ತೇಜಸ್ಸು ಉಕ್ಕುವ ಮುಖ, ಹಣೆಯಲ್ಲಿ ನಾಮ, ತಲೆಗೆ ಪಾವುಡ. ಕೈಯಲ್ಲಿ ತಾಳ ಹಾಗು ತಂಬೂರಿ ಹಿಡಿದುಕೊಂಡು, “ಹರಿಯ ನೆನೆಯಲೆ ಮನವೆ. . . ” ಎಂದು ಹಾಡುತ್ತ, ತಮ್ಮ ಮನೆಯಂಗಳದಲ್ಲಿ ಸೂರ್ಯೋದಯಕ್ಕೆ ಸರಿಯಾಗಿ ಪ್ರತ್ಯಕ್ಷರಾದ ಹರಿದಾಸರನ್ನು ಕಂಡ ಶಾಸ್ತ್ರಿಗಳಿಗೆ ಸಾಕ್ಷಾತ್ ಶ್ರೀಹರಿಯನ್ನೇ ಕಂಡಷ್ಟು ಸಂತೋಷವಾಯಿತು.

“ಬನ್ನಿ, ಬನ್ನಿ, ಒಳಗೆ ದಯಮಾಡಿಸಿ”, ಎಂದು ಆದರದಿಂದ ಕರೆದು, ಕೈಕಾಲಿಗೆ ನೀರು ತರಲು, ಹೆಂಡತಿಗೆ ಕೂಗಿ ಹೇಳಿದರು. ಶಾರದಮ್ಮನವರೂ ಸಹ ಸಂಭ್ರಮದಿಂದ ನೀರು ತಂದು ಕೊಟ್ಟು ನಡುಮನೆಯಲ್ಲಿ ಮಣೆ ಹಾಕಿದರು. ಬಾಯಾರಿಸಿಕೊಳ್ಳಲಿ ಬ್ರಾಹ್ಮಣ ಎಂದು ಒಂದು ಲೋಟ ಬಿಸಿ ಬಿಸಿ ಬಾದಾಮಿ ಹಾಲನ್ನು ಮುಂದಿಟ್ಟರು. ಹಾಲನ್ನು ಕಂಡು ಬೆಚ್ಚಿಬಿದ್ದ ಹರಿದಾಸರು ಬಾಳೆಹಣ್ಣಷ್ಟೆ ತಮಗೆ ಸಾಕು ಎಂದು ಹೇಳಿದರು.
“ಯಾವ ಊರಾಯಿತು, ಸ್ವಾಮಿ ತಮ್ಮದು?”, ಶಾಸ್ತ್ರಿಗಳು ಗೌರವದಿಂದ ಕೇಳಿದರು.
“ಅಲ್ಲಿರುವದುssss ನಮ್ಮ ಮನೇssss
ಇಲ್ಲಿರುವದೂssss ಸುಮ್ಮನೇssssss”
ಎಂದು ಉಸರಿದ ದಾಸರು,
“ಹರಿ ನಾರಾಯಣ, ಹರಿನಾರಾಯಣ, ಹರಿ ನಾರಾಯಣ, ಎನು ಮನವೆ”, ಎಂದು ತಾಳ ಕುಟ್ಟುತ್ತ ಹಾಡಲಾರಂಭಿಸಿದರು.
ಇದೆಲ್ಲ ಸಂಭ್ರಮ, ಸಂತೋಷವನ್ನು ಕೇಳಿಸಿಕೊಂಡ ಜೇನಿ ಹಾಗು ಹ್ಯಾರಿ ಅಟ್ಟದಿಂದ ಕೆಳಗಿಳಿದು ಬಂದರು.
‘ಹರಿ, ಹರಿ’ ಎಂದು ಹಾಡುತ್ತಿದ್ದದ್ದನ್ನು ಕೇಳಿದ ಹ್ಯಾರಿ,
“Mummy why is he calling my name?”, ಎಂದು ಕೇಳಿದ.(ಹ್ಯಾರಿಯನ್ನು ಅವನ ಅಪ್ಪ ಪ್ರತಾಪ ‘ಹರಿ’ ಎಂದೇ ಕರೆಯುತ್ತಿದ್ದ.)
ತಕ್ಷಣವೇ ಹರಿದಾಸರು,
“ಹರಿ ಓಮ್ ಹರಿ,
ಹರಿ ಓಮ್ ಹರಿ,
Bury your worry,
Come here, ಮರಿ”
ಎಂದು ರಾಗವಾಗಿ ಹೇಳಿದರು.

