ಪ್ರಪಂಚಾದ್ಯಂತ ಇರುವ ಜನರು ‘ಹಣ ಉಳಿಸುವುದು ಹೇಗೆ?’, ‘ಇರುವ ಹಣವನ್ನು ಕಳೆಯದೆ ಬೆಳೆಸುವುದು ಹೇಗೆ?’ ‘ಮೈ ಕರಗಿಸುವುದು ಹೇಗೆ?’, ‘ದಷ್ಟಪುಷ್ಟ ಮೈ ಬೆಳೆಸುವುದು ಹೇಗೆ?’, ‘ಸಂತೆಯಲ್ಲಿ ಕುಂತರೂ ಏಕಾಂತ ಸಾಧಿಸುವುದು ಹೇಗೆ?’, ‘ಯೋಗ ಕಲಿಯುವುದು ಹೇಗೆ?’, ‘ಓದುವುದು ಹೇಗೆ?’, ‘ಓದಿದ್ದನ್ನು ಮರೆಯದೆ ಇರುವುದು ಹೇಗೆ?’, ‘ಅದನ್ನು ಕಲಿಯುವುದು ಹೇಗೆ?’,`ಇದನ್ನು ಮರೆಯುವುದು ಹೇಗೆ?’ ‘ಎಂದೋ ಕಲಿತ ಯಾವುದರಿಂದಲೋ ಇಂದು ದೂರಾಗುವುದು ಹೇಗೆ’ ಹಾಗೆ… ಹೀಗೆ… ಎಂದೆಲ್ಲಾ ಗಂಭೀರ ಚಿಂತನೆಯಲ್ಲಿ ಮುಳುಗಿ ಹೋಗಿರುವಾಗ, ನನ್ನ ಮಂಕು ಮಂಡೆಯಲ್ಲಿ ಸುಳಿದಾಡುತ್ತಿರುವ ವಿಷಯವೇನು ಗೊತ್ತಾ? – ಮಾತಾಡದೆ ಇರುವುದು ಹೇಗೆ? ಆಡಿದರೂ ಕಡಿಮೆ ಮಾತಾಡುವುದು ಹೇಗೆ?

ಮೊಬೈಲುಗಳಲ್ಲಿ, ಮೀಟಿಂಗುಗಳಲ್ಲಿ, ವೇದಿಕೆಗಳಲ್ಲಿ, ರೇಡಿಯೊ, ಟಿವಿಗಳ ಟಾಕ್ ಶೋಗಳಲ್ಲಿ, ಮೆಗಾ ಫೈಟುಗಳೆಂಬ ಹರಟೆ ಕಟ್ಟೆಗಳಲ್ಲಿ ಇಡೀ ಜಗತ್ತೇ ಮಾತಾಡಿ ದಣಿದುಹೋಗುತ್ತಿರುವಾಗ ನಾನೊಬ್ಬಳು ಮಾತು ಕಡಿಮೆ ಮಾಡೋದರಿಂದ ಏನು ಪ್ರಯೋಜನವಿದೆ? ಅದರಿಂದೇನಾದರೂ ಮಾತಿನ ಮಾಲಿನ್ಯದಿಂದಾಗಿ ಬಿಸಿಯೆದ್ದು ಹೋಗುತ್ತಿರುವ ಪರಿಸರದಲ್ಲೇನಾದರೂ ಸುಧಾರಣೆಯಾಗುವುದೇ? ಮಾತಾಡಿ ಮರುಳು ಮಾಡುವವರು ಪ್ರಶಸ್ತಿ ಗಿಟ್ಟಿಸಿಕೊಳ್ಳುವ ಹಾಗೆ ಮಾತಾಡದವರಿಗೂ ಏನಾದರೂ ಪುರಸ್ಕಾರ ನೀಡಲಾಗುತ್ತದೆಯೇ? ಅಥವಾ, ಮಾತಾಡುವರೆಲ್ಲ ನನ್ನಿಂದ ಸ್ಫೂರ್ತಿ ಪಡೆದು ಮೌನದ ಹಾದಿ ಹಿಡಿಯುತ್ತಾರಾ? ಇದಾವುದೂ ಆಗುವುದಿಲ್ಲವೆಂದು ನನಗೂ ಗೊತ್ತಿದೆ. ಆದರೂ ಆ ದಿಸೆಯಲ್ಲಿ ನಾನೊಂದು ಪ್ರಯತ್ನ ಮಾಡುವುದರಲ್ಲಿ ತಪ್ಪಿಲ್ಲವೆಂದುಕೊಳ್ಳುತ್ತೇನೆ.

