ಶ್ರೀ ಜಗನ್ನಾಥದಾಸ ವಿರಚಿತ  

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/
ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು//
ಆವ ಪರಬೊಮ್ಮನ ಅತಿವಿಮಲ ಅಂಗಾವ ಬದ್ಧರು ಎಂದೆನಿಪ
ರಾಜೀವಭವ ಮೊದಲಾದ ಅಮರರು ಅನುದಿನದಿ ಹರಿಪದವ ಸೇವಿಪರಿಗೆ
ಅನುಕೂಲರಲ್ಲದೆ ತಾವು ಇವರನು ಕೆಡಿಸಬಲ್ಲರೆ
ಶ್ರೀವಿಲಾಸಾಸ್ಪದನ ದಾಸರಿಗೆ ಉಂಟೆ ಅಪಜಯವು//1//
ಶ್ರೀದನ ಅಂಘ್ರಿ ಸರೋಜಯುಗಳ ಏಕಾದಶ ಸ್ಥಾನ ಆತ್ಮದೊಳಗಿಟ್ಟು
ಆದರದಿ ಸಂತುತಿಸಿ ಹಿಗ್ಗುವರಿಗೆ ಈ ನವಗ್ರಹವು
ಆದಿತೇಯರು ಸಂತತಾಧಿ ವ್ಯಾಧಿಗಳ ಪರಿಹರಿಸುತ ಅವರನ
ಕಾದುಕೊಂಡಿಹರು ಎಲ್ಲರೊಂದಾಗಿ ಈಶನ ಆಜ್ಞೆಯಲಿ//2//
ಮೇದಿನಿಯ ಮೇಲುಳ್ಳ ಗೋಷ್ಪಾದ ಉದಕಗಳು ಎಲ್ಲ ಆಮಲ ತೀರ್ಥವು
ಪಾದಪಾದ್ರಿ ಧರಾತಳವೆ ಸುಕ್ಷೇತ್ರ ಜೀವಗಣ ಶ್ರೀದನ ಪ್ರತಿಮೆಗಳು
ಅವರುಂಬ ಓದನವೇ ನೈವೇದ್ಯ
ನಿತ್ಯದಿ ಹಾದಿ ನಡೆವುದೇ ನರ್ತನಗಳು ಎಂದರಿತವನೆ ಯೋಗಿ//3//
ಸರ್ವ ದೇಶವು ಪುಣ್ಯ ದೇಶವು ಸರ್ವ ಕಾಲವು ಪರ್ವ ಕಾಲವು
ಸರ್ವ ಜೀವರು ದಾನ ಪಾತ್ರರು ಮೂರು ಲೋಕದೊಳು
ಸರ್ವ ಮಾತುಗಳು ಎಲ್ಲ ಮಂತ್ರವು ಸರ್ವ ಕೆಲಸಗಳು ಎಲ್ಲ ಪೂಜೆಯು
ಶರ್ವ ವಂದ್ಯನ ವಿಮಲ ಮೂರ್ತಿ ಧ್ಯಾನವುಳ್ಳವಗೆ//4//
ದೇವಖಾತ ತಟಾಕವಾಪಿ ಸರೋವರಗಳ ಅಭಿಮಾನಿ ಸುರರು
ಕಳೇವರದೊಳಗಿಹ ರೋಮ ಕೂಪಗಳೊಳಗೆ ತುಂಬಿಹರು
ಆ ವಿಯತ್ಗಂಗಾದಿ ನದಿಗಳು ಭಾವಿಸುವುದು ಎಪ್ಪತ್ತೆರಡೆನಿಪ ಸಾವಿರ
ಸುನಾಡಿಗಳೊಳಗೆ ಪ್ರವಹಿಸುತಲಿಹವು ಎಂದು//5//
ಮೂರು ಕೋಟಿಯ ಮೇಲೆ ಶೋಭಿಪ ಈರು ಅಧಿಕ ಎಪ್ಪತ್ತು ಸಾವಿರ
ಮಾರುತ ಅಂತರ್ಯಾಮಿ ಮಾಧವ ಪ್ರತಿ ದಿವಸದಲ್ಲಿ ತಾ ರಮಿಸುತಿಹನೆಂದು
ತಿಳಿದಿಹ ಸೂರಿಗಳು ದೇವತೆಗಳು