ಶಾಸ್ತ್ರಿಗಳಿಗೆ ಹಾಗು ಶಾರದಮ್ಮನವರಿಗೆ ಪರಮಾಶ್ಚರ್ಯ. ಜೇನಿಗೆ ಸಂತೋಷಾಘಾತ. ‘ಇಂಡಿಯಾದಲ್ಲಿ spiritual power ಇದೆ.’ ಎಂದು ಪ್ರತಾಪ ಹೇಳುತ್ತಿದ್ದದ್ದು ನಿಜವೆನಿಸಿತು ಜೇನಿಗೆ. ತಕ್ಷಣವೇ ತಾನೂ ಸಹ ಇಂಡಿಯನ್ನರಂತೆ ಹರಿದಾಸರಿಗೆ ಸಾಷ್ಟಾಂಗ ಪ್ರಣಾಮ ಮಾಡಿ, “ಸ್ವಾಮಿಜಿ, ಹ್ಯಾರಿಗೆ ಯಾವ ರೋಗವಾಗಿದೆಯೊ, ಯಾವ ಡಾಕ್ಟರಿಗೂ ಗೊತ್ತಾಗುತ್ತಿಲ್ಲ. ದಯವಿಟ್ಟು ನಿಮ್ಮ spritual power ಉಪಯೋಗಿಸಿ ಅವನನ್ನು ಗುಣಪಡಿಸಿ”, ಎಂದು ಕೋರಿದಳು.

“ರೋಗಹರನೆ ಕೃಪಾಸಾಗರ ಶ್ರೀಗುರು
ರಾಘವೇಂದ್ರ ಪರಿಪಾಲಿಸೊ!
ಘನ್ನಮಹಿಮ ಜಗನ್ನಾಥವಿಠಲಪ್ರಿಯ
ನಿನ್ನಾರಾಧನೆ ಮಾಡಿಸೊ!”
ಎಂದು ಹರಿದಾಸರು ರಾಘವೇಂದ್ರಸ್ವಾಮಿಗಳ ಮೇಲೆ ಆ ಹೊಣೆ ಹೊರಿಸಿದರು.
. . . . . . . . . . . . . . . . . . . . . . . . .
ಒಂದೇ ಗಂಟೆಯಲ್ಲಿ ಆ ಕುಟುಂಬದವರೆಲ್ಲರ ವಿಶ್ವಾಸ ಗಳಿಸಿಕೊಂಡ ಭರತಖಾನನಿಗೆ ಪ್ರವಲ್ಲಿಕಾ ಹಾಗು ಧಾರಿಣಿ ಇವರೀರ್ವರೂ ಇಲ್ಲಿಯವರೆಗೂ ನಾಪತ್ತೆಯಾಗಿಯೇ ಇರುವದು ಗೊತ್ತಾಯಿತು.
ಜೇನಿ ಇವಳು WTO ಸ್ಫೋಟದಲ್ಲಿ ಮೃತನಾದ ಪ್ರತಾಪನ ಅಮೇರಿಕನ್ ಹೆಂಡತಿ ಎಂದೂ ಗೊತ್ತಾಯಿತು. ತಿಳಿಯದ ರೋಗದಿಂದ ಬಳಲುತ್ತಿರುವ ತನ್ನ ಮಗ ಹ್ಯಾರಿಯನ್ನು ಇಂಡಿಯಾಕ್ಕೆ ಕರೆದುಕೊಂಡ ಬಂದ ಜೇನಿಯ ಉದ್ದೇಶವೂ ಗೊತ್ತಾಯಿತು.

ಆ ರಾತ್ರಿ ತಮ್ಮ ಕೊನೆಯ ಕೀರ್ತನೆಯನ್ನು ಹಾಡುವ ಮುನ್ನ ಹರಿದಾಸರು, ತಂಬೂರಿಯ ಮೇಲಿನ ಬಿರಡೆಯನ್ನು ಸರಿಗೊಳಿಸುವಂತೆ ನಟಿಸುತ್ತ, ಅದರಲ್ಲಿ ಅಡಗಿಸಿದ್ದ ಶಕ್ತಿಶಾಲಿ ಟ್ರಾನ್ಸಮಿಟರದ ಬಟನ್ ಒತ್ತಿದರು. ಆಮೇಲೆ ಕೊನೆಯ ಕೀರ್ತನೆಯನ್ನು ಹಾಡಿದರುಃ
“ಗಿಳಿಯು ಪಂಜರದೊಳಿಲ್ಲಾ, ಓ ಸಾಮಾ, ಓಸಾಮಾ!
ಬರಿದೇ ಪಂಜರವಾಯಿತಲ್ಲಾ!”
,,,,,,,,,,,,,,,,,,,,,,,,,,,,,,,,,,,
ಇತ್ತ ಟ್ರಾನ್ಸಮಿಟರ್ ರಿಸೀವರನಲ್ಲಿ ಓಸಾಮಾ ಭರತಖಾನನ ಈ ಒರಲನ್ನು ಕೇಳಿದ. ತನ್ನ ಮಾನಸಪುತ್ರನಿಗೆ ಒದಗಿದ ಈ ದುರ್ಗತಿಯಿಂದ ಅವನಿಗೆ ಖೇದವಾಯಿತು. ಭರತಖಾನನ ಗಿಳಿಯನ್ನು ಭಾರತೀಯ ದೂತಾವಾಸದಿಂದ ಅಪಹರಿಸಿದ ಸುದ್ದಿಯೂ ಅವನಿಗೆ ಇಷ್ಟರಲ್ಲೆ ತಿಳಿದಿತ್ತು. ಇಂತಹ ಧೈರ್ಯ, ಚಾಕಚಕ್ಯತೆ ಹಾಗು ಸಂಘಟನಾ ಶಕ್ತಿ ಇರುವ ಸಂಸ್ಥೆಗಳು ಎರಡೇ ಎರಡಿವೆ. ಒಂದು ಅಮೆರಿಕದ CIA, ಎರಡನೆಯದು ಇಸ್ರೇಲಿನ MOSSAD. ಇರಾಕ ರಣಭೂಮಿಯಲ್ಲಿ ಸಿಲುಕಿದ CIA ಈ ಚಿಲ್ಲರೆ ಕೆಲಸಕ್ಕೆ ಕೈಹಾಕುವದಿಲ್ಲ. ಹಾಗಾದರೆ ಇದು MOSSADದ ಕೆಲಸ! (ಏತಕ್ಕಾಗಿ ಈ ಸಾಹಸ ಮಾಡಿದರೊ?) ಅರಬರ ಆಜನ್ಮ ವೈರಿಗಳಾದ ಇಸ್ರೇಲಿಗಳ ಈ ವ್ಯೂಹದಿಂದ ಭರತಖಾನನ ಪ್ಯಾರಿ ಲಕಡಿಯನ್ನು ಹೊರತರುವದು ಅಸಾಧ್ಯ. ಆದರೆ ಅಸಾಧ್ಯವೆನ್ನುವದು ಲಾಡೆನ್ನನ ಶಬ್ದಕೋಶದಲ್ಲಿಲ್ಲ!

