುಣೇಕರ ಎರಡು ಅಧ್ಯಾಯ ಬರೆದದ್ದರಿಂದ ೧೦ ಜನ ಲೇಖಕರು ೧೧ ಅಧ್ಯಾಯ ಬರೆದಂತಾಯಿತು. ಇದೊಂದು ತಿದ್ದುಪಡಿ.

  4. ಈಗ್ಗೆ ಹದಿನೈದು ವರ್ಷಗಳ ಹಿಂದೆ ತೆಲುಗಿನಲ್ಲಿ ನಡೆದ ಇಂಥಾ ಪ್ರಯೋಗದ ಕನ್ನಡ ಅನುವಾದವನ್ನು ಓದಿದ್ದೆ. ಯಂಡಮೂರಿ ವೀರೇಂದ್ರನಾಥ್, ಮಲ್ಲಾದಿ ವೆಂಕಟ ಕೃಷ್ಣಮೂರ್ತಿ ಮುಂತಾದವರು ಸೇರಿ ಬರೆದಿದ್ದ ಕಾದಂಬರಿ ಅದು. ಹೆಸರು ನೆನಪಾಗುತ್ತಾ ಇಲ್ಲ ಕನ್ನ್ಡಡದಲ್ಲಿ ಇಂಥದ್ದನ್ನು ಕಂಡಿರಲಿಲ್ಲ. ಹೊಸ ಪ್ರಯೋಗಮಾಡುತ್ತಿರುವುದಕ್ಕೆ ನಮ್ಮೆಲ್ಲರಿಗೂ `ತೋಚಿದ್ದನ್ನು ಗೀಚಲು’ ಅವಕಾಶ ಮಾಡಿ ಕೊಟ್ಟಿದ್ದಕ್ಕೆ ತ್ರಿವೇಣಿಯವರಿಗೆ ತುಂಬಾ ಧನ್ಯವಾದಗಳು.
    ಕಥೆ ಎಂಬ ಈ ಕೂಸು ಚೆನ್ನಾಗಿ ಬೆಳೆಯಲಿ ಎಂಬ ಹಾರೈಕೆ.

  5. ಮಂಗಳೂರು ಆಕಾಶವಾಣಿಯಲ್ಲಿ ಇದೇ ರೀತಿಯ ಪ್ರಯೋಗ ನಡೆಸಿದ್ದರಂತೆ, ಕಥಾಸಮಯ ಅಥವಾ ಕಥಾಕಾಲ ಅಂತ ಹೆಸರಿತ್ತು… ಹಾಗೆನೇ ತುಷಾರದಲ್ಲೂ ಇದೇ ರೀತಿಯ ಪ್ರಯೋಗ ಬಹುಶ: ೯೦ರ ದಶಕದಲ್ಲಿ ನೋಡಿದ ನೆನಪು…

  6. ತ್ರಿವೇಣಿಯವರೆ,
    multi-writers’ ಕಾದಂಬರಿ ‘ಖೋ’ ೧೯೫೮ರಲ್ಲಿ ಪ್ರಕಟವಾಗಿತ್ತೆಂದು ಇಲ್ಲಿ ತಿಳಿಸಿದ್ದೆ. ನೀವು ಕಳುಹಿಸಿದ ಪುಸ್ತಕ ‘ನಗೆಗನ್ನಡಂ ಗೆಲ್ಗೆ’ಯಲ್ಲಿ ಇನ್ನೊಂದಿಷ್ಟು ಮಾಹಿತಿ ಇದೆ.
    ೧) ೧೯೬೦ರಲ್ಲಿ ನಾಡಿಗೇರ ಕೃಷ್ಣರಾಯರು ಬೆಂಗಳೂರಿನ ಅನೇಕ ಬರಹಗಾರರನ್ನು ಕಲೆ ಹಾಕಿ ಬರೆಯಿಸಿದ ಕಾದಂಬರಿ – “ಸಂದಿಗ್ಧದ ಸುಳಿಯಲ್ಲಿ”.
    ೨) ಆ ಬಳಿಕ, ವಾಣಿಯವರ ನೇತೃತ್ವದಲ್ಲಿ ಹೊರ ಬಂದ ಕಾದಂಬರಿ – “ತವರಿನ ಕುಡಿ”. ಲೇಖಕರುಃ ಆರ್ಯಾಂಬ ಪಟ್ಟಾಭಿ,ಜನಾರ್ದನ ಗುರ್ಖಾರ,ರಘುಸುತ,ಪುಷ್ಪಾ ಎನ್.ರಾವ್,ರಾಮದಾಸ,
    ಬಿ.ಎನ್.ನಾಗರಾಜ ಭಟ್, ನಾರಾಯಣ ಬಲ್ಲಾಳ, ರಾವ ದಂಡಿನ, ಎಸ್. ಮಂಗಳಾ ಸತ್ಯನ್ etc.

  7. Internetನಲ್ಲಿ ಕನ್ನಡದಲ್ಲಿ ಪ್ರಕಟವಾದ ಮೊದಲ ‘ಖೋ’ ಕಾದಂಬರಿ “ಬಾಳೆಂಬ ಬಣ್ಣದ ಬುಗರಿ” ಆಗಿರಬಹುದೆ?

Leave a Reply to sunaath Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.