ಮಾತು ಕಡಿಮೆ ಮಾಡುತ್ತಿದ್ದೇನೆ ಎಂದ ಕೂಡಲೆ, ನೀವೆಲ್ಲರೂ ನಾನು ಯಾರೋ ಭಾರಿ ಮಾತುಗಾತಿ ತಿನ್ನಿಸಿದ ‘ಬಜೆ-ಬೆಣ್ಣೆ’ ಸವಿದು ಬೆಳೆದಿರುವ ಹುಟ್ಟು ವಾಚಾಳಿಯೆಂದು ಭಾವಿಸಬೇಕಾಗಿಲ್ಲ. ಮಾತು ನನ್ನ ಹುಟ್ಟುಗುಣವಂತೂ ಅಲ್ಲವೇ ಅಲ್ಲ. ನನ್ನನ್ನು ಚಿಕ್ಕಂದಿನಿಂದಲೂ ಬಲ್ಲವರು ಈಗ ನನ್ನನ್ನು ನೋಡಿದರೆ ಅವರ ಬಾಯಿಂದ ಮೊದಲು ಹೊರಡುವ ಆಶ್ಚರ್ಯಕರ ಉದ್ಗಾರವೆಂದರೆ -‘ನೀನು ಮೊದಲು ಹೀಗಿರಲಿಲ್ಲ ಬಿಡು. ಆಗೆಲ್ಲಾ ಮಾತೇ ಆಡದೆ ಮುಷುಂಡಿಯಂತೆ ಇರುತ್ತಿದ್ದೆ. ಈಗ ತುಂಬಾ ಮಾತು ನಿನ್ನದು.’ ಆ ನುಡಿಗಳ ಹಿಂದೆ ನನ್ನಲ್ಲಾದ ಬದಲಾವಣೆಯನ್ನು ನಿಖರವಾಗಿ ಗುರುತಿಸಿಬಿಟ್ಟ ಹೆಮ್ಮೆಯೋ, ಮೌನದ ಬಂಗಾರವನ್ನು ತಿಪ್ಪೆಗೆ ಬಿಸಾಕಿ, ಮಾತಿನ ಬೆಳ್ಳಿಯನ್ನು ಅವುಚಿ ಹಿಡಿದುಕೊಂಡಿರುವ ನನ್ನ ಬಗ್ಗೆ ಮರುಕವಿರುತ್ತದೆಯೋ ನನಗಿನ್ನೂ ಗುರುತಿಸಲಾಗಿಲ್ಲ. ಅದೇನೇ ಇರಲಿ, ಆ ಮಾತುಗಳಂತೂ ನೂರಕ್ಕೆ ನೂರು ನಿಜ.