***

ಸಕಲ ಪೀಡಾ ಪರಿಹಾರಕ್ಕೆಂದು ಶಾಸ್ತ್ರಿಗಳ ಮನೆಯಲ್ಲಿ ರಾಘವೇಂದ್ರಸ್ವಾಮಿಗಳ ಅಷ್ಟೋತ್ತರವನ್ನು ಸಾಂಗೋಪಾಂಗವಾಗಿ ನೆರವೇರಿಸಲಾಯಿತು. ಹರಿದಾಸರು ದಿನವೆಲ್ಲ ಕೀರ್ತನೆಳನ್ನು ಹಾಡುತ್ತ ಎಲ್ಲರ
ಮನಸ್ಸನ್ನು ಗೆದ್ದುಕೊಂಡರು. ಹ್ಯಾರಿಯಂತೂ “ಸ್ವಾಮೀಜಿ ಅಂಕಲ್ ” ಎನ್ನುತ್ತ ಅವರ ಜೊತೆಗೇ ಇರುತ್ತಿದ್ದ. ಹರಿದಾಸರು ಹಯಗ್ರೀವ, ಬಾಳೆಹಣ್ಣು ಮೆದ್ದು ಮೆದ್ದು ತಮ್ಮ ಕಳೆಯನ್ನು ಹೆಚ್ಚಿಸಿಕೊಂಡರು. ಯಾಕೊ ಹಾಲು ಮಾತ್ರ ಅವರಿಗೆ ವರ್ಜ್ಯ. ಕೆಲವೊಮ್ಮೆ ಹರಿದಾಸರಿಗೆ ಒಳಗೊಳಗೇ ಅಂಜಿಕೆಯಾಗಿಬಿಡುತ್ತಿತ್ತುಃ ತಾನು ನಿಜವಾಗಿಯೂ ಕಾಫರನೇ ಆಗಿಬಿಡುವೇನೇನೋ ಎಂದು. ಆದರೆ ಮತ್ತೆ ಗಟ್ಟಿ ಮನಸ್ಸು ಮಾಡಿಕೊಂಡು ತಮಗೆ ತಾವೇ ಹೇಳಿಕೊಳ್ಳುತ್ತಿದ್ದರುಃ “ಲವ್ ಕೆ ಲಿಯೆ ಕುಛ್ ಭೀ ಕರೇಗಾ!”

……………………..
ಅಫಘಾನಿಸ್ತಾನದ ಗುಡ್ಡಗಾಡಿನ ತನ್ನ ಗವಿಯಲ್ಲಿ ಒಂದು ರಾತ್ರಿ ವಿಶ್ರಮಿಸಿಕೊಳ್ಳುತ್ತಿದ್ದ ಓಸಾಮಾನ ಟ್ರಾನ್ಸಮೀಟರ್ ಬೀಪ್ ಎಂದಿತು. ರಿಸೀವರ ಮೇಲೆತ್ತಿದಾಗ ಖನ್ನಡದ ಖಿರ್ತನೆಯೊಂದು ಕೇಳಿಸಿತುಃ
“ತಾಳುವಿಕೆಗಿಂತ ಅನ್ಯ ತಪವು ಇಲ್ಲ!”

ಓಸಾಮಾ ನಿಟ್ಟುಸಿರುಬಿಟ್ಟ.

