“ನಿಮಗೆ ಅತ್ಯಂತ ಇಷ್ಟದ ತಿಂಡಿ, ತಿನಿಸು, ಅಡುಗೆ ಯಾವುದು?” ಇದು ಅತಿ ಸುಲಭದ ಪ್ರಶ್ನೆ ಮತ್ತು ಕಠಿಣವಾದ ಪ್ರಶ್ನೆಯೂ ಹೌದು! ಎಷ್ಟೇ ಸರಳ ಅನ್ನಿಸಿದರೂ, ಯಾರಾದರೂ ಇದ್ದಕ್ಕಿದ್ದಂತೆ ನಮ್ಮನ್ನು ನಿಲ್ಲಿಸಿ, ಈ ಪ್ರಶ್ನೆ ಕೇಳಿದರೆ, ಕ್ಷಣ ಕಾಲವಾದರೂ ಯೋಚಿಸಲೇ ಬೇಕಾಗುತ್ತದೆ. ಮೈಸೂರು ಪಾಕ್ ಇಷ್ಟವೆಂದರೆ ಜಿಲೇಬಿ, ಜಾಮೂನುಗಳು “ನನ್ನಲ್ಲಿ ಕೋಪವೇ? ನಾ ನಿನಗೆ ಬೇಡವೇ?” ಎಂದು ಪೆಚ್ಚುಮುಖ ಹಾಕಿಕೊಂಡಂತಾಗುತ್ತದೆ. ವಾಂಗಿಭಾತ್ ನನ್ನ ಅಚ್ಚುಮೆಚ್ಚು ಎಂದರೆ ಮಾವಿನಕಾಯಿ ಚಿತ್ರಾನ್ನಕ್ಕೆ ಅನ್ಯಾಯವಾಗುತ್ತದೆ. ಬೋಂಡ ಮೆಚ್ಚೆಂದರೆ ಪಕೋಡ ಒಲ್ಲೆನೆಂಬ ಅರ್ಥ ಮೂಡುತ್ತದೆ. ಇದು ಬೇಕೆಂದರೆ ಅದು ಬೇಡವೇ ಅನ್ನಿಸುವುದಿದೆ.
ಯಾರಾದರೂ ಶ್ರಮ ವಹಿಸಿ ಇಂತಹದೊಂದು ಮೋಜಿನ ಸರ್ವೇ ನಡೆಸಿದ್ದೇ ಆದಲ್ಲಿ ಬಹಳ ಚೆನ್ನಾಗಿರುತ್ತದೆ. ಆಗ ವಿವಿಧ ಬಗೆಯ ತಿಂಡಿ, ತಿನಿಸುಗಳ ದೊಡ್ಡದೊಂದು ಪಟ್ಟಿಯೇ ನಮ್ಮೆದುರು ಪ್ರತ್ಯಕ್ಷವಾಗಬಹುದು. ಎಲ್ಲರಿಗೂ ಚಿರಪರಿಚಿತವಾಗಿರುವ ಉತ್ತರ, ದಕ್ಷಿಣ ಭಾರತದ ಅಡುಗೆಗಳಲ್ಲದೆ, ಬೇರೆ ಬೇರೆ ಪ್ರಾಂತ್ಯಗಳ, ದೇಶ ವಿದೇಶಗಳ ರುಚಿಕರ ಖಾದ್ಯಗಳ ಸುಂದರ ಮೆರವಣಿಗೆ ನಮ್ಮೆದುರು ನಡೆಯುವುದಂತೂ ಖಂಡಿತ. ಯಾವುದೋ ಒಂದು ಬಗೆಯ ತಿಂಡಿಯನ್ನು ಇಷ್ಟವೆಂದು ಮತ್ತೆ ಮತ್ತೆ ತಿನ್ನುತ್ತಾ ಹೋದರೆ, ಆ ಪದಾರ್ಥ ತನ್ನ ತುಷ್ಟಿಗುಣವನ್ನು ಕಳೆದುಕೊಳ್ಳುತ್ತದೆ. ಸಿಹಿತಿಂಡಿ ಎಷ್ಟೇ ಇಷ್ಟವಾದರೂ ಅತಿಯಾದ ಸಿಹಿ ನಾಲಿಗೆಗೆ- ದೇಹದ ಆರೋಗ್ಯಕ್ಕೂ ಕಹಿ ಅನ್ನಿಸುತ್ತದೆ. “ಲೋಕೋ ವಿಭಿನ್ನ ರುಚಿಃ” ಎನ್ನುವಂತೆ ಒಬ್ಬರಿಗೆ ರುಚಿಯೆನಿಸಿದ್ದು ಇನ್ನೊಬ್ಬರಿಗೆ ಸಹಿಸದು. ಒಬ್ಬರಿಗೆ ಅನಿಷ್ಟವೆನಿಸಿದ್ದು ಮತ್ತೊಬ್ಬರಿಗೆ ಪರಮ ಪ್ರಿಯ. ಉಪ್ಪಿಟ್ಟು ಇಷ್ಟವಿಲ್ಲವೆಂದು ಹೀಗಳೆಯುವವರು ಕೆಲವರಾದರೆ ಅದನ್ನೇ ಮೆಚ್ಚಿಕೊಳ್ಳುವ ಹಲವರೂ ಇದ್ದಾರೆ.