ಅವರ ಶರೀರವೇ ಸುಕ್ಷೇತ್ರ ಅವರ ಅರ್ಚನೆಯೇ ಹರಿಪೂಜೆ//6//
ಶ್ರೀವರನಿಗೆ ಅಭಿಷೇಕವೆಂದರಿದು ಈ ವಸುಂಧರೆಯೊಳಗೆ ಬಲ್ಲವರು
ಆವ ಜಲದಲಿ ಮಿಂದರೆಯು ಗಂಗಾದಿ ತೀರ್ಥಗಳು ತಾ ಒಲಿದು ಬಂದಲ್ಲಿ
ನೆಲೆಗೊಂಡು ಈವರು ಅಖಿಳಾರ್ಥಗಳನು
ಅರಿಯದ ಜೀವರು ಅಮರ ತರಂಗಿಣಿಯನು ಐದಿದರು ಫಲವೇನು//7//
ನದನದಿಗಳು ಇಳೆಯೊಳಗೆ ಪರಿವವು ಉದಧಿ ಪರಿಯಂತರದಿ
ತರುವಾಯದಲಿ ರಮಿಸುವವು ಅಲ್ಲಿ ತನ್ಮಯವಾಗಿ ತೋರದಲೆ
ವಿಧಿ ನಿಷೇಧಗಳು ಆಚರಿಸುವರು ಬುಧರು
ಭಗವದ್ರೂಪ ಸರ್ವತ್ರದಲಿ ಚಿಂತನೆ ಬರಲು ತ್ಯಜಿಸುವರು ಅಖಿಳ ಕರ್ಮಗಳ//8//
ಕಲಿಯೆ ಮೊದಲಾದ ಅಖಿಳ ದಾನವರೊಳಗೆ
ಬ್ರಹ್ಮ ಭವಾದಿ ದೇವರ್ಕಳು ನಿಯಾಮಕರಾಗಿ ಹರಿಯಾಜ್ಞೆಯಲಿ
ಅವರವರ ಕಲುಷ ಕರ್ಮವ ಮಾಡಿ ಮಾಡಿಸಿ
ಜಲರುಹೇಕ್ಷಣಗೆ ಅರ್ಪಿಸುತ ನಿಶ್ಚಲ ಸುಭಕ್ತಿ ಜ್ಞಾನ ಪೂರ್ಣರು ಸುಖಿಪರು ಅವರೊಳಗೆ//9//
ಆವ ಜೀವರೊಳಿದ್ದರೇನು? ಇನ್ನಾವ ಕರ್ಮವ ಮಾಡಲೇನು?
ಇನ್ನಾವ ಗುಣ ರೂಪಗಳ ಉಪಾಸನೆ ಮಾಡಲೇನವರು?
ಕಾವನಯ್ಯನ ಪರಮ ಕಾರುಣ್ಯ ಅವಲೋಕನ ಬಲದಿ ಚರಿಸುವ
ದೇವತೆಗಳನು ಮುಟ್ಟಲು ಆಪವೆ ಪಾಪ ಕರ್ಮಗಳು//10//
ಪತಿಯೊಡನೆ ಮನಬಂದ ತೆರದಲಿ ಪ್ರತಿ ದಿವಸದಲಿ ರಮಿಸಿ ಮೋದಿಸಿ
ಸುತರ ಪಡೆದು ಇಳೆಯೊಳು ಜಿತ ಇಂದ್ರಿಯಳು ಎಂದು ಕರೆಸುವಳು
ಕೃತಿ ಪತಿ ಕಥಾಮೃತ ಸುಭೋಜನ ರತ ಮಹಾತ್ಮರಿಗೆ
ಇತರ ದೋಷ ಪ್ರತತಿಗಳು ಸಂಬಂಧಿಸುವವೇನು ಅಚ್ಯುತನ ದಾಸರಿಗೆ//11//
ಸೂಸಿಬಹ ನದಿಯೊಳಗೆ ತನ್ನ ಸಹಾಸ ತೋರುವೆನೆನುತ
ಜಲಕೆದುರು ಈಸಿದರೆ ಕೈಸೋತು ಮುಳುಗುವ
ಹರಿಯ ಬಿಟ್ಟವನು ಕ್ಲೇಶವೈದುವ ಅನಾದಿಯಲಿ ಸಾರ್ವೇಶ ಕ್ಲುಪ್ತಿಯ ಮಾಡಿದುದ ಬಿಟ್ಟು
ಆಶೆಯಿಂದಲಿ ಅನ್ಯರ ಆರಾಧಿಸುವ ಮಾನವನು//12//
ನಾನು ನನ್ನದು ಎಂಬ ಜಡಮತಿ ಮಾನವನು ದಿನದಿನದಿ ಮಾಡುವ