2 thoughts on “ಭಾಗ – 15”

  1. ಸಕಲ ಪೀಡಾ ಪರಿಹಾರಕ್ಕೆಂದು ಶಾಸ್ತ್ರಿಗಳ ಮನೆಯಲ್ಲಿ ರಾಘವೇಂದ್ರಸ್ವಾಮಿಗಳ ಅಷ್ಟೋತ್ತರವನ್ನು ಸಾಂಗೋಪಾಂಗವಾಗಿ ನೆರವೇರಿಸಲಾಯಿತು. ಹರಿದಾಸರು ದಿನವೆಲ್ಲ ಕೀರ್ತನೆಳನ್ನು ಹಾಡುತ್ತ ಎಲ್ಲರ
    ಮನಸ್ಸನ್ನು ಗೆದ್ದುಕೊಂಡರು. ಹ್ಯಾರಿಯಂತೂ “ಸ್ವಾಮೀಜಿ ಅಂಕಲ್ ” ಎನ್ನುತ್ತ ಅವರ ಜೊತೆಗೇ ಇರುತ್ತಿದ್ದ. ಹರಿದಾಸರು ಹಯಗ್ರೀವ, ಬಾಳೆಹಣ್ಣು ಮೆದ್ದು ಮೆದ್ದು ತಮ್ಮ ಕಳೆಯನ್ನು ಹೆಚ್ಚಿಸಿಕೊಂಡರು. ಯಾಕೊ ಹಾಲು ಮಾತ್ರ ಅವರಿಗೆ ವರ್ಜ್ಯ. ಕೆಲವೊಮ್ಮೆ ಹರಿದಾಸರಿಗೆ ಒಳಗೊಳಗೇ ಅಂಜಿಕೆಯಾಗಿಬಿಡುತ್ತಿತ್ತುಃ ತಾನು ನಿಜವಾಗಿಯೂ ಕಾಫರನೇ ಆಗಿಬಿಡುವೇನೇನೋ ಎಂದು. ಆದರೆ ಮತ್ತೆ ಗಟ್ಟಿ ಮನಸ್ಸು ಮಾಡಿಕೊಂಡು ತಮಗೆ ತಾವೇ ಹೇಳಿಕೊಳ್ಳುತ್ತಿದ್ದರುಃ “ಲವ್ ಕೆ ಲಿಯೆ ಕುಛ್ ಭೀ ಕರೇಗಾ!”

    ……………………..
    ಅಫಘಾನಿಸ್ತಾನದ ಗುಡ್ಡಗಾಡಿನ ತನ್ನ ಗವಿಯಲ್ಲಿ ಒಂದು ರಾತ್ರಿ ವಿಶ್ರಮಿಸಿಕೊಳ್ಳುತ್ತಿದ್ದ ಓಸಾಮಾನ ಟ್ರಾನ್ಸಮೀಟರ್ ಬೀಪ್ ಎಂದಿತು. ರಿಸೀವರ ಮೇಲೆತ್ತಿದಾಗ ಖನ್ನಡದ ಖೀರ್ತನೆಯೊಂದು ಕೇಳಿಸಿತುಃ
    “ತಾಳುವಿಕೆಗಿಂತ ಅನ್ಯ ತಪವು ಇಲ್ಲ!”

    ಓಸಾಮಾ ನಿಟ್ಟುಸಿರುಬಿಟ್ಟ.

  2. ಮೋಶೆ ಕೋಹೆನ್ ಪ್ರತಿ ವರ್ಷವೂ ತನ್ನ ಹೆಂಡತಿ ಸಾರಾ ಹಾಗು ಮಗಳು ಗೋಲ್ಡಾ ಜೊತೆಗೆ ಯೂರೋಪಿಗೆ ಪ್ರವಾಸಕ್ಕೆ ಹೋಗುತ್ತಾನೆ. ಸಾರಾಗೆ ಪೇಂಟಿಂಗ್ಸ್ ಗಳ ಹುಚ್ಚು. ಪ್ಯಾರಿಸ್ ಹಾಗು ವರ್ಸಲೇಸ್ ಗಳ ಮ್ಯೂಜಿಯಮ್ ಗಳಿಗೆ ಅವಳು ಭೇಟಿ ಕೊಡುವದನ್ನು ತಪ್ಪಿಸುವದಿಲ್ಲ. ಮೋಶೆಗೆ ಲಲಿತ ಕಲೆಗಳೆಂದರೆ ತಾತ್ಸಾರ. MOSSADದ ಎರಡನೆಯ ಮುಖ್ಯಸ್ಥನಾದ ಅವನಿಗೆ ಲಲಿತ ಕಲೆಗಳು ಲಲಿತೆಯರ ವಿಭಾಗವೆನ್ನುವ ಮನೋಭಾವ. ಹೆಂಡತಿ ಮ್ಯೂಜಿಯಮ್ ಗೆ ಹೋದ ತಕ್ಷಣ ಮೋಶೆ ಕ್ಯಾಬರೆಗೆ ಓಡುತ್ತಾನೆ.
    ಫ್ರೆಂಚ ಕ್ಯಾಬರೆ ಎಂದರೆ ಅವನಿಗೆ ಇನ್ನಿಲ್ಲದ ಮೋಹ. ಕೇವಲ ಹತ್ತು ವರ್ಷದ ಗೋಲ್ಡಾ ತಾಯಿಯನ್ನು ಹಿಂಬಾಲಿಸುತ್ತಾಳೆ.