ನಾನು ರಜೆಯಲ್ಲಿ ಹೋಗಲು ಇಷ್ಟಪಡುತ್ತಿದ್ದ ಜಾಗವೆಂದರೆ ನನ್ನ ಅಕ್ಕನ ಮನೆಯೊಂದೇ. ಆ ಕಾಲದಲ್ಲಿ ಬೆಂಗಳೂರಿನ ಹೊರಗಿದೆ ಎನಿಸಿಕೊಂಡಿದ್ದ ಜೀವನಭೀಮಾ ನಗರದಲ್ಲಿ ಅವರು ನೆಲೆಸಿದ್ದೇ ಅದಕ್ಕೆ ಮುಖ್ಯ ಕಾರಣ. ಬಸವನಗುಡಿ, ಚಾಮರಾಜಪೇಟೆಗಳ ಸುತ್ತಮುತ್ತ ಬೆಲ್ಲಕ್ಕೆ ಮುತ್ತಿಕೊಂಡ ಇರುವೆಗಳಂತೆ ನೆಲೆಸಿದ್ದ ನಮ್ಮ ನೆಂಟರಿಷ್ಟರು ಆ ಕಾಲಕ್ಕೇ ತಮಿಳರ ಪಾಳ್ಯವಾಗಿಹೋಗಿದ್ದ ಅಲಸೂರು ಬಡಾವಣೆಯನ್ನು ದಾಟಿಕೊಂಡು ಇತ್ತ ಬರಲು ಅಷ್ಟೇನೂ ಇಷ್ಟಪಡುತ್ತಿರಲಿಲ್ಲ. ನಮ್ಮ ಅಜ್ಜಿಯದಂತೂ ಪ್ರತಿ ಬಾರಿ ಬಂದಾಗಲೂ ಅದೇ ರಾಗ ಅದೇ ಹಾಡು. ಆಟೋ ಇಳಿಯುತ್ತಲೇ, ‘ಅಲ್ಲವೇ ವಸಂತಿ, ಬಾಡಿಗೆಗೆ ಮನೆ ಹಿಡಿಯೋದಕ್ಕೆ ನಿಮಗೆ ಇದೇ ಬಡಾವಣೆಯೇ ಆಗಬೇಕಾಗಿತ್ತೇ? ಏನೋ ನಮ್ಮವರು ತಮ್ಮವರು ಅಂತ ಇದ್ದರೆ ಅವರೊಡನೆ ನಾಲ್ಕು ಮಾತಾಡಿಕೊಂಡಿದ್ದರೆ ಬೇಜಾರು ಕಳೆದಿರುತ್ತಿತ್ತು. ಹೋಗಿಹೋಗಿ ನಮ್ಮ ಭಾಷೆಯೇ ಬರದ ಈ ಕೊಂಗಾಟಿಗಳ ನಡುವೆ ಮನೆ ಮಾಡಿದ್ದೀರಲ್ಲೇ’ ಎಂದು ಮೊಮ್ಮಗಳು ಮತ್ತು ಸೊಸೆ ಎರಡೂ ಆಗಿದ್ದ ಅಕ್ಕನ ಮುಂದೆ ಹಲುಬದಿದ್ದ ದಿನವಿಲ್ಲ. ನಾನು ‘ಅಯ್ಯೊ, ಸಾಕು ಸುಮ್ಮನಿರಜ್ಜಿ. ನೀನು ಹೇಳೋ ಹಾಗೆ ನೆಂಟರಿಷ್ಟರ ಹತ್ತಿರ ಮಾತಾಡಿದರೆ ಮನಸ್ಸಿನ ಬೇಸರ ಕಳೆಯೋದಿರಲಿ, ಅವರ ಕೊಂಕು ಮಾತಿಗೆ ನಿನಗೆ ಇನ್ನೂ ಹೆಚ್ಚು ಬೇಜಾರಾಗತ್ತೆ ಅಷ್ಟೆ’ ಎಂದು ನನ್ನ ಸೀಮಿತ ಅನುಭವದ ಹಿನ್ನಲೆಯಲ್ಲೇ ನುಡಿದು, ‘ಚೋಟುದ್ದ ಇದೀಯ ಮುಂಡೆದೇ, ನಿನಗೇನು ತಿಳಿಯತ್ತೆ ಸುಮ್ಮನಿರು.’ ಎಂದು ಅಜ್ಜಿಯಿಂದ ಬೈಯಿಸಿಕೊಳ್ಳುತ್ತಿದ್ದೆ. ಅಜ್ಜಿಗೆ ತಮ್ಮ ಮಗನ ಮನೆ ಹಿಡಿಸದಿದ್ದರೂ ನನಗಂತೂ ಅಕ್ಕನ ಮನೆ ಅಚ್ಚುಮೆಚ್ಚಾಗಿತ್ತು. ಮನೆಗೆ ಜನ ಬಂದರೆ ವಿಧಿ ಇಲ್ಲದೆ ಅವರನ್ನು ಮಾತಾಡಿಸಬೇಕಾಗುವುದಲ್ಲ ಎಂಬ ನನ್ನ ಒಂಟಿ ಗೂಬೆ ಸ್ವಭಾವಕ್ಕೆ ಅಕ್ಕನ ಮನೆ ಪ್ರಿಯವೆನಿಸಿದ್ದರಲ್ಲಿ ಆಶ್ಚರ್ಯವಿರಲಿಲ್ಲ.

