ಹರಿಕಥಾಮೃತಸಾರ – ಕರುಣಾ ಸಂಧಿ
ರಚನೆ : ಶ್ರೀ ಜಗನ್ನಾಥ ದಾಸರು

ಹರಿಕಥಾಮೃತಸಾರ ಗುರುಗಳ|
ಕರುಣದಿಂದಾಪನಿತು ಪೇಳುವೆ|
ಪರಮಭಗವದ್ಭಕ್ತರಿದಾನದರದಿ ಕೇಳುವುದು||ಪ||

ಶ್ರವಣ ಮನಕಾನಂದವೀವುದು |
ಭವಜನಿತ ದುಃಖಗಳ ಕಳೆವುದು |
ವಿವಿಧ ಭೋಗಗಳಿಹಪರಂಗಳಲಿತ್ತು ಸಲಹುವುದು ||
ಭುವನ ಪಾವನನೆನಿಪ ಲಕ್ಷ್ಮೀ |
ಧವನ ಮಂಗಳ ಕಥೆಯ ಪರಮೋ |
ತ್ಸವದಿ ಕಿವಿಗೊಟ್ಟಾಲಿಪುದು ಭೂಸುರರು ದಿನದಿನದಿ || ೧ ||

ಮಳೆಯ ನೀರೋಣಿಯೊಳು ಪರಿಯಲು |
ಬಳಸರೂರೊಳಗಿದ್ದ ಜನರಾ |
ಜಲವು ಹೆದ್ದೊರೆಗೂಡೆ ಮಜ್ಜನ ಪಾನ ಗೈದಪರು ||
ಕಲುಷ ವಚನಗಳಾದರಿವು ಬಾಂ |
ಬೊಳೆಯ ಪೆತ್ತನ ಪಾದಮಹಿಮಾ |
ಜಲಧಿ ಪುಕ್ಕುದರಿಂದೆ ಮಾಣ್ದಪರೇ ಮಹೀಸುರರು || ೨ ||

ಶ್ರುತಿತತಿಗಳಭಿಮಾನಿ ಲಕುಮೀ |
ಸ್ತುತಿಗಳಿಗೆ ಗೋಚರಿಸದಪ್ರತಿ |
ಹತ ಮಹೈಶ್ವರ್ಯಾದ್ಯಖಿಳಸದ್ಗುಣಗಣಾಂಬೋಧಿ ||
ಪ್ರತಿದಿವಸ ತನ್ನಂಘ್ರಿ ಸೇವಾ |
ರತ ಮಹಾತ್ಮರು ಮಾಡಿತಿಹ ಸಂ
ಸ್ತುತಿಗೆ ವಶನಾಗುವನಿವನ ಕಾರುಣ್ಯಕೇನೆಂಬೆ || ೩ ||

ಮನವಚನಕತಿದೂರ ನೆನೆವರ |
ನನುಸರಿಸಿ ತಿರುಗುವನು ಜಾಹ್ನವಿ
ಜನಕ ಜನರೊಳಗಿದ್ದು ಜನಿಸುವ ಜಗದುದರ ತಾನು ||
ಘನ ಮಹಿಮ ಗಾಂಗೇಯನುತ ಗಾ |
ಯನವ ಕೇಳುತ ಗಗನ ಚರ ವಾಹನ
ದಿವೌಕಸರೊಡನೆ ಚರಿಸುವ ಮನ ಮನೆಗಳಲ್ಲಿ || ೪ ||

ಮಲಗಿ ಪರಮಾದರದಿ ಪಾಡಲು |
ಕುಳಿತು ಕೇಳುವ ಕುಳಿತು ಪಾಡಲು |
ನಿಲುವ ನಿಂತರೆ ನಲಿವ ನಲಿದರೆ ಒಲಿವೆ ನಿಮಗೆಂಬ ||
ಸುಲಭನೋ ಹರಿ ತನ್ನವರನರೆ |
ಘಳಿಗೆ ಬಿಟ್ಟಗಲನು ರಮಾಧವ |
ನೊಲಿಸಲರಿಯದೆ ಪಾಮರರು ಬಳಲುವರು ಭವದೊಳಗೆ || ೫ ||