    ಮೋಶೆ ನಗ್ನ ಫ್ರೆಂಚ್ ಸುಂದರಿಯರ ಸೌಂದರ್ಯವನ್ನು ಕಣ್ಣುಗಳಿಂದ ಹೀರುತ್ತ, ಶಾಂಪೇನ್ ಆಸ್ವಾದಿಸುತ್ತಿದ್ದಾನೆ. ಅವನ ಸೆಲ್ ಫೋನ್ ಧ್ವನಿ ಮಾಡಿತು. ಮೊನಿಟರ್ ದಲ್ಲಿ ಸಾರಾಳ ಹೆಸರು ಕಂಡಿತು.
    “ಥತ್ತೇರಿ,…….ಸೂಪಿನಲ್ಲಿ ನೊಣ!”, ಎಂದು ಗೊಣಗುತ್ತ ಮೋಶೆ ಸೆಲ್ಲಿನಲ್ಲಿ ವ್ಹಿಸ್ಪರಿಸಿದಃ “ಪ್ರಿಯೆ, ನಾನೀಗ ಫ್ರೆಂಚ್ ಗುಪ್ತಚಾರ ಇಲಾಖೆಯ ಮುಖ್ಯಸ್ಥನೊಂದಿಗೆ ಮಹತ್ವದ ಮಾತುಕತೆಯಲ್ಲಿದ್ದೇನೆ. ಇನ್ನೊಂದು ಗಂಟೆಯ ಬಳಿಕ ಹೊಟೆಲ್ಲಿಗೇ ಬರುವೆ.”
    “ಈಡಿಯಟ್! ಗೋಲ್ಡಾ ಕಾಣೆಯಾಗಿದ್ದಾಳೆ. ತಕ್ಷಣವೇ ಮ್ಯೂಜಿಯಮ್ಮಿಗೆ ಬಾ.”
    ಸೆಲ್ ಫೋನ್ ಬಂದಾಯಿತು. ಮೋಶೆಯ ಮುಖದಲ್ಲಿ ಬೆವರಿಳಿಯಿತು. ಹೊರಗೋಡಿ ಬಂದವನೇ, ಟ್ಯಾಕ್ಸಿಯನ್ನು ಮ್ಯೂಜಿಯಮ್ ಕಡೆಗೆ ಧಾವಿಸಲು ಹೇಳಿದ. ಮ್ಯೂಜಿಯಮ್ ಗೇಟಿನಲ್ಲಿ ಅಳುತ್ತಿದ್ದ ಸಾರಾ ನಿಂತಿಕೊಂಡಿದ್ದಳು. ಮೋಶೆ ಸಾರಾಳ ಹತ್ತಿರ ಬರುತ್ತಿದ್ದಂತೆಯೆ, ಅವನ ಸೆಲ್ ಫೋನ್ ಮತ್ತೆ ಗುಣಗುಣಿಸಿತು.” ಗಾಬರಿಯಾಗಬೇಡ, ಮಿಸ್ಟರ್ ಮೋಶೆ! ಗೋಲ್ಡಾ ನಮ್ಮ ಬಳಿ ಸುರಕ್ಷಿತವಾಗಿದ್ದಾಳೆ. ನೀನು ಫ್ರೆಂಚ್ ಪೋಲೀಸರನ್ನಾಗಲಿ ಅಥವಾ ಗುಪ್ತಚಾರ ಇಲಾಖೆಯನ್ನಾಗಲಿ ಸಂಪರ್ಕಿಸುವ ಮೂರ್ಖತನ ಮಾಡಬೇಡ. ನಿನ್ನ ಹೊಟೆಲ್ಲಿಗೆ ಮರಳು. ಅಲ್ಲಿ ನಿನಗೆ ಹೆಚ್ಚಿನ ವಿವರಗಳು ದೊರೆಯುವವು.”