ಸ್ನಾನ ಜಪ ದೇವಾರ್ಚನೆಯೇ ಮೊದಲಾದ ಕರ್ಮಗಳ
ದಾನವರು ಸೆಳೆದೊಯ್ವರಲ್ಲದೆ ಶ್ರೀನಿವಾಸನು ಸ್ವೀಕರಿಸ
ಮದ್ದಾನೆ ಪಕ್ವ ಕಪಿತ್ಥ ಫಲ ಭಕ್ಷಿಸಿದ ವೋಲಹುದು//13//
ಧಾತ್ರಿಯೊಳಗುಳ್ಳ ಅಖಿಳ ತೀರ್ಥಕ್ಷೇತ್ರ ಚರಿಸಿದರೇನು
ಪಾತ್ರಾಪಾತ್ರವರಿತು ಅನ್ನಾದಿ ದಾನವ ಮಾಡಿ ಫಲವೇನು
ಗಾತ್ರ ನಿರ್ಮಲನಾಗಿ ಮಂತ್ರ ಸ್ತೋತ್ರ ಪಠಿಸಿದರು ಏನು
ಹರಿ ಸರ್ವತ್ರಗತನು ಎಂದರಿಯದೆ ತಾ ಕರ್ತೃ ಎಂಬುವನು//14//
ಕಂಡ ನೀರೊಳು ಮುಳುಗಿ ದೇಹವ ದಂಡಿಸಿದ ಫಲವೇನು
ದಂಡ ಕಮಂಡಲoಗಳ ಧರಿಸಿ ಯತಿಯೆಂದೆನಿಸಿ ಫಲವೇನು
ಅಂಡಜಾಧಿಪನು ಅಂಸಗನ ಪದ ಪುಂಡರೀಕದಿ ಮನವಹರ್ನಿಶಿ
ಬಂಡುಣಿಯವೋಲ್ ಇರಿಸಿ ಸುಖಪಡದೆ ಇಪ್ಪ ಮಾನವನು//15//
ವೇದ ಶಾಸ್ತ್ರ ಪುರಾಣ ಕಥೆಗಳ ಓದಿ ಪೇಳಿದರೇನು
ಸಕಲ ನಿಷೇಧ ಕರ್ಮಗಳ ತೊರೆದು ಸತ್ಕರ್ಮಗಳ ಮಾಡಿ ಏನು
ಓದನಂಗಳ ಜರಿದು ಶ್ವಾಸ ನಿರೋಧಗೈಸಿದರೇನು
ಕಾಮ ಕ್ರೋಧವ ಅಳಿಯದೆ ನಾನು ನನ್ನದೆಂಬ ಮಾನವನು//16//
ಏನು ಕೇಳಿದರೇನು ನೋಡಿದರೇನು ಓದಿದರೇನು
ಪೇಳಿದರೇನು ಪಾಡಿದರೇನು ಮಾಡಿದರೇನು ದಿನದಿನದಿ
ಶ್ರೀನಿವಾಸನ ಜನ್ಮ ಕರ್ಮ ಸದಾ ಅನುರಾಗದಿ ನೆನೆದು
ತತ್ತತ್ ಸ್ಥಾನದಲಿ ತದ್ರೂಪ ತನ್ನಾಮಕನ ಸ್ಮರಿಸದವ//17//
ಬುದ್ಧಿ ವಿದ್ಯಾಬಲದಿ ಪೇಳಿದ ಅಶುದ್ಧ ಕಾವ್ಯವು ಇದಲ್ಲ
ತತ್ವ ಸುಪದ್ಧತಿಗಳನು ತಿಳಿದ ಮಾನವನು ಅಲ್ಲ ಬುಧರಿಂದ
ಮಧ್ವ ವಲ್ಲಭ ತಾನೇ ಹೃದಯದೊಳು ಇದ್ದು ನುಡಿದಂದದಲಿ ನುಡಿದೆನು
ಅಪದ್ಧಗಳ ನೋಡದಲೆ ಕಿವಿಗೊಟ್ಟು ಆಲಿಪುದು ಬುಧರು//18//
ಕಬ್ಬಿನೊಳಗಿಹ ರಸ ವಿದಂತಿಗೆ ಅಬ್ಬು ಬಲ್ಲುದೆ
ಭಾಗ್ಯ ಯೌವನ ಮಬ್ಬಿನಲಿ ಮೈ ಮರೆದವಗೆ ಹರಿ ಸುಚರಿತಾಮೃತವು ಲಭ್ಯವಾಗದು
ಹರಿಪದಾಬ್ಜದಿ ಹಬ್ಬಿದ ಅತಿ ಸದ್ಭಕ್ತಿ ರಸ
ಉಂಡು ಉಬ್ಬಿ ಕೊಬ್ಬಿ ಸುಖಾಬ್ಧಿಯೊಳಗೆ ಆಡುವವಗೆ ಅಲ್ಲದಲೆ//19//