ಮನದೊಳಗೆ ತಾನಿದ್ದು ಮನವೆಂ |
ದೆನಿಸಿಕೊಂಬನು ಮನದ ವೃತ್ತಿಗ |
ಳನುಸರಿಸಿ ಭೋಗಗಳನೀವನು ತ್ರಿವಿಧ ಚೇತನಕೆ ||
ಮನವನಿತ್ತರೆ ತನ್ನನೀವನು |
ತನುವ ದಂಡಿಸಿ ದಿನದಿನದಿ ಸಾ |
ಧನವ ಮಾಳ್ಪರಿಗಿತ್ತಪನು ಸ್ವರ್ಗಾದಿಭೋಗಗಳ || ೬ ||

ಪರಮ ಸತ್ಪುರುಷಾರ್ಥ ರೂಪನು |
ಹರಿಯೆ ಲೋಕಕೆ ಎಂದು ಪರಮಾ |
ದರದಿ ಸದುಪಾಸನೆಯ ಗೈವರಿಗಿತ್ತಪನು ತನ್ನ ||
ಮರೆದು ಧರ್ಮಾರ್ಥಗಳ ಕಾಮಿಸು |
ವರಿಗೆ ನಗುತತಿ ಶೀಘ್ರದಿಂದಲಿ |
ಸುರಪತನಯ ಸುಯೋಧನಿರಿಗಿತ್ತಂತೆ ಕೊಡುತಿಪ್ಪ || ೭ ||

ಜಗವನೆಲ್ಲವ ನಿರ್ಮಿಸುವ ನಾ |
ಲ್ಮೊಗನೊಳಗೆ ತಾನಿದ್ದು ಸಲಹುವ |
ಗಗನಕೇಶನೊಳಿದ್ದು ಸಂಹರಿಸುವನು ಲೋಕಗಳ ||
ಸ್ವಗತಭೇದವಿವರ್ಜಿತನು ಸ |
ರ್ವಗ ಸದಾನಂದೈಕದೇಹನು |
ಬಗೆಬಗೆಯ ನಾಮದಲಿ ಕರೆಸುವ ಭಕುತರನು ಪೊರೆವ || ೮ ||

ಒಬ್ಬನಲಿ ನಿಂತಾಡುವನು ಮ |
ತ್ತೊಬ್ಬನಲಿ ನೋಡುವನು ಬೇಡುವ |
ನೊಬ್ಬನಲಿ ನೀಡುವನು ಮಾತಾಡುವನು ಬೆರಗಾಗಿ ||
ಅಬ್ಬರದ ಹೆದ್ದೈವನಿವ ಮ
ತ್ತೊಬ್ಬರನು ಲೆಕ್ಕಿಸನು ಲೋಕದೊ |
ಳೊಬ್ಬನೇ ತಾ ಬಾಧ್ಯಬಾಧಕನಾಹ ನಿರ್ಭೀತ || ೯ ||

ಶರಣಜನಮಂದಾರ ಶಾಶ್ವತ |
ಕರುಣಿ ಕಮಲಾಕಾಂತ ಕಾಮದ |
ಪರಮಪಾವನತರ ಸುಮಂಗಳಚರಿತ ಪಾರ್ಥಸಖ ||
ನಿರುಪಮಾನಂದಾತ್ಮನಿರ್ಗತ |
ದುರಿತ ದೇವವರೇಣ್ಯನೆಂದಾ |
ದರದಿ ಕರೆಯಲು ಬಂದೊದಗುವನು ತನ್ನವರ ಬಳಿಗೆ || ೧೦ ||