    ಹೊಟೆಲ್ಲಿಗೆ ಮರಳಿದ ಮೋಶೆಗೆ ರಿಸೆಪ್ಶನ್ನಿನಲ್ಲಿ ಒಂದು ಸಂದೇಶ ಕಾದಿತ್ತುಃ
    “ಮೋಶೆ, ನಿನ್ನ ಮೂರ್ಖ ಗುಪ್ತಚಾರ ಪಡೆ, ದುಬೈದಿಂದ ‘ಪ್ರವಲ್ಲಿಕಾ’ ಎನ್ನುವ ಹೆಸರಿನ ಒಬ್ಬ ಇಂಡಿಯನ್ ಹುಡುಗಿಯನ್ನು ವಿನಾಕಾರಣವಾಗಿ ಅಪಹರಿಸಿದ್ದಾರೆ. ಅವಳನ್ನು ತಕ್ಷಣವೇ ಪೇಶಾವರಕ್ಕೆ ಕರೆ ತಂದು ಪಾಕಿಸ್ತಾನದ ISI HQSಗೆ ಒಪ್ಪಿಸಬೇಕು. ಈ ದಿನ ರಾತ್ರಿ ಹತ್ತು ಗಂಟೆಯವರೆಗೆ ಇಂಡಿಯನ್ ಹುಡುಗಿ ಪೇಶಾವರದಲ್ಲಿ ಕಾಣದಿದ್ದರೆ, ನಿನ್ನ ಮುದ್ದು ಮಗಳ ಮೇಲೆ ಹಿಂಸೆ ಪ್ರಾರಂಭವಾಗುವದು. ನೀನು ಜಾಣನಾದರೆ ನಿನಗೆ ನಿನ್ನ ಮಗಳು ಮರಳಿ ದೊರೆಯುವಳು. ಖುದಾ ಹಾಫೀಜ್!
    ………………………………………….
    ಬ್ರಾಹ್ಮೀ ಮುಹೂರ್ತದಲ್ಲಿ ಎದ್ದ ಶಾಸ್ತ್ರಿಗಳಿಗೆ ಹರಿದಾಸರು ಕಾಣಲಿಲ್ಲ. ಶೌಚಕ್ಕೆ ಹೋಗಿರಬಹುದು ಎಂದುಕೊಂಡರು. ಸಂಜೆಯಾದರೂ ಅವರ ಸುಳಿವಿಲ್ಲ. ತಂಬೂರಿಯೇನೋ ಅಲ್ಲಿಯೇ ಇದೆ. ಅದರ ಬುರುಡೆಯ ಬಿರಟೆಯೊಂದು ಬಿಚ್ಚಿದ್ದು ಕಂಡಿತು. ಅದನ್ನು ಸರಿಪಡಿಸಿ ತಂತಿಗಳ ಮೇಲೆ ಕೈ ಎಳೆದರು. ಸುಶ್ರಾವ್ಯ ಆಲಾಪವಾಯಿತು. ಹರಿದಾಸರು ನಾರದ ಮುನಿಗಳೇ ಎನ್ನುವದರಲ್ಲಿ ಶಾಸ್ತ್ರಿಗಳಿಗೆ ಏನೂ ಸಂಶಯ ಉಳಿಯಲಿಲ್ಲ. ಎಲ್ಲಿಂದಲೋ ಪ್ರತ್ಯಕ್ಷತರಾಗಿ, ಈಗ ಎಲ್ಲಿಯೋ ಮಾಯವಾಗಬೇಕಾದರೆ, ಇದು ತ್ರಿಲೋಕಸಂಚಾರಿಯಾದ ನಾರದ ಮಹರ್ಷಿಗಳಿಗೆ ಮಾತ್ರ ಸಾಧ್ಯ. ತಮ್ಮ ನೆನಪಿಗಾಗಿ ಈ ತಂಬೂರಿಯನ್ನು ಬಿಟ್ಟು ಹೋಗಿರಬೇಕು! ಶಾಸ್ತ್ರಿಗಳು ತಂಬೂರಿಗೆ ಸಾಷ್ಟಾಂಗ ಪ್ರಣಾಮ ಹಾಕಿದರು.
    ……………………………………………..
    ಪೇಶಾವರದಲ್ಲಿ ಇಳಿದ ಭರತಖಾನ ಅಲ್ಲಿಯ ISI HQSಗೆ ತೆರಳಿದ. ಅವನ ಬಿಳಿಯ ಪಾರಿವಾಳ ಅಲ್ಲಿಯೇ ಮುದುಡಿಕೊಂಡು ನಿಂತಿತ್ತು. HQSದ ಅಧಿಕಾರಿ, “ನಿಮಗಾಗಿ ಹೆಲಿಕಾಪ್ಟರ್ ಸಿದ್ಧವಿದೆ. ಓಸಾಮಾ ಅಫಘಾನದ ಗವಿಯಲ್ಲಿ ತಮಗಾಗಿ ಕಾಯುತ್ತಿದ್ದಾರೆ” ಏಂದು ಹೇಳಿದ. ಪ್ರವಲ್ಲಿಕಾಳಿಗೆ ಬಲವಂತವಾಗಿ ಹಿಮದುಡುಗೆ ತೊಡಿಸಿ, ಹೆಲಿಕಾಪ್ಟರನಲ್ಲಿ ಹತ್ತಿಸಿದ ಭರತಖಾನ ಅಫಘಾನದ ಕಡೆಗೆ ಹಾರಿದ.

