ಹರಿಕಥಾಮೃತಸಾರ – ಮಂಗಳಾಚರಣ ಸಂಧಿ
ರಚನೆ : ಶ್ರೀ ಜಗನ್ನಾಥ ದಾಸರು

ಹರಿಕಥಾಮೃತಸಾರ ಗುರುಗಳ|
ಕರುಣದಿಂದಾಪನಿತು ಪೇಳುವೆ|
ಪರಮಭಗವದ್ಭಕ್ತರಿದಾನದರದಿ ಕೇಳುವುದು||ಪ||

ಶ್ರೀರಮಣಿಕರಕಮಲಪೂಜಿತ |
ಚಾರುಚರಣಸರೋಜ ಬ್ರಹ್ಮಸ |
ಮೀರವಾಣಿ ಫಣೀಂದ್ರ ವೀಂದ್ರ ಭವೇಂದ್ರ ಮುಖವಿನುತ ||
ನೀರಜಭವಾಂಡೋದಯಸ್ಥಿತಿ |
ಕಾರಣನೆ ಕೈವಲ್ಯದಾಯಕ |
ನಾರಸಿಂಹನೆ ನಮಿಪೆ ಕರುಣಿಪುದೆಮಗೆ ಮಂಗಳವ || ೧ ||

ಜಗದುದರನತಿ ವಿಮಲಗುಣರೂ |
ಪಗಳನಾಲೋಚನದಿ ಭಾರತ |
ನಿಗಮತತಿಗಳತಿಕ್ರಮಿಸಿ ಕ್ರಿಯಾವಿಶೇಷಗಳ ||
ಬಗೆಬಗೆಯ ನೂತನವ ಕಾಣುತ |
ಮಿಗೆ ಹರುಷದಿಂ ಪೊಗಳಿ ಹಿಗ್ಗುವ |
ತ್ರಿಗುಣಮಾನಿ ಮಹಾಲಕುಮಿ ಸಂತೈಸಲನುದಿನವು || ೨ ||

ನಿರುಪಮಾನಂದಾತ್ಮಭವ ನಿ |
ರ್ಜರಸಭಾಸಂಸೇವ್ಯ ಋಜುಗಣ ||
ದರಸೆ ಸತ್ತ್ವ ಪ್ರಚುರ ವಾಣೀಮುಖಸರೋಜೇನ ||
ಗರುಡಶೇಷಶಶಾಂಕದಳಶೇ |
ಖರರ ಜನಕ ಜಗದ್ಗುರುವೇ ತ್ವ |
ಚ್ಚರಣಗಳಿಗಭಿವಂದಿಸುವೆ ಪಾಲಿಪುದು ಸನ್ಮತಿಯ || ೩ ||

ಆರು ಮೂರೆರಡೊಂದು ಸಾವಿರ |
ಮೂರೆರಡು ಶತಶ್ವಾಸ ಜಪಗಳ |
ಮೂರುವಿಧ ಜೀವರೊಳಗಬ್ಜಜಕಲ್ಪಪರಿಯಂತ ||
ತಾ ರಚಿಸಿ ಸಾತ್ತ್ವರಿಗೆ ಸುಖ ಸಂ |
ಸಾರ ಮಿಶ್ರರಿಗಧಮಜನರಿಗ |
ಪಾರ ದುಃಖಗಳೀವ ಗುರು ಪವಮಾನ ಸಲಹೆಮ್ಮ || ೪ ||

ಚತುರವದನನ ರಾಣಿ ಅತಿರೋ |
ಹಿತ ವಿಮಲ ವಿಜ್ಞಾನಿ ನಿಗಮ |
ಪ್ರತತಿಗಳಿಗಭಿಮಾನಿ ವೀಣಾಪಾಣಿ ಬ್ರಹ್ಮಾಣಿ ||
ನತಿಸಿ ಬೇಡುವೆ ಜನನಿ ಲಕ್ಷ್ಮೀ |
ಪತಿಯ ಗುಣಗಳ ತುತಿಪುದಕೆ ಸ |
ನ್ಮತಿಯ ಪಾಲಿಸಿ ನೆಲೆಸು ನೀ ಮದ್ವದನ ಸದನದಲಿ || ೫ ||

ಕೃತಿರಮಣ ಪ್ರದ್ಯುಮ್ನನಂದನೆ |
ಚತುರವಿಶಂತಿ ತತ್ತ್ವಪತಿ ದೇ |
ವತೆಗಳಿಗೆ ಗುರುವೆನಿಸುತಿಹ ಮಾರುತನ ನಿಜಪತ್ನಿ ||
ಸತತ ಹರಿಯಲಿ ಗುರುಗಳಲಿ ಸ |
ದ್ರತಿಯ ಪಾಲಿಸಿ ಭಾಗವತ ಭಾ |
ರತಪುರಾಣರಹಸ್ಯ ತತ್ತ್ವಗಳರುಪು ಕರುಣದಲಿ || ೬ ||

