ರಚನೆ : ವ್ಯಾಸ ವಿಠಲ (ಕಲ್ಲೂರು ಸುಬ್ಬಣ್ಣಾಚಾರ್ಯ)

ಪುತ್ತೂರು ನರಸಿಂಹ ನಾಯಕ್ ದನಿಯಲ್ಲಿ –

ಸ್ಮರಿಸಿ ಬದುಕಿರೊ ದಿವ್ಯ ಚರಣಕೆರಗಿರೊ
ದುರಿತ ತರಿದು ಪೊರೆವ ವಿಜಯ ಗುರುಗಳೆಂಬರಾ

ದಾಸರಾಯನ ದಯವ ಸೂಸಿ ಪಡೆದನಾ
ದೋಷರಹಿತನಾ ಸಂತೋಷಭರಿತನಾ ||೧||

ಜ್ಞಾನವಂತನ ಬಲು ನಿಧಾನಿ ಶಾಂತನ
ಮಾನ್ಯವಂತನ ಬಹು ವದಾನ್ಯದಾಂತನ ||೨||

ಹರಿಯ ಭಜಿಸುವ ನರಹರಿಯ ಯಜಿಸುವ
ದುರಿತ ತ್ಯಜಿಸುವ ಜನಕೆ ಹರುಷ ಸುರಿಸುವ ||೩||

ಮೋದಭರಿತನ ಪಂಚಭೇದವರಿತನ
ಸಾಧುಚರಿತನ ಮನೋವಿಷಾದ ಮರೆತನ ||೪||

ಇವರ ನಂಬಿದ ಜನಕೆ ಭವವಿದೆಂಬುದು
ಹವಣವಾಗದೋ ನಮ್ಮವರ ಮತವಿದು ||೫||

ಪಾಪಕೋಟಿಯ ರಾಶಿ ಲೇಪವಾಗದು
ತಾಪ ಕಳೆವನು ಬಲು ದಯಾ ಪಯೋನಿಧಿ ||೬||

ಕವನರೂಪದಿ ಹರಿಯ ಸ್ತವನ ಮಾಡಿದ
ಭುವನ ಬೇಡಿದ ಮಾಧವನ ನೋಡಿದ ||೭||

ರಂಗನೆಂದನ ಭವವು ಹಿಂಗಿತೆಂಬನ
ಮಂಗಳಾಂಗನ ಅಂತರಂಗವರಿತನ ||೮||

ಕಾಶಿನಗರದಲ್ಲಿದ್ದ ವ್ಯಾಸದೇವನ
ದಯವ ಸೂಸಿ ಪಡೆದನ ಉಲ್ಲಾಸತನದಲಿ ||೯||

ಚಿಂತೆ ಬೇಡಿರೋ ನಿಶ್ಚಿಂತರಾಗಿರೋ
ಶಾಂತ ಗುರುಗಳ ಪಾದವಾಂತು ನಂಬಿರೋ ||೧೦||

ಖೇದವಾಗದೋ ನಿಮಗೆ ಮೋದವಾಹುದೊ
ಆದಿ ದೇವನ ಸುಪ್ರಸಾದವಾಹುದೋ ||೧೧||

ತಾಪ ತಡೆವನು ಬಂದ ಪಾಪ ಕಡಿವನು
ಶ್ರೀಪತಿಯ ಪದ ಸಮೀಪವಿಡುವನು ||೧೨||

ವೇದ ಓದಲು ಬರಿದೆ ವಾದ ಮಾಡಲು
ಹಾದಿ ದೊರೆಯದು ಬುಧರ ಪಾದ ನಂಬದೆ ||೧೩||

ಗಂಗೆ ಮಿಂದರೆ ಮಲವು ಹಿಂಗಿತಲ್ಲದೆ
ರಂಗನೊಲಿಯನು ಭಕ್ತರ ಸಂಗ ದೊರಕದೆ ||೧೪||

ಲೆಕ್ಕವಿಲ್ಲದಾ ದೇಶ ತುಕ್ಕಿ ಬಂದರೂ
ದುಃಖವಲ್ಲದೆ ಲೇಶ ಭಕ್ತಿ ದೊರೆಯದು ||೧೫||

ದಾನ ಮಾಡಲು ದಿವ್ಯಗಾನ ಪಾಡಲು
ಜ್ಞಾನ ದೊರೆಯದೊ ಇವರಧೀನವಾಗದೆ ||೧೬||

ನಿಷ್ಠೆ ಯಾತಕೆ ಕಂಡ ಕಷ್ಟವ್ಯಾತಕೆ
ದಿಟ್ಟ ಗುರುಗಳ ಪಾದ ಮುಟ್ಟಿ ಭಜಿಸಿರೊ ||೧೭||

ಪೂಜೆ ಮಾಡಲು ಕಂಡ ಗೋಜು ಬೀಳಲು
ಬೀಜ ಮಾತಿನ ಫಲ ಸಹಜ ದೊರಕದು ||೧೮||

ಸುರರು ಎಲ್ಲರು ಇವರ ಕರವ ಪಿಡಿವರೊ
ತರಳರಂದದಿ ಹಿಂದೆ ತಿರುಗುತಿಪ್ಪರೊ ||೧೯||

ಗ್ರಹಗಳೆಲ್ಲವೂ ಇವರ್ಗೆ ಸಹಾಯ ಮಾಡುತ
ಅಹೋರಾತ್ರಿಲಿ ಸುಖದ ನಿಹವ ಕೊಡುವವು ||೨೦||

ವ್ಯಾಧಿ ಬಾರದೊ ದೇಹಬಾಧೆ ತಟ್ಟದೊ
ಆದಿ ದೇವನ ಸುಪ್ರಸಾದವಾಹುದೊ ||೨೧||

ಪತಿತಪಾಮರ ಮಂದಮತಿಯು ನಾ ಬಲು
ಸ್ತುತಿಸಲಾಪೆನೆ ಇವರ ಅತಿಶಯಂಗಳ ||೨೨||

ಕರುಣದಿಂದಲಿ ನಮ್ಮ ಪೊರೆವನಲ್ಲದೆ
ದುರಿತಕೋಟಿಯ ಬೇಗ ತರಿವ ದಯದಲಿ ||೨೩||

ಮಂದಮತಿಗಳು ಇವರ ಚಂದವರಿಯದೆ
ನಿಂದಿಸುವರೊ ಭವದ ಬಂಧ ತಪ್ಪದೊ ||೨೪||

ಇಂದಿರಾಪತಿ ಇವರ ಮುಂದೆ ಕುಣಿವನೊ
ಅಂದ ವಚನವ ನಿಜಕೆ ತಂದು ತೋರ್ಪನು ||೨೫||

ಉದಯಕಾಲದಿ ಈ ಪದವ ಪಠಿಸಲು
ಮದಡನಾದರು ಜ್ಞಾನ ಉದಯವಾಹುದೊ ||೨೬||

ಸಟೆಯಿದಲ್ಲವೊ ವ್ಯಾಸವಿಠಲ ಬಲ್ಲನೊ
ಪಠಿಸಬಹುದಿದು ಕೇಳಿ ಕುಟಿಲರಹಿತರು ||೨೭||

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.