ಇಟ್ಟಿಕಲ್ಲನು ಭಕುತಿಯಿಂದಲಿ |
ಕೊಟ್ಟ ಭಕುತಗೆ ಮೆಚ್ಚಿ ತನ್ನನೆ |
ಕೊಟ್ಟ ಬಡಬ್ರಾಹ್ಮಣನ ಒಪ್ಪಿಡಿಯವಲಿಗಖಿಳಾರ್ಥ ||
ಕೆಟ್ಟ ಮಾತುಗಳೆಂದ ಚೈದ್ಯನ |
ಪೊಟ್ಟೆಯೊಳಗಿಂಬಿಟ್ಟು ಬಾಣದ |
ಲಿಟ್ಟ ಭೀಷ್ಮನವಗುಣಗಳೆಣಿಸಿದನೆ ಕರುಣಾಳು || ೧೧ ||

ಧನವ ಸಂರಕ್ಷಿಸುವ ಫಣಿ ತಾ |
ನುಣದೆ ಮತ್ತೊಬ್ಬರಿಗೆ ಕೊಡದನು |
ದಿನದಿ ನೋಡುತ ಸುಖಿಸುವಂದದಿ ಲಕುಮಿವಲ್ಲಭನು ||
ಪ್ರಣತರನು ಕಾಯ್ದಿಹನು ನಿಷ್ಕಾ |
ಮನದಿ ನಿತ್ಯಾನಂದಮಯ ದು |
ರ್ಜನರ ಸೇವೆಯನೊಲ್ಲನಪ್ರತಿಮಲ್ಲ ಜಗಕೆಲ್ಲ || ೧೨ ||

ಜನನಿಯನು ಕಾಣದಿಹ ಬಾಲಕ |
ನೆನೆನೆನೆದು ಹಲುಬುತಿರೆ ಕತ್ತಲೆ |
ಮನೆಯೊಳಡಗಿದ್ದವನ ನೋಡುತ ನಗುತ ಹರುಷದಲಿ ||
ತನಯನಂ ಬಿಗಿದಪ್ಪಿ ರಂಬಿಸಿ |
ಕನಲಿಕೆಯ ಕಳೆವಂತೆ ಮಧುಸೂ |
ದನನು ತನ್ನವರಿದ್ದೆಡೆಗೆ ಬಂದೊದಗಿ ಸಲಹುವನು || ೧೩ ||

ಬಾಲಕನ ಕಲಭಾಷೆ ಜನನಿ |
ಕೇಳಿ ಸುಖಪಡುವಂತೆ ಲಕ್ಷ್ಮೀ |
ಲೋಲ ಭಕುತರು ಮಾಡುತಿಹ ಸಂಸ್ತುತಿಗೆ ಹಿಗ್ಗುವನು ||
ತಾಳ ತನ್ನವರಲ್ಲಿ ಮಾಡುವ |
ಹೇಳನವ ಹೆದ್ದೈವ ವಿದುರನ |
ಆಲಯದಿ ಪಾಲುಂಡು ಕುರುಪನ ಮಾನವನೆ ಕೊಂಡ || ೧೪ ||

ಸ್ಮರಿಸುವರ ಅಪರಾಧಗಳ ತಾ |
ಸ್ಮರಿಸ ಸಕಲೇಷ್ಟಪ್ರದಾಯಕ |
ಮರಳಿ ತನಗರ್ಪಿಸಲು ಕೊಟ್ಟುದನಂತಮಡಿಮಾಡಿ ||
ಪರಿಪರಿಯಲುಂಡುಣಿಸಿ ಸುಖ ಸಾ |
ಗರದಿ ಲೋಲಾಡಿಸುವ ಮಂಗಳ |
ಚರಿತ ಚಿನ್ಮಯಗಾತ್ರ ಲೋಕಪವಿತ್ರ ಸುಚರಿತ್ರ || ೧೫ ||