ವೇದಪೀಠ ವಿರಿಂಚಿ ಭವ ಶ |
ಕ್ರಾದಿ ಸುರ ವಿಜ್ಞಾನದಾಯಕ |
ಮೋದ ಚಿನ್ಮಯಗಾತ್ರ ಲೋಕಪವಿತ್ರ ಸುಚರಿತ್ರ ||
ಛೇದ ಭೇದ ವಿಷಾದ ಕುಟಿಲಾಂ |
ತಾದಿ ಮಧ್ಯ ವಿದೂರ ಆದಾ |
ನಾದಿ ಕಾರಣ ಬಾದರಾಯಣ ಪಾಹಿ ಸತ್ರಾಣ || ೭ ||

ಕ್ಷಿತಿಯೊಳಗೆ ಮಣಿಮಂತ ಮೊದಲಾ |
ದತಿ ದುರಾತ್ಮರು ಒಂದಧಿಕ ವಿಂ |
ಶತಿ ಕುಭಾಷ್ಯವ ರಚಿಸೆ ನಡುಮನೆಯೆಂಬ ಬ್ರಾಹ್ಮಣನ ||
ಸತಿಯ ಜಠರದೊಳವತರಿಸಿ ಭಾ |
ರತಿ ರಮಣ ಮಧ್ವಾಭಿಧಾನದಿ |
ಚತುರದಶ ಲೋಕದಲಿ ಮೆರೆದಪ್ರತಿಮಗೊಂದಿಸುವೆ || ೮ ||

ಪಂಚ ಭೇದಾತ್ಮಕ ಪ್ರಪಂಚಕೆ |
ಪಂಚರೂಪಾತ್ಮಕನೆ ದೈವಕ |
ಪಂಚಮುಖ ಶಕ್ರಾದಿಗಳು ಕಿಂಕರರು ಶ್ರೀಹರಿಗೆ ||
ಪಂಚವಿಂಶತಿ ತತ್ತ್ವ ತರತಮ |
ಪಂಚಿಕೆಗಳನು ಪೇಳ್ದ ಭಾವಿ ವಿ |
ರಿಂಚಿಯೆನಿಪಾನಂದತೀರ್ಥರ ನೆನೆವೆನನುದಿನವು || ೯ ||

ವಾಮದೇವ ವಿರಿಂಚಿತನಯ ಉ |
ಮಾ ಮನೋಹರ ಉಗ್ರ ಧೂರ್ಜಟಿ |
ಸಾಮಜಾಜಿನವಸನ ಭೂಷಣ ಸುಮನಸೋತ್ತಂಸ ||
ಕಾಮಹರ ಕೈಲಾಸ ಮಂದಿರ |
ಸೋಮಸೂರ್ಯಾನಲ ವಿಲೋಚನ |
ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವ || ೧೦ ||

ಕೃತ್ತಿವಾಸನೆ ಹಿಂದೆ ನೀ ನಾ |
ಲ್ವತ್ತು ಕಲ್ಪ ಸಮೀರನಲಿ ಶಿ |
ಷ್ಯತ್ವ ವಹಿಸ್ಯಖಿಳಾಗಮಾರ್ಥಗಳೋದಿ ಜಲಧಿಯೊಳು ||
ಹತ್ತು ಕಲ್ಪದಿ ತಪವಗೈದಾ |
ದಿತ್ಯರೊಳಗುತ್ತಮನೆನಿಸಿ ಪುರು |
ಷೋತ್ತಮನ ಪರಿಯಂಕ ಪದವೈದಿದೆಯೊ ಮಹದೇವ || ೧೧ ||

ಪಾಕಶಾಸನ ಮುಖ್ಯ ಸಕಲ ದಿ |
ವೌಕಸರಿಗಭಿನಮಿಪೆ ಋಷಿಗಳಿ |
ಗೇಕಚಿತ್ತದಿ ಪಿತೃಗಳಿಗೆ ಗಂಧರ್ವ ಕ್ಷಿತಿಪರಿಗೆ ||
ಆ ಕಮಲನಾಭಾದಿ ಯತಿಗಳ |
ನೀಕಕಾನಮಿಸುವೆನು ಬಿಡದೆ ರ |
ಮಾಕಳತ್ರನ ದಾಸವರ್ಗಕೆ ನಮಿಪೆನನವರತ || ೧೨ ||

ಪರಿಮಳವು ಸುಮನದೊಳಗನಲ |
ನರಣಿಯೊಳಗಿಪ್ಪಂತೆ ದಾಮೋ |
ದರನು ಬ್ರಹ್ಮಾದಿಗಳ ಮನದಲಿ ತೋರಿ ತೋರದೆಲೆ ||
ಇರುತಿಹ ಜಗನ್ನಾಥ ವಿಠಲನ |
ಕರುಣ ಪಡೆವ ಮುಮುಕ್ಷು ಜೀವರು |
ಪರಮಭಾಗವತರನು ಕೊಂಡಾಡುವುದು ಪ್ರತಿದಿನವು || ೧೩ ||

 

One thought on “ಹರಿಕಥಾಮೃತಸಾರ -01- ಮಂಗಳಾಚರಣ ಸಂಧಿ”

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.