ನಿಮಗೆ ಇನ್ನೂ ನಂಬಿಕೆ ಬರಲಿಲ್ಲವೆಂದರೆ, ನನ್ನ ಒಳಮುಚ್ಚುಗ ಸ್ವಭಾವವನ್ನು ಮನದಟ್ಟು ಮಾಡಿಸಲು ಇನ್ನೊಂದು ಪುರಾವೆ ಕೊಡುತ್ತೇನೆ. ಕಾಲೇಜಿನ ಕೊನೆಯ ದಿನಗಳಲ್ಲಿ ನಡೆಯುತಿದ್ದ ‘ಮೀನು-ಬುಟ್ಟಿ’ ಆಟದಲ್ಲಿ ನನಗೆ ಬಂದಿದ್ದ ಪ್ರಶ್ನೆಗಳೆಲ್ಲ ನನ್ನ ಮೌನ ಸ್ವಭಾವದ ಕುರಿತೇ ಆಗಿತ್ತು. ‘ಮೂಗನ ಕಾಡಿದರೇನು? ಸವಿ ಮಾತನು ಆಡುವನೇನು?’ ಎಂದು ನನ್ನನ್ನು ಒಂದು ಪ್ರಶ್ನೆಯಲ್ಲಿ ಗೇಲಿ ಮಾಡಲಾಗಿತ್ತು! ಸಹಪಾಠಿಗಳ ಕಿಡಿಗೇಡಿ ಪ್ರಶ್ನೆಗಳಿಗೆ ತಕ್ಕ ಉತ್ತರ ಕೊಟ್ಟು ಅವರ ಬಾಯಿ ಮುಚ್ಚಿಸುವುದು ಹೇಗೆಂದು ನನಗೆ ತಿಳಿದಿದ್ದರೂ, ಅದಕ್ಕೂ ಮತ್ತೆ ಅಷ್ಟೆಲ್ಲಾ ಮಾತು ಖರ್ಚುಮಾಡಬೇಕಾಗುತ್ತಲ್ಲ ಎಂದು ಹೆದರಿ, ಎಲ್ಲಾ ಟೀಕೆ-ಟಿಪ್ಪಣಿಗಳ ನಂಜನ್ನು ನೀಲಕಂಠನಂತೆ ನುಂಗಿಕೊಂಡು, ಬೆಲ್ಲ ಜಜ್ಜಿದ ಕಲ್ಲಿನಂತೆ ಸುಮ್ಮನೆ ಕುಳಿತುಬಿಟ್ಟಿದ್ದೆ. ಇಂತಿಪ್ಪ ಮೌನ ಮುನಿಯಂತಿದ್ದ ನಾನು ಬದುಕಿನ ಯಾವುದೋ ಒಂದು ಹಂತದಲ್ಲಿ ಮೌನ ಸಾಕೆಂದು ಬಿಸಾಕಿ ಮಾತಾಡಲು ಶುರುಮಾಡಿದ್ದೆ. ಹಿಂದೆ ಮಾತಾಡದೆ ಉಳಿಸಿದ್ದ ಬಾಕಿಯನ್ನೆಲ್ಲಾ ಬಡ್ಡಿ ಸಮೇತ ತೀರಿಸಿಕೊಳ್ಳುವಂತೆ!

ಈಗೀಗ ಘಂಟೆಗಟ್ಟಲೆ ದೂರವಾಣಿ ಮಾತುಕಥೆಗಳ ನಡುವೆ ಅಪರೂಪಕ್ಕೆಂಬಂತೆ ವಿರಾಮ ದೊರಕಿದಾಗ ನನ್ನಲ್ಲಿ ನಾನು ‘ನಾನೇಕೆ ಹೀಗಾದೆ?’ ಎಂದು ಆತ್ಮಾವಲೋಕನ ಮಾಡಿಕೊಳ್ಳಲು ಪ್ರಯತ್ನಿಸಿದ್ದುಂಟು. ಅದಕ್ಕೆ ಕೆಲವು ಕಾರಣಗಳನ್ನೂ ಊಹಿಸಿದ್ದೇನಾದರೂ ಯಾವುದೂ ಖಚಿತವಲ್ಲ. ‘ಅವನಿಗೆ ಸ್ವಲ್ಪವೂ ಗರ್ವವಿಲ್ಲ, ಎಷ್ಟು ಚೆನ್ನಾಗಿ ಅರಳು ಹುರಿದಂತೆ ಮಾತಾಡುತ್ತಾನೆ’, ‘ಇವಳಿಗೆ ಅದೇನು ಅಹಂಕಾರ? ಮಾತಾಡಿದರೆ ಮುತ್ತು ಸುರಿಯಿತು ಅನ್ನುವ ಹಾಗೆ ಆಡ್ತಾಳೆ’, ‘ಬಾಯಿದ್ದವನು ಬರದಲ್ಲೂ ಬದುಕಿಯಾನು’ ಎಂಬಂತಹ ಮಾತುಗಳು ನನ್ನ ಕಿವಿಯ ಮೇಲೆ ಸತತವಾಗಿ ಬಿದ್ದು, ನನಗೇ ಅರಿವಿಲ್ಲದಂತೆ ನನ್ನನ್ನು ಬದಲಿಸಿರಬಹುದೇ? ಬಹುಶಃ ಮಾತಾಡದವರಿಗೆ ಈ ಲೋಕದಲ್ಲಿ ಉಳಿಗಾಲವೇ ಇಲ್ಲ ಎನ್ನುವ ಅಭದ್ರ ಭಾವನೆಯೇ ನನ್ನನು ಮೌನದ ಕೋಟೆಯೊಡೆದು ಹೊರಬರುವಂತೆ ಮಾಡಿರಬಹುದೇ? ಎಂದು ನನ್ನೊಳಗೇ ನಾನು ಯೋಚಿಸಿದ್ದುಂಟು.

