ನೆನಪಿರಲಿ – ೨೦೦೫
ಸಾಹಿತ್ಯ ಮತ್ತು ಸಂಗೀತ : ಹಂಸಲೇಖ
ಗಾಯಕರು: ಸೌಮ್ಯರಾವ್, ಅನುಪಮ,ಅನೂಪ್
ದ್ರೌಪದಿ … ದ್ರೌಪದಿ … ಎಂದಿನದೇ ಈ ಕದನ
ಷಟ್ಪದಿ … ಚೌಪದಿ …ಯಾವುದರಲೀ ಈ ಕವನ
ಮನಸೇ ಮಹಾ ಮರ್ಕಟ
ಆಯ್ಕೆ ಮಹಾ ಸಂಕಟ
ಚಿತ್ತ ಮಹಾ ಚಂಚಲ
ಆಸೆ ತಿಮಿಂಗಿಲ
ಮಳೆಗೆ ಮನೆ ಮಣ್ಣಿನೊಳಗೆ
ಮಳೆ ಮನಸು ಇದೆ ಗಾಳಿಯೊಳಗೆ
ಸುಖದ ಬಹುಮಾನ ಉಚಿತ ಕೊಡುವಂತ
ಪಂಚಭೂತಗಳ ಜರಿವುದೆಂತೋ
ಪೂಜೆಗೆ ಹೂಗಳನು ಕಟ್ಟೋ ಕೈಗಳಿಗೆ
ಗಂಧ ಸೋಕಿದರೆ ಜರಿವುದೆಂತೋ
ಮನಸೇ ಮಹಾ ಮರ್ಕಟ
ಸನಿಹ ಮಹಾ ಪ್ರೇರಕ
ಚಿತ್ತ ಮಹಾ ಚಂಚಲ
ಮನ್ಮಥ ಸಮಯ ಸಾಧಕ ||೧||
ಎಂದು ಗೆಲ್ಲು ಇಂದ್ರಿಯಗಳ
ಕೊಲ್ಲು ಅರಿಷಡ್ವರ್ಗಗಳ
ಎಳೆಯ ಬಿಸಿಲೊಳಗೆ
ಕುಣಿವ ತನು ಒಳಗೆ
ಕಹಿಯ ವಿಷಗಳಿಗೆ ತರುವುದೆಂತೋ
ಕಣ್ಣು ಮುಚ್ಚಿದರು ಕಾಣೊ ಸ್ವರ್ಗವನು
ಸವಿಯೊ ಹೆಣ್ಣೆದೆಯ ಜರಿವುದೆಂತೋ
ದ್ರೌಪದಿ … ದ್ರೌಪದಿ … ಎಂದಿನದೇ ಕದನ
ಷಟ್ಪದಿ … ಚೌಪದಿ …ಯಾವುದರಲೀ ಈ ಕವನ||೨||
ಬಯಕೆ ಬೆಂಕಿ ಬಲೆಯಾಗಿದೆ
ಭ್ರಮರ ನಿನ್ನ ನೋಡಬೇಕಿದೆ
ಹೂವು ಹಾರಲಾರದು
ಹಾಡಿ ಕೂಗಲಾರದು
ಅರಳದಿರಲಾರದು ಬೆರೆವುದೆಂತೋ
ಪ್ರಥಮ ಅನುಭವದ ಮಧುರ ನೆನಪುಗಳ
ಸುರಿದು ಹೋದವನ ಮರೆವುದೆಂತೋ
ಮನಸೇ ಮಹಾ ಮರ್ಕಟ
ವಿರಹ ಮಹಾ ದುಶ್ಚಟ
ಚಿತ್ತ ಮಹಾ ಚಂಚಲ
ತಿಳಿಯೋ ಹೆಣ್ಣ ಹಂಬಲ ||೩||
ದ್ರೌಪದಿ … ದ್ರೌಪದಿ … ಎಂದಿನದೇ ಈ ಕದನ
ಷಟ್ಪದಿ … ಚೌಪದಿ …ಯಾವುದರಲೀ ಈ ಕವನ
***