ನಾರಾಯಣ ನಿನ್ನ ನಾಮದ ಸ್ಮರಣೆಯ
ಸಾರಾಮೃತವೆನ್ನ ನಾಲಿಗೆಗೆ ಬರಲಿ || ಪಲ್ಲವಿ||

ಕೂಡುವಾಗಲಿ ನಿಂತಾಡುವಾಗಲಿ ಮತ್ತೆ
ಹಾಡುವಾಗಲಿ ಹರಿದಾಡುವಾಗಲಿ
ಖೋಡಿ ವಿನೋದದಿ ನೋಡದೆ ನಾ ಬಲು
ಮಾಡಿದ ಪಾಪ ಬಿಟ್ಟೋಡಿ ಹೋಗೋ ಹಾಗೆ||

ಊರಿಗೇ ಹೋಗಲಿ ಊರೊಳಗಿರಲಿ
ಕಾರಣಾರ್ಥಂಗಳೆಲ್ಲ ಕಾದಿರಲಿ
ವಾರಿಜನಾಭ ನರಸಾರಥಿ ಸನ್ನುತ
ಸಾರಿ ಸಾರಿಗೇ ನಾ ಬೇಸರದ್ಹಾಗೆ||

ಹಸಿವಿದ್ದಾಗಲಿ ಹಸಿವಿಲ್ಲದಾಗಲಿ
ರಸಕಸಿ ಇರಲಿ ಹರುಷಿರಲಿ
ವಸುದೇವಾತ್ಮಕ ಶಿಶುಪಾಲಕ್ಷಯಾ
ಅಸುರಾಂತಕ ನಿನ್ನ ಹೆಸರು ಮರೆಯದ್ಹಾಗೆ||

ಕಷ್ಟದಲ್ಲಿರಲಿ ಉತ್ಕೃಷ್ಟದಲ್ಲಿರಲಿ
ಎಷ್ಟಾದರೂ ಮತಿಗೆಟ್ಟಿರಲಿ
ಕೃಷ್ಣ ಕೃಷ್ಣ ಎಂದು ಶಿಷ್ಟರು ಪೇಳುವ
ಅಷ್ಟಾಕ್ಷರ ಮಹಾ ಮಂತ್ರದ ನಾಮವ||

ಕನಸಿನೊಳಾಗಲಿ ಕಳವಳಿಕಾಗಲಿ
ಮನಸುಗೊಟ್ಟಿರಲಿ ಮುನಿದಿರಲಿ
ಜನಕಜಾಪತಿ ನಿನ್ನ ಚರಣ ಕಮಲವನು
ಮನಸಿನೊಳಗೆ ಒಮ್ಮೆ ನೆನೆಸಿಕೊಳ್ಳೋ ಹಾಗೆ||

ಜ್ವರ ಬಂದಾಗಲಿ ಚಳಿ ಬಂದಾಗಲಿ
ಮರಳಿ ಮರಳಿ ಮತ್ತೆ ನಡುಗುವಾಗಲಿ
ಹರಿನಾರಾಯಣ ದುರಿತನಿವಾರಣನೆಂದು
ಇರುಳು ಹಗಲು ನಿನ್ನ ಸ್ಮರಣೆ ಮರೆಯದ್ಹಾಗೆ||

ಸಂತತ ಹರಿ ನಿನ್ನ ಸಾಸಿರ ನಾಮವು
ಅಂತರಂಗದ ಒಳಗಿರಿಸಿ
ಎಂತೋ ಪುರಂದರ ವಿಟ್ಠಲರಾಯನೆ
ಅಂತ್ಯ ಕಾಲದಲ್ಲಿ ಚಿಂತಿಸೋಹಾಗೇ||

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.