ಕವಿ : ಎಚ್. ಎಸ್. ವೆಂಕಟೇಶಮೂರ್ತಿ
ಗಾಯಕ : ಸಿ. ಅಶ್ವಥ್
ಆಲ್ಬಮ್ : ತೂಗುಮಂಚ

ಹಾಡು ಕೇಳಿ

ಒಂದು ಮಣ್ಣಿನ ಜೀವ ಎಂದೂ ಮಣ್ಣಿನಲ್ಲಿಯೇ ಉಳಿಯದು
ಸಣ್ಣ ಸಸಿಯೇ ಬೆಳೆದು ಬೇರಿಗೆ ಪಾರಿಜಾತವ ಸುರಿವುದು

ನೀರು ತುಂಬಿದ ಮಣ್ಣ ಪಾತಿಯೇ ಕಂದರಿಗೆ ಕದಲಾರತಿ
ನೂರು ಗುಡಿಗಳ ದೀಪ ವೃಕ್ಷವೇ ಅಮ್ಮನೆತ್ತುವ ಆರತಿ
ಹಕ್ಕಿಪಕ್ಕಿಯ ಬಣ್ಣದಕ್ಷತೆ ಹರಕೆ ಬಾಗಿದ ಮುಡಿಯಲಿ
ಹಸಿರಿನೆಲೆಗಳ ಉಸಿರಿನಾಶೀರ್ವಚನ ಅರಗಿಳಿ ನುಡಿಯಲಿ

ಯಾವುದೋ ಸೋಬಾನೆ ಬಾನೆ ತುಂಬಿ ತುಳುಕಿದ ಝೇಂಕೃತಿ
ತುಟಿಯ ಬಟ್ಟಲು ಸುರಿವ ಅಮೃತಕೆ ಎಲ್ಲಿ ಇದೆಯೋ ಇತಿಮಿತಿ?
ಅಂದು ಒಂದೇ ಬಿಂದು ಇಂದೋ ಎಂದೂ ಬತ್ತದ ನಿರ್ಝರಿ
ಮಣ್ಣ ಮಕ್ಕಳ ಕಣ್ಣನೊರೆಸುವ ಹಸಿರ ಸೆರಗೋ ಥರಾವರಿ

ಹರಕೆ ಇದ್ದರೆ ಯಾವ ಅರಕೆ ನಮ್ಮ ಅಮ್ಮನ ಮಡಿಲಲಿ
ಹಾಲುಗೆನ್ನೆಯ ನಾರಿ ನನ್ನ ಅನ್ನಪೂರ್ಣೆಯ ಗುಡಿಯಲಿ
ಹೂವು ಸಾವಿರ ಸೇರಿ ಒಂದೇ ಹಾರವಾಗುವ ಪಕ್ಷಕೆ
ಲಕ್ಷ ಮಕ್ಕಳೆ ಅಕ್ಷಮಾಲೆ ನಮ್ಮ ತಾಯಿಯ ವಕ್ಷಕೆ

2 thoughts on “ಒಂದು ಮಣ್ಣಿನ ಜೀವ”

  1. ನನ್ನ ಮೆಚ್ಚಿನ ಕವಿತೆಗಳಲ್ಲಿ ಇದೂ ಒಂದು..
    ಈ ಕವಿತೆಯನ್ನು ಕೇಳಿದಾಗಲೆಲ್ಲ ನನ್ನ ಕಣ್ಣೀರಿಟ್ಟಿದ್ದೇನೆ…ಏಕೋ ಗೊತ್ತಿಲ್ಲ..
    ತಾಯಿಯ ಅನಿವಾರ್ಯತೆ ಏಕಿದೆ? ಎಂಬ ಪ್ರಶ್ನೆಗೆ ಇಲ್ಲಿ ಉತ್ತರ ಸಿಕ್ಕಿದೆ..

  2. ಮಹೇಶ್,

    ನಿಜ. ತಾಯಿ ಹರಕೆಯ ಅನಿವಾರ್ಯತೆಯ ಜೊತೆಗೆ, `ಸಣ್ಣ ಸಸಿಯೇ ಬೆಳೆದು ಬೇರಿಗೆ ಪಾರಿಜಾತವ ಸುರಿವುದು’ – ಈ ಸಾಲು ತಾಯಿ ಜೀವಕ್ಕೆ ನೆಮ್ಮದಿ ತರುವ ಮಕ್ಕಳ ಬದುಕಿನ ಸಾರ್ಥಕ್ಯವನ್ನೂ ಸೂಚಿಸುವಂತಿದೆ.

    ಈ ಹಾಡು ನನಗೂ ಬಹಳ ಇಷ್ಟದ್ದು. ಈವರೆಗೆ ಇದನ್ನು ನಾನೆಷ್ಟು ಬಾರಿ ಕೇಳಿದ್ದೇನೋ ನನಗೇ ಗೊತ್ತಿಲ್ಲ. 🙂

Leave a Reply to ಮಹೇಶ್ Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.