ತನುವಿನೊಳಗೆ ಅನುದಿನವಿದ್ದು
ಎನಗೊಂದು ಮಾತ ಪೇಳದೆ ಪೋದೆ ಹಂಸ || ಪ||

ಜಾಳಾಂದ್ರವೆಂಬದು ಒಂಬತ್ತು ಬಾಗಿಲ ಮನೆ
ರೂವಾರವೆಂಬ ಒಂಬತ್ತು ಬಾಗಿಲ ದಾಟಿ
ಗಾಳಿ ತಂಪಿನೊಳಿದ್ದು ತಾನು ಹಾರಿ ಪೋಪಾಗ
ಕಾಯಕೆ ಹೇಳದೆ ಹೋಯಿತು ಒಂದು ಮಾತ  ||-1||

ಹಳ್ಳ ಕೊಳ್ಳಗಳಲಿ ತಂಪಿನ ತಡಿಯಲಿ
ಬಳ್ಳಿ ಕಾಯಿಗಾತು ಫಲವಾಯಿತು
ಒಳ್ಳೆಯ ತನಿಹಣ್ಣು ಉದುರಿ ತಾ ಪೋಪಾಗ
ಬಳ್ಳಿಗೆ ಹೇಳದೆ ಹೋಯಿತು ಒಂದು ಮಾತ ||-2-||

ಗಟ್ಟಿ – ಬೆಟ್ಟಗಳಲಿ ಶಾಖೆಯ ತುದಿಯಲಿ
ಕಟ್ಟಿತು ಜೇನನು ಸುಖಕಾಗಿ
ಗಟ್ಟಿ ತುಪ್ಪವನುಂಡು ನೊಣ ಹಾರಿ ಪೋಪಾಗ
ಹಿಪ್ಪೆಗೆ ಹೇಳದೆ ಹೋಯಿತು ಒಂದು ಮಾತ ||-3-||

ರವಿವಿಸ್ತಾರವ ಹಂಸ ಕೇಳಿದನೈ ನಿನ್ನ
ಪೆಸರ ಪೇಳಲೆನ್ನಳವಲ್ಲ
ರಸ ವಸ್ತುವನುಂಡು ಜ್ಯೋತಿ ತಾ ಪೋಪಾಗ
ಪಣತಿಗೆ ಪೇಳದೆ ಹೋಯಿತು ಒಂದು ಮಾತು ||-4-||

ಸಿರಿಪುರಂದರ ವಿಠಲನ ಮಾತು ಪುಸಿಯಲ್ಲ
ಹಣೆಯ ಬರೆಹವ ಮೀರಲುಬಲ್ಲುದೆ ?
ಸರಸವನಾಣೆಯ ಮುತ್ತು ಆಗಲಿ ತಾ ಪೋಪಾಗ
ಚಿಪ್ಪಿಗೆ ಪೇಳಿದಾಯಿತು ಒಂದು ಮಾತ||- 5-||

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.