ತುಂಬಿದ ಶಾಂತಿಯ ಕೆಣಕುವ ಹಾಗೆ
ಮನಸನು ತಲ್ಲಣ ಗೊಳಿಸುವ ಹಾಗೆ
ಎಲ್ಲಿಂದಲೇ ತೂರಿ ಬಂದಿತು ಶಬ್ದ
ಕಲಕೇ ಹೋಯಿತು ದಿವ್ಯ ನಿಶ್ಯಬ್ದ !
ಅಂತರಾಳದ ಆಳಕ್ಕಿಳಿದು
ಮೊಳಗುತ್ತಲಿದೆ ಕಾಲದ ಕೂಗು
ಹನಿಹನಿ ಆಯುವು ಸೋರುವ ಮುನ್ನ
ಜನ್ಮ ಸಾರ್ಥಕಗೊಳಿಸಿಕೊ ಚಿನ್ನ !
ಆಯಿತೇ ಮಗನಿಗೆ ವಿದ್ಯಾಭ್ಯಾಸ ?
ಆದೀತು ಮಗಳ ಮದುವೆಯೂ ನಿರಾಯಾಸ
ತೀರಿತು ತಾನೇ ಮಾಡಿದ ಸಾಲ ?
ಬರಿ ಕನವರಿಕೆಯಲಿ ಕಳೆಯಿತೇ ಕಾಲ ?
ಆಗಿತ್ತೇ ನಿನ್ನಿಂದ ಅನ್ಯರಿಗುಪಕಾರ ?
ಆಗಿರಲಿಲ್ಲ ತಾನೇ ನೀನಾರಿಗೂ ಮಣಭಾರ ?
ನಿನ್ನ ಬಾಳಿಗೂ ಒಂದು ಅರ್ಥವಿತ್ತೇ ?
ಇಲ್ಲ, ಬರೀ ಕುಯುಕ್ತಿಯಲಿ ವ್ಯರ್ಥವಾಯ್ತೇ?
ಅರೆಬರೆದಿಟ್ಟ ಗ್ರಂಥ ಏನಾಯ್ತು ?
ಆಪ್ತ-ಮಿತ್ರರ ಭೇಟಿ ಎಂದಾಯ್ತು ?
ಪ್ರಪಂಚ ಪರ್ಯಟನ, ಕಾಶಿ ಯಾತ್ರೆ ?
ಮುಗಿಸಿರಿ ಬೇಗ ; ಮುಗಿಯಲಿದೆ ಜಾತ್ರೆ !
ಗಣಗಣ ಬಡಿದಿದೆ ಕಾಲದ ಗಂಟೆ
ಅದಕೆದುರಾಡುವ ಧೀರರು ಉಂಟೇ?
ಬಂದ ದಾರಿಯಲ್ಲಿ ಇರಲಿ ಹೆಜ್ಜೆ ಗುರುತು
ಒಯ್ಯುವುದೇನಿಲ್ಲ ಸುಕೃತಗಳ ಹೊರೆ ಹೊರತು!
****