    ಒಂದರ್ಧ ಗಂಟೆಯಲ್ಲಿಯೇ ಅಕಾಲಿಕ ಹಿಮವರ್ಷ ಹಾಗು ಭೀಕರ ಬಿರುಗಾಳಿ ಪ್ರಾರಂಭವಾಯಿತು. ಈ ಋತುವಿನಲ್ಲಿ ಹೀಗಾಗಬಾರದು. ಭರತಖಾನನಿಗೆ ಹೆಲಿಕಾಪ್ಟರ್ ನಿಯಂತ್ರಣ ಬಹಳ ಕಷ್ಟವಾಯಿತು. ತಾನು ಎಲ್ಲಿ ಹೋಗುತ್ತಿದ್ದೇನೆ ಎನ್ನುವದೇ ಅವನಿಗೆ ತಿಳಿಯದಾಯಿತು. ಕೊನೆಗೊಮ್ಮೆ ಹೆಲಿಕಾಪ್ಟರ್ ಗಿರಕಿ ಹೊಡೆಯುತ್ತ ಹಿಮಬಂಡೆಯೊಂದಕ್ಕೆ ಅಪ್ಪಳಿಸಿತು. ಭರತಖಾನನಿಗೆ ತನ್ನ ಕೈಕಾಲುಗಳನ್ನು ಚಲಿಸಲೂ ಆಗಲಿಲ್ಲ. ಭೂಮಿ ಹಾಗು ಆಕಾಶ ತುಂಬಿದ ಬಿಳಿ ಹಿಮ ಬಿಟ್ಟು ಮತ್ತೇನೂ ಕಾಣದು. ಈ ಹಿಮದ ಮಧ್ಯೆ ಓರ್ವ ದೇವತೆ ಪ್ರತ್ಯಕ್ಷಳಾದಂತೆ ಅವನಿಗೆ ತೋರಿತು. ತನ್ನ ಮರಗಟ್ಟಿದ ದೇಹವನ್ನು ಅವಳೇ ಎಳೆಯುತ್ತ ಸಾಗಿಸುತ್ತಿರುವಂತೆ ಅವನಿಗೆ ಭಾಸವಾಯಿತು. ತಾನು ಚಿಕ್ಕವನಿದ್ದಾಗ ತನ್ನ ತಂದೆ ಹೇಳುತ್ತಿದ್ದ ಸಂಸ್ಕೃತ ಶ್ಲೋಕಗಳು ಅವ ಮನಸ್ಸಿನಲ್ಲಿ ಕೇಳತೊಡಗಿದವುಃ “ಯಾ ದೇವಿ ಸರ್ವಭೂತೇಷು ಚೈತನ್ಯರೂಪೇಣ ಸಂಸ್ಥಿತಾ, ನಮಸ್ತಸ್ಮೈ, ನಮಸ್ತಸ್ಮೈ, ನಮಸ್ತಸ್ಮೈ ನಮೋ ನಮಹ”.
    …………………………………………………
    ಹೀಗೆ ಎಷ್ಟು ಹೊತ್ತು ಕಳೆಯಿತೊ ಅವನಿಗೆ ತಿಳಿಯದು. ಎಚ್ಚರವಾದಾಗ, ಎಣ್ಣೆ ದೀಪದ ಮಂದ ಬೆಳಕಿನಲ್ಲಿ ಶಾಂತ ಮುಖದ ವೃದ್ಧರೊಬ್ಬರು ಕಂಡರು. ಅವರ ಪಕ್ಕದಲ್ಲಿ ಪ್ರವಲ್ಲಿಕಾ.
    “ಎಚ್ಚರವಾಯಿತೆ ಮಗೂ? ಸ್ವಲ್ಪ ಬಿಸಿ ಗಂಜಿ ಕುಡಿ”, ವೃದ್ಧರು ಮೃದುವಾಗಿ ನುಡಿದರು.
    “ನೀವಾರು? ಇದು ಯಾವ ಜಾಗ?”,ಭರತಖಾನ ಕೇಳಿದ.
    “ಮಗು, ನೀನು ಪಾಕಿಸ್ತಾನದ ಹಿಂಗ್ಲಾಜ ಹಳ್ಳಿಯಲ್ಲಿರುವ ಮಾತಾ ಹಿಂಗ್ಲಜಾ ದೇವಿಯ ಗುಡಿಯಲ್ಲಿರುವೆ. ನೀನು ಎಚ್ಚರ ತಪ್ಪಿ ಬಿದ್ದಾಗ, ಈ ಹುಡುಗಿ ನಿನ್ನನ್ನು ನಾಲ್ಕು ಕಿಲೋಮೀಟರ್ ದೂರದವರೆಗೆ ಎಳೆಯುತ್ತ, ಇಲ್ಲಿಗೆ ತಂದಿದ್ದಾಳೆ. ನಿನಗೆ ಎರಡು ದಿನಗಳವರೆಗೆ ಎಚ್ಚರವಿರಲಿಲ್ಲ.”,ವೃದ್ಧರು ನುಡಿದರು.
    “ಹಾಗಾದರೆ ತಾನು ಕನಸಿನಲ್ಲಿ ಕಂಡ ದೇವಿ ಪ್ರವಲ್ಲಿಕಾಳೆ? ನನ್ನನ್ನು ಬಿಟ್ಟು ಓಡಿ ಹೋಗದೆ, ನನಗೆ ಆರೈಕೆ ಮಾಡಿದವಳು ಪ್ರವಲ್ಲಿಕಾಳೆ?”, ಭರತಖಾನ ಅಚಚರಿಪಟ್ಟ. ತಂದೆ ತನ್ನೆದುರು ನುಡಿಯುತ್ತಿದ್ದ ಶ್ಲೋಕಗಳು ನೆನಪಾದವುಃ “ಯಾ ದೇವಿ ಸರ್ವಭೂತೇಷು ಕ್ಷಮಾರೂಪೇಣ ಸಂಸ್ಥಿತಾ, ನಮಸ್ತಸ್ಮೈ, ನಮಸ್ತಸ್ಮೈ, ನಮಸ್ತಸ್ಮೈ ನಮೋ ನಮಹ”.