ಏನು ಕರುಣಾನಿಧಿಯೋ ಹರಿ ಮ|
ತ್ತೇನು ಭಕ್ತಾಧೀನನೋ ಇ|
ನ್ನೇನು ಈತನ ಲೀಲೆ ಇಚ್ಛಾಮಾತ್ರದಲಿ ಜಗವ||
ತಾನೆ ಸೃಜಿಸುವ ಪಾಲಿಸುವ ನಿ|
ರ್ವಾಣ ಮೊದಲಾದಖಿಳ ಲೋಕ|
ಸ್ಥಾನದಲಿ ಮತ್ತವರನಿಟ್ಟಾನಂದ ಪಡಿಸುವನು || ೧೬ ||

ಜನಪ ಮೆಚ್ಚಿದರೀವ ಧನವಾ|
ಹನ ವಿಭೂಷಣವಸನ ಭೂಮಿಯ|
ತನು ಮನಗಳಿತ್ತಾದರಿಪರುಂಟೇನೋ ಲೋಕದೊಳು ||
ಅನವರತ ನೆನೆವವರನಂತಾ|
ಸನವೆ ಮೊದಲಾದಾಲಯದೊಳಿ|
ಟ್ಟುಣುಗನಂದದಲವರ ವಶನಾಗುವ ಮಹಾಮಹಿಮ || ೧೭ ||

ಭುವನ ಪಾವನ ಛರಿತ ಪುಣ್ಯ|
ಶ್ರವಣ ಕೀರ್ತನ ಪಾಪನಾಶನ|
ಕವಿಭಿರೀಡಿತ ಕೈರವದಳ ಶ್ಯಾಮ ನಿಸ್ಸೀಮ ||
ಯುವತಿ ವೇಷದಿ ಹಿಂದೆ ಗೌರೀ|
ಧವನ ಮೋಹಿಸಿ ಕೆಡಿಸಿ ಉಳಿಸಿದ|
ಇವನ ಮಾಯವ ಗೆಲುವನಾವನು ಈ ಜಗತ್ರಯದಿ || ೧೮ ||

ಪಾಪಕರ್ಮವ ಸಹಿಸುವೆಡೆ ಲ|
ಕ್ಷ್ಮೀಪತಿಗೆ ಸಮರಾದ ದಿವಿಜರ|
ನೀ ಪಯೋಜ ಭವಾಂಡದೊಳಗಾವಲ್ಲಿ ನಾ ಕಾಣೆ |
ಗೋಪ ಗುರುವಿನ ಮಡದಿ ಭೃಗು ನಗ||
ಚಾಪ ಮೊದಲಾದವರು ಮಾಡಿದ ಮ|
ಹಾಪರಾಧಗಳೆಣಿಸಿದನೆ ಕರುಣಾ ಸಮುದ್ರ ಹರಿ || ೧೯ ||

ಅಂಗುಟಾಗ್ರದಿ ಜನಿಸಿದಮರ ತ|
ರಂಗಿಣಿಯು ಲೋಕತ್ರಯಗಳಘ|
ಹಿಂಗಿಸುವಳವ್ಯಾಕೃತಾಕಾಶಾಂತ ವ್ಯಾಪಿಸಿದ ||
ಇಂಗಡಲ ಮಗಳೊಡೆಯನಂಗೋ|
ಪಾಂಗಗಳಲಿಪ್ಪಮಲನಂತ ಸು|
ಮಂಗಳಪ್ರದನಾಮ ಪಾವನ ಮಾಳ್ಪುದೇನರಿದು || ೨೦ ||

ಕಾಮಧೇನು ಸುಕಲ್ಪತರು ಚಿಂ|
ತಾಮಣಿಗಳಮರೇಂದ್ರ ಲೋಕದಿ|
ಕಾಮಿತರ್ಥಗಳೀವುವಲ್ಲದೆ ಸೇವೆಮಾಳ್ವರಿಗೆ ||
ಶ್ರೀ ಮುಕುಂದನ ಪರಮ ಮಂಗಳ|
ನಾಮ ನರಕಸ್ಥರನು ಸಲಹಿತು|
ಪಾಮರರ ಪಂಡಿತರೆನಿಸಿ ಪುರುಷಾರ್ಥ ಕೊಡುತಿಹುದು || ೨೧ ||