ನನ್ನ ಆಪ್ತ ಗೆಳತಿಯೊಬ್ಬಳಲ್ಲಿ ನನ್ನ ನೋವು ಹಂಚಿಕೊಂಡೆ – ‘ಈಚೆಗೆ ನನ್ನ ಮಾತು ತುಂಬಾ ಜಾಸ್ತಿಯಾಗಿದೆ ಅನಿಸುತ್ತಿದೆ ಕಣೆ. ಅಗತ್ಯಕ್ಕಿಂತಲೂ ಹೆಚ್ಚು ಮಾತಾಡುತ್ತಿದ್ದೇನೆ ಎಂಬ ಭಾವನೆ ನನ್ನನ್ನು ಕಾಡುತ್ತಿದೆ. ಮಾತುಗಳನ್ನೆಲ್ಲ ಆಡಿ ಮುಗಿಸಿದ ನಂತರವಷ್ಟೇ ಅಡಿದ ಮಾತು ಹೆಚ್ಚಾಯಿತೇನೊ ಎನ್ನುವಂಥ ಹಳಹಳಿಕೆಯ ಭಾವ ಮೂಡುತ್ತದೆ. ಮಾತೇ ಆಡಬಾರದು ಎಂದು ನಿರ್ಧರಿಸಿದಾಗಲೂ ಮಾತುಗಳು ನನ್ನ ಅಂಕೆ ಮೀರಿ ಹೊರಬಂದಿರುತ್ತವೆ. ಅತಿಯೆನ್ನಿಸುವಷ್ಟು ಅಲ್ಲದಿದ್ದರೂ ಅಗತ್ಯವಿರುವಷ್ಟು ಮೌನವನ್ನು ಸಾಧಿಸಲು ನಿನ್ನಲ್ಲಿ ಏನಾದರೂ ಉಪಾಯವಿದೆಯೇ..?’ ಎಂದು ನನ್ನೆಲ್ಲಾ ಸಮಸ್ಯೆಗಳನ್ನೂ ಅವಳಿಗೆ ವಿವರಿಸತೊಡಗಿದೆ.