ಖಗವರಧ್ವಜನ ಅಂಘ್ರಿ ಭಕುತಿಯ ಬಗೆಯನು ಅರಿಯದ ಮಾನವರಿಗಿದು
ಒಗಟಿನಂದದಿ ತೋರುತಿಪ್ಪದು ಎಲ್ಲ ಕಾಲದಲಿ
ತ್ರಿಗುಣ ವರ್ಜಿತನ ಅಮಲ ಗುಣಗಳ ಪೊಗಳಿ ಹಿಗ್ಗುವ ಭಾಗವತರಿಗೆ
ಮಿಗೆ ಭಕುತಿ ವಿಜ್ಞಾನ ಸುಖವಿತ್ತು ಅವರ ರಕ್ಷಿಪುದು//20//
ಪರಮ ತತ್ವ ರಹಸ್ಯವು ಇದು ಭೂಸುರರು ಕೇಳುವುದು ಸಾದರದಿ
ನಿಷ್ಠುರಿಗಳಿಗೆ ಮೂಢರಿಗೆ ಪಂಡಿತ ಮಾನಿ ಪಿಶುನರಿಗೆ
ಅರಸಿಕರಿಗೆ ಇದು ಪೇಳ್ವುದಲ್ಲ ಅನವರತ ಭಗವತ್ಪಾದ
ಯುಗಳ ಅಂಬುರುಹ ಮಧುಕರನು ಎನಿಸುವವರಿಗೆ ಇದನು ಅರುಪು ಮೋದದಲಿ//21//
ಲೋಕವಾರ್ತೆಯು ಇದಲ್ಲ ಪರ ಲೋಕೈಕನಾಥನ ವಾರ್ತೆ ಕೇಳ್ವರೆ
ಕಾಕುಮನುಜರಿಗೆ ಪರಿಮಳವು ಷಟ್ಪದ ಸ್ವೀಕರಿಸುವಂದದಲಿ
ಜಲಚರ ಭೇಕ ಬಲ್ಲುದೆ? ಇದರ ರಸ ಹರಿ ಭಕುತಗಲ್ಲದಲೆ//22//
ಸ್ವಪ್ರಯೋಜನರಹಿತ ಸಕಲೇಷ್ಟ ಪ್ರದಾಯಕ ಸರ್ವಗುಣ ಪೂರ್ಣ ಪ್ರಮೇಯ
ಜರಾಮರಣ ವರ್ಜಿತ ವಿಗತ ಕ್ಲೇಶ ವಿಪ್ರತಮ ವಿಶ್ವಾತ್ಮ
ಘ್ರುಣಿ ಸೂರ್ಯ ಪ್ರಕಾಶ ಅನಂತ ಮಹಿಮ
ಘೃತ ಪ್ರತೀಕ ಆರಾಧಿತ ಅಂಘ್ರಿ ಸರೋಜ ಸುರರಾಜ//23//
ವನಚರ ಅದ್ರಿ ಧರಾ ಧರನೆ ಜಯ ಮನುಜ ಮೃಗವರ ವೇಷ ಜಯ
ವಾಮನ ತ್ರಿವಿಕ್ರಮ ದೇವ ಜಯ ಭೃಗು ರಾಮ ಭೂಮ ಜಯ
ಜನಕಜಾ ವಲ್ಲಭನೆ ಜಯ ರುಗ್ಮಿಣಿ ಮನೋರಥ ಸಿದ್ಧಿದಾಯಕ
ಜಿನ ವಿಮೋಹಕ ಕಲಿವಿದಾರಣ ಜಯ ಜಯಾರಮಣ//24//
ಸಚ್ಚಿದಾನಂದಾತ್ಮ ಬ್ರಹ್ಮ ಕರಾರ್ಚಿತ ಅಂಘ್ರಿ ಸರೋಜ
ಸುಮನಸ ಪ್ರೋಚ್ಚ ಸನ್ಮಂಗಳದ ಮಧ್ವ ಅಂತಃಕರಣರೂಢ
ಅಚ್ಯುತ ಜಗನ್ನಾಥ ವಿಠಲ ನಿಚ್ಚ ನೆಚ್ಚಿದ ಜನರ ಬಿಡ
ಕಾಡ್ಗಿಚ್ಚನು ಉಂಡು ಅರಣ್ಯದೊಳು ಗೋ ಗೋಪರನು ಕಾಯ್ದ//25//
//ಇತಿ ಶ್ರೀ ಸರ್ವಪ್ರತೀಕ ಸಂಧಿ ಸಂಪೂರ್ಣಂ//
ಶ್ರೀ ಕೃಷ್ಣಾರ್ಪಣಮಸ್ತು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.