ಮನದೊಳಗೆ ಸುಂದರ ಪದಾರ್ಥವ|
ನೆನೆದುಕೊಡೆ ಕೈಗೊಂಡು ಬಲು ನೂ|
ತನ ಸುಶೋಭಿತ ಗಂಧಸುರಸೋಪೇತ ಫಲರಾಶಿ |
ದ್ಯುನದಿನಿವಹಗಳಂತೆ ಕೊಟ್ಟವ|
ರನು ಸದಾ ಸಂತಯಿಸುವನು ಸ|
ದ್ಗುಣವ ಕದ್ದವರಘವ ಕದಿವನು ಅನಘನೆಂದೆನಿಸಿ|| ೨೨ ||

ಚೇತನಾಚೇತನ ವಿಲಕ್ಷಣ|
ನೂತನ ಪದಾರ್ಥಗಳೊಳಗೆ ಬಲು|
ನೂತನತಿ ಸುಂದರಕೆ ಸುಂದರ ರಸಕೆ ರಸರೂಪ |
ಜಾತರೂಪೋದರ ಭವಾದ್ಯರೊ|
ಳಾತತೆ ಪ್ರತಿಮ ಪ್ರಭಾವ ಧ|
ರಾತಳ ದೊಳೆಮ್ಮೊಡನೆ ಆಡುತಲಿಪ್ಪ ನಮ್ಮಪ್ಪ || ೨೩ ||

ತಂದೆ ತಾಯ್ಗಳು ತಮ್ಮ ಶಿಶುವಿಗೆ|
ಬಂದ ಭಯಗಳ ಪರಿಹರಿಸಿ ನಿಜ|
ಮಂದಿರದಿ ಬೇಡಿದುದನಿತ್ತಾದರಿಸುವಂದದಲಿ ||
ಹಿಂದೆ ಮುಂದೆಡಬಲದಿ ಒಳ ಹೊರ|
ಗಿಂದಿರೇಶನು ತನ್ನವರ ನೆಂ|
ದೆಂದು ಸಲಹುವನಾಗಸದವೋಲೆತ್ತ ನೋಡಿದರು || ೨೪ ||

ಒಡಲ ನೆಳಲಂದದಲಿ ಹರಿ ನ|
ಮ್ಮೊಡನೆ ತಿರುಗುವನೊಂದರೆ ಕ್ಷಣ|
ಬಿಡದೆ ಬೆಂಬಲನಾಗಿ ಭಕ್ತಾಧೀನನೆಂದೆನಿಸಿ ||
ತಡೆವ ದುರಿತೌಘಗಳ ಕಾಮದ|
ಕೊಡುವ ಸಕಲೇಷ್ಟಗಳ ಸಂತತ|
ನಡೆವ ನಮ್ಮಂದದಲಿ ನವಸುವಿಶೇಷ ಸನ್ಮಹಿಮ || ೨೫ ||

ಬಿಟ್ಟವರ ಭವ ಪಾಶದಿಂದಲಿ|
ಕಟ್ಟುವನು ಬಹು ಕಠಿಣನಿವ ಶಿ|
ಷ್ಟೇಷ್ಟನೆಂದರಿದನವರತ ಸದ್ಭಕ್ತಿಪಾಶದಲಿ ||
ಕಟ್ಟುವರ ಭವ ಕಟ್ಟು ಬಿಡಿಸುವ|
ಸಿಟ್ಟಿನವನಿವನಲ್ಲ ಕಾಮದ|
ಕೊಟ್ಟು ಕಾವನು ಸಕಲ ಸೌಖ್ಯಗಳಿಹಪರಂಗಳಲಿ || ೨೬ ||