ಬಹಳಷ್ಟು ಓದಿಕೊಂಡಿದ್ದು, ಲೋಕಾನುಭವಿಯೂ ಆಗಿದ್ದ ಅವಳಿಂದ ಏನಾದರೂ ಪರಿಹಾರ ಸಿಕ್ಕಿರುತ್ತಿತ್ತೋ ಏನೊ. ಆದರೆ, ನನ್ನ ಮಾತಿನ್ನೂ ಮುಗಿದಿತ್ತೋ ಇಲ್ಲವೋ, ನನ್ನ ಮಾತನ್ನು ಅವಳು ಪೂರ್ತಿಯಾಗಿ ಕೇಳಿಸಿಕೊಂಡಳೋ ಇಲ್ಲವೋ ಎಂದು ನನಗೇ ಅನುಮಾನ ಬರುವಂತೆ ಅವಳು ಬೇರೇನೋ ಮಾತು ಪ್ರಾರಂಭಿಸಿಬಿಟ್ಟಿದ್ದಳು! ಇದು ಕೇವಲ ನನ್ನೊಬ್ಬಳ ಸಮಸ್ಯೆ ಅಲ್ಲವೆಂದು ನನಗೆ ಮನವರಿಕೆಯಾಗಿದ್ದೇ ಆಗ. ಎಲ್ಲರೂ ಮಾತಾಡುತ್ತಾರೆ. ಒಬ್ಬರ ಮಾತು ಕೇಳಿಸಿಕೊಳ್ಳುವ ವ್ಯವಧಾನವಿಲ್ಲದೆ ಇನ್ನೊಬ್ಬರು ಮಾತಿಗಿಳಿದಿರುತ್ತಾರೆ. ಫೋನಿನಲ್ಲಿ ಅತ್ತಲಿಂದ ಒಬ್ಬರು ಮಾತಾಡುತ್ತಿದ್ದಾಗಲೇ ಅವರಿಗೆ ಪೈಪೋಟಿ ನೀಡುವಂತೆ ಇತ್ತಲಿಂದ ಇವರೂ ಮಾತಾಡುತ್ತಾ ಸಾಥ್ ನೀಡುತ್ತಾರೆ. ಟಿವಿಯಲ್ಲಿ ಸಂದರ್ಶನಕ್ಕೆಂದು ಕರೆಸಿದ ಅತಿಥಿಯ ಮಾತನ್ನು ಅರ್ಧದಲ್ಲಿಯೇ ತಡೆದು ಸಂದರ್ಶಕನೇ ಮಾತಾಡತೊಡಗುತ್ತಾನೆ. ಮೌನದ ಮಹತ್ವವನ್ನು ಅರಿತುಕೊಳ್ಳಲು ಕಾಸು ಕೊಟ್ಟು ಕಮ್ಮಟಗಳಲ್ಲಿ ಭಾಗವಹಿಸುವ ಭಕ್ತರು ಕೂಡ ಗುರುಗಳ ಮಾತಿನ ಹೊಳೆಯಲ್ಲಿ ಮಿಂದೆದ್ದು ಹೊರಬರುತ್ತಾರೆ. ಹೀಗಿರುವಾಗ ನಾನೊಬ್ಬಳು ಮಾತಾಡಿದರೆ ತಾನೇ ಏನಂತೆ? ಎಂದು ನನ್ನ ಮನವನ್ನು ನಾನೇ ಸಂತೈಸಿಕೊಂಡೆ.

ಮಾತುಗಾರರನ್ನು ನಮ್ಮ ಸಮಾಜ ಎಂದೂ ಪ್ರೀತಿಯಿಂದ ಸ್ವಾಗತಿಸುತ್ತಲೇ ಬಂದಿದೆ. ಅರಳು ಹುರಿದಂತೆ ಮಾತಾಡುವ ರಾಜಕಾರಣಿಯ ಬುಟ್ಟಿಗೇ ಹೆಚ್ಚು ಮತದಾರರರು ಬೀಳುತ್ತಾರೆ. ಆಕರ್ಷಕ ಮಾತಿನ ಶಿಕ್ಷಕ ವಿದ್ಯಾರ್ಥಿ ವೃಂದದಲ್ಲಿ ಜನಪ್ರಿಯನಾಗಿರುತ್ತಾನೆ. ಮಾತಿನವನಿಗಿಂತ ಮಾತಾಡದವನ ಸುತ್ತಲೇ ಅನುಮಾನಗಳ ಹುತ್ತ ಏಳುವುದು ಜಾಸ್ತಿ. ಜೊತೆಗೆ ‘ಗುಮ್ಮನಗುಸಕ’ ಎಂಬ ಉಚಿತ ಬಿರುದು ಬೇರೆ. ವಟವಟ ಎಂದು ಮಾತಾಡುವವರ ಹೃದಯದಲ್ಲಿ ಕಲ್ಮಷಗಳೊಂದು ಉಳಿಯದೆ, ಎಲ್ಲವೂ ಮಾತಿನ ಮೂಲಕ ತೊಳೆದುಹೋಗಿರುತ್ತದೆ ಎಂಬ ಏನೇನೂ ಆಧಾರಗಳಿಲ್ಲದ ನಂಬಿಕೆಯೂ ಇದೆ. ಸಂಖ್ಯಾವಾರು ದೃಷ್ಟಿಯಿಂದ ನೋಡಿದರೂ ಮಾತಾಡುವವರೇ ಬಹುಸಂಖ್ಯಾತರು! ಅಷ್ಟಕ್ಕೂ ಮಾತಾಡಬೇಡ ಎಂದು ನಮಗೆ ಹೇಳಿದವರಾದರೂ ಯಾರು? ‘ನುಡಿದರೆ ಮುತ್ತಿನ ಹಾರದಂತಿರಬೇಕು’ ಎಂದ ಬಸವಣ್ಣನವರು, ನಾವಾಡುವ ನುಡಿಯ ಅಂದ ಹೆಚ್ಚಿಸಿಕೊಳ್ಳಲು ಹೇಳಿದ್ದಾರೆಯೇ ಹೊರತು ಮಾತಾಡಲೇಬಾರದೆಂದಲ್ಲವಲ್ಲ? ಡಿವಿಜಿಯವರು ‘ಮಂಕುತಿಮ್ಮನ ಕಗ್ಗ’ದಲ್ಲಿ ‘ಹೊಲಿ ನಿನ್ನ ತುಟಿಗಳನು ಮಂಕುತಿಮ್ಮ’ ಎಂದು ಗದರಿದ್ದಾರಾದರೂ, ಆ ಸಂದರ್ಭವೇ ಬೇರೆ ಇರುವುದರಿಂದ ಅವರು ಬೈದಿದ್ದು ನಮಗಲ್ಲ ಎಂದುಕೊಂಡು ಧೈರ್ಯವಾಗಿ ಮಾತಾಡಬಹುದು. ಆದರೂ ಮಾತು ಕಡಿಮೆ ಮಾಡಿಕೊಳ್ಳುವ ಹುಚ್ಚು ನನಗೇಕೊ!