    ಭರತಖಾನ ಎದ್ದು ನಿಂತ. ವೃದ್ಧರ ಕಾಲಿಗೆರಗಿ, “ನನ್ನನ್ನು ಕ್ಷಮಿಸಿರಿ; ನಾನೊಬ್ಬ ಭಯೋತ್ಪಾದಕ”, ಎಂದು ನುಡಿದ.
    “ಕ್ಷಮಿಸಲು ನಾನಾರಪ್ಪ, ಪ್ರವಲ್ಲಿಕಾಳೆ ನಿನ್ನನ್ನು ಕ್ಷಮಿಸಿದ್ದಾಳಲ್ಲ!”, ಎಂದರು ವೃದ್ಧರು.
    “ಪ್ರವಲ್ಲಿಕಾ, ಮೊದಲು ನಿನ್ನನ್ನು ಸುರಕ್ಷಿತವಾಗಿ ನಿಮ್ಮೂರಿಗೆ ಮುಟ್ಟಿಸುವೆ. ಆ ಬಳಿಕ ನಾನು ಅಫಘಾನಿಸ್ತಾನಕ್ಕೆ ಹೋಗುವೆ”, ಭರತಖಾನ ಹೇಳಿದ.
    ………………………………..
    ಓಸಾಮಾ ಬಿನ್ ಲಾಡೆನ್ ಅಚ್ಚರಿಯಿಂದ ನೋಡುತ್ತಿದ್ದಾನೆ. ಭರತಖಾನ ತನ್ನ ಪಿಸ್ತೂಲನ್ನು ಓಸಾಮಾನ ಎದುರಿಗೆ ಇಟ್ಟು, “ವಲೀಸಾಬ್, ನನ್ನ ಮನಸ್ಸು ಬದಲಾಗಿದೆ. ನಾನು ಭಯೋತ್ಪಾದನೆಯನ್ನು ಬಿಟ್ಟು ಬಿಡುತ್ತಿದ್ದೇನೆ”, ಎಂದು ಹೇಳುತ್ತಿದ್ದಾನೆ.
    “ಎಲ್ಲಿ ಹೋಗುತ್ತಿ?”, ಓಸಾಮಾ ಕೇಳಿದ.
    “ಇಂಡಿಯನ್ ಆರ್ಮಿಗೆ ಸರೆಂಡರ್ ಆಗುತ್ತೇನೆ.”, ಭರತಖಾನ ದೃಢವಾದ ದನಿಯಲ್ಲಿ ಉತ್ತರಿಸಿದ.
    ಓಸಾಮಾ ನಿಬ್ಬೆರಗಾದ, ಸಿಂಹದ ಗವಿಯಲ್ಲಿ ನಿಂತುಕೊಂಡೆ, ಸಿಂಹದ ಹಲ್ಲೆಣಿಸುವ ಧೈರ್ಯಕ್ಕೆ! ಅದಕ್ಕೆ ಅಲ್ಲವೆ ಈ ಬಚ್ಚಾ ತನಗೆ ಅಷ್ಟು ಪ್ರೀತಿಯವನಾದದ್ದು, ತನ್ನ ಮಾನಸಪುತ್ರನಾದದ್ದು. ಆದರೆ ಈಗ ತನಗೇ ದ್ರೋಹ ಬಗೆಯುತ್ತಿದ್ದಾನೆ. ಅಪ್ಪನನ್ನೇ ಬಾಂಬು ಹಾಕಿ ಉಡಾಯಿಸಿದವನಿಗೆ ಚಿಕ್ಕಪ್ಪನ ಮೇಲೆಂತಹ ಪ್ರೀತಿ?
    ಓಸಾಮಾ ವ್ಯಗ್ರನಾದ. ಅವನ ಬೆರಳು ಪಿಸ್ತೂಲಿನ ಸೇಫ್ಟಿ ಕ್ಯಾಚನ್ನು ಹಿಂದೆ ಸರಿಸಿತು. ಒಡೆಯನ ಅಪ್ಪಣೆಯಾದರೆ ಭರತಖಾನನನ್ನು ಕೊಚ್ಚಿಹಾಕಲು, ಓಸಾಮಾನ ಅನುಯಾಯಿಗಳು ಸಿದ್ಧರಾಗಿ ನಿಂತಿದ್ದರು.
    ಭರತಖಾನನ ಕಡೆಗೆ ಬೆನ್ನು ಮಾಡಿದ ಓಸಾಮಾ ತನ್ನ ಅನುಚರರಿಗೆ ಅಪ್ಪಣೆ ಮಾಡಿದಃ”ಇವನನ್ನು ಭಾರತದ ಗಡಿಯಲ್ಲಿ ಸುರಕ್ಷಿತವಾಗಿ ಇಳಿಸಿ ಬನ್ನಿರಿ”.
    ಅವನ ಜೀವನದಲ್ಲಿಯೆ ಮೊದಲ ಬಾರಿಗೆ ಒಂದು ಹನಿ ನೀರು ಓಸಾಮಾನ ಕಣ್ಣಿನಿಂದ ಜಾರಿತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.