ಕಣ್ಣಿಗೆವೆಯಂದದಲಿ ಕೈ ಮೈ|
ತಿಣ್ಣಿಗೊದಗುವ ತೆರದಿ ಪಲ್ಗಳು|
ಪಣ್ಣು ಫಲಗಳನಗಿದು ಜಿಹ್ವೆಗೆ ರಸವನೀವಂತೆ ||
ಪುಣ್ಯ ಫಲಗಳನೀವುದಕೆ ನುಡಿ|
ವೆಣ್ಣಿನಾಣ್ಮಾಂಡದೊಳು ಲಕ್ಷ್ಮಣ|
ನಣ್ಣನೊದಗುವ ಭಕ್ತರವಸರಕಮರಗಣಸಹಿತ || ೨೭ ||

ಕೊಟ್ಟುದನು ಕೈಗೊಂಬರೆಕ್ಷಣ|
ಬಿಟ್ಟಗಲ ತನ್ನವರ ದುರಿತಗ|
ಳಟ್ಟುವನು ದೂರದಲಿ ದುರಿತಾರಣ್ಯ ಪಾವಕನು ||
ಬೆಟ್ಟ ಬೆನ್ನಲಿ ಹೊರಿಸಿದವರೊಳು|
ಸಿಟ್ಟು ಮಾಡಿದನೇನೋ ಹರಿ ಕಂ|
ಗೆಟ್ಟ ಸುರರಿಗೆ ಸುಧೆಯನುಣಿಸಿದ ಮುರಿದನಹಿತರನು || ೨೮ ||

ಖೇದ ಮೋದ ಜಯಾಪಜಯ ಮೊದ|
ಲಾದ ದೋಷಗಳಿಲ್ಲ ಚಿನ್ಮಯ|
ಸಾದರದಿ ತನ್ನಂಘ್ರಿ ಕಮಲವ ನಂಬಿ ತುತಿಸುವರ ||
ಕಾದುಕೊಂಡಿಹ ಪರಮ ಕರುಣ ಮ|
ಹೋದಧಿಯು ತನ್ನವರು ಮಾಳ್ದಪ|
ರಾಧಗಳ ನೋಡದಲೆ ಸಲಹುವ ಸರ್ವಕಾಮದನು || ೨೯ ||

ಮೀನ ಕೂರ್ಮ ವರಾಹ ನರ ಪಂ|
ಚಾನನಾತುಳ ಶೌರ್ಯ ವಾಮನ|
ರೇಣುಕಾತ್ಮಜ ರಾವಣಾರಿ ನಿಶಾಚರ ಧ್ವಂಸಿ ||
ಧೇನುಕಾಸುರ ಮಥನ ತ್ರಿಪುರವ|
ಹಾನಿಗೈಸಿದ ನಿಪುಣ ಕಲಿಮುಖ|
ದಾನವರ ಸಂಹರಿಸಿ ಕಾಯ್ದ ಸುಜನರನು || ೩೦ ||

ಶ್ರೀ ಮನೋರಮ ಶಮಲವರ್ಜಿತ|
ಕಾಮಿತ ಪ್ರದ ಕೈರವದಳ|
ಶ್ಯಾಮ ಶಬಲ ಶರಣ್ಯ ಶಾಶ್ವತ ಶರ್ಕರಾಕ್ಷಸಖ ||
ಸಾಮಸನ್ನುತ ಸಕಲ ಗುಣಗಣ|
ಧಾಮ ಶ್ರೀ ಜಗನ್ನಾಥ ವಿಠ್ಠಲ|
ನೀ ಮಹಿಯೊಳವತರಿಸಿ ಸಲಹಿದೆ ಸಕಲ ಸುಜನರನು || ೩೧ ||

2 thoughts on “ಹರಿಕಥಾಮೃತಸಾರ – 02 – ಕರುಣಾ ಸಂಧಿ”

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.