‘ಮಾತಾಡೋದೇ ತಪ್ಪಾ?’ – ಎಂದು ನಾನು ಯಾರಲ್ಲೂ ಕೇಳಿಲ್ಲವಾದರೂ, ನನ್ನನ್ನೇ ನಾನು ಆಗಾಗ ಈ ಪ್ರಶ್ನೆ ಕೇಳಿಕೊಳ್ಳುವುದುಂಟು. ತಪ್ಪಾ? ಮಾತಾಡೋದು ತಪ್ಪಾ? ಉತ್ತರ ಮಾತ್ರ ಇನ್ನೂ ಸಿಕ್ಕಿಲ್ಲ. ಅದೇನೇ ಇರಲಿ, ಸೀರಿಯಸ್ ಆಗಿ ಹೇಳ್ತಾ ಇದ್ದೀನಿ. ನಾನು ಮಾತು ಕಡಿಮೆ ಮಾಡುವ ಪ್ರಯತ್ನದಲ್ಲಿದ್ದೀನಿ. ನೀವೇನಾದರೂ ನನ್ನಲ್ಲಿ ಮಾತಾಡೋದಿದ್ದರೆ ಈಗಲೇ ಆಡಿಬಿಡಿ.

***

(ವಿಜಯ ಕರ್ನಾಟಕ ‘ದೀಪಾವಳಿ’ ವಿಶೇಷಾಂಕದಲ್ಲಿ ಪ್ರಕಟವಾಗಿದ್ದ ಬರಹ.)

4 thoughts on “ಮಾತಾಡ್ ಮಾತಾಡ್ ಮಲ್ಲಿಗೆ!”

  1. ನಿಮ್ಮ ಹರಟೆ ಖುಶಿ ಕೊಟ್ಟಿತು. ಎಷ್ಟೆಲ್ಲಾ ಚಂದದ ಮಾತು ಹೇಳಿದ್ದೀರಲ್ಲ!

    1. ಕಾಕಾ, ನಿಮ್ಮಲ್ಲಿಗೆ ಬಂದಿದ್ದಾಗ, ನಿಮಗೂ ನನ್ನ ಮಾತಿನ ಪರಿಚಯವಾಗಿರಬೇಕು! 🙂

  2. ನಾನು ಜಾಸ್ತಿ ಮಾತಾಡಕ್ಕೇ try ಮಾಡ್ಥಿದೀನಿ! Exchange ಮಾಡ್ಕೋಳ್ಳೊಣಾ?

  3. Aruna, ಮೊದಲು ನೀವು ಮಾತಾಡಲು ಶುರುಮಾಡಿ, Exchange ಎಲ್ಲಾ ಆಮೇಲೆ ಮಾತಾಡಬಹುದು. 🙂

Leave a Reply to Aruna Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.