ನಿಮ್ಮೆಲ್ಲರ ಅಚ್ಚುಮೆಚ್ಚಿನ ಅಡುಗೆ, ತಿಂಡಿ ಯಾವುದಿರಬಹುದೆಂಬ ಕುತೂಹಲ ನನಗೂ ಇದೆ. ನೀವೆಲ್ಲ ಅದನ್ನು ಬರೆದು ತಿಳಿಸುವವರೆಗೆ ಕಾಯುತ್ತೇನೆ. ಅದಕ್ಕೆ ಮೊದಲು ನನ್ನ ಇಷ್ಟವೇನೆಂದು ಹೇಳಿಬಿಡುತ್ತೇನೆ. ಯಾವುದೋ “ಒಂದು” ತಿನಿಸನ್ನು ನನ್ನ ಮೆಚ್ಚಿನದೆಂದು ಗುರುತಿಸುವುದು ಕಷ್ಟವಾದರೂ, ಸದಾಕಾಲವೂ ನನಗೆ ಬೇಕು ಎಂದು ಅನ್ನಿಸುವ ಏಕಮಾತ್ರ ಅಡುಗೆಯೆಂದರೆ ತಿಳಿಸಾರು. ಇದು ಹಳತಾಯಿತೆಂದು ಕಳಚಿಕೊಳ್ಳಲಾಗದ ಸತಿ-ಪತಿಯರ ಸಂಬಂಧದ ಹಾಗೆ ; ಹಳೆಯ ಅಡುಗೆಯೇ ಆದರೂ ದಿನದಿನವೂ ಹೊಸದಾಗಿಯೇ ಕಾಣಿಸುವ ಮೋಹಕತೆ ತಿಳಿಸಾರಿಗಿದೆ. ತಿನ್ನಲು ಸುಲಭ, ಮಾತ್ರವಲ್ಲ ತಯಾರಿಸುವುದು ಕೂಡ ಬಹಳ ಸುಲಭ.
ಹಸಿರು ಬಾಳೆ ಎಲೆಯ ಮೇಲೆ ಮಲ್ಲಿಗೆ ಹೂವಿನಂತಹ ಬಿಳುಪಾದ ಅನ್ನ. ಅದರ ಮೇಲೆ ತಿಳಿಸಾರು. ಒಂದು ಚಮಚ ತುಪ್ಪ. ಜೊತೆಗಿಷ್ಟು ಕರಿದ ಹಪ್ಪಳ, ಸಂಡಿಗೆಗಳು, ಉಪ್ಪಿನಕಾಯಿ. ರುಚಿಗೆ ಬೇಕಾದರೆ ಸೌತೆಕಾಯಿ ಕೋಸಂಬರಿ. ಸ್ವರ್ಗಕ್ಕೆ ಕಿಚ್ಚು ಹಚ್ಚಲು ಇಷ್ಟಿದ್ದರೆ ನನಗಂತೂ ಸಾಕೇ ಸಾಕು! ಇದರ ಮುಂದೆ ಪಂಚಭಕ್ಷ್ಯ ಪರಮಾನ್ನಗಳು ಯಾರಿಗೆ ಬೇಕು? ಬೇಡವೇ ಬೇಡವೆಂದಲ್ಲ ಮತ್ತೆ! ಒಮ್ಮೊಮ್ಮೆ ಇದ್ದರೆ ಬೇಕು. ಇರದಿದ್ದರೂ ಸರಿಯೇ. ಹೆಂಡಕುಡುಕ ರತ್ನನಿಗೆ ಕೈಹಿಡಿದ ಪುಟ್ನಂಜಿ ನಗುತ್ತಾ ಕೊಟ್ಟ ಉಪ್ಪು ಗಂಜಿಯೇ ಪ್ರಪಂಚವಾದಂತೆ, ನಾನು ತಿಳಿಸಾರಿನಿಂದಲೇ ಸಂತೃಪ್ತಳು.
ಹಿಂದೆಲ್ಲಾ, ವಧು ಪರೀಕ್ಷೆಯ ಸಮಯದಲ್ಲಿ “ಹುಡುಗಿಗೆ ಅಡುಗೆ ಮಾಡಲು ಬರುತ್ತದೆಯೆ?” ಎಂದು ವಿಚಾರಿಸಿದಾಗ, “ಹೆಚ್ಚೇನೂ ಬರದಿದ್ದರೂ ಅನ್ನ, ಸಾರು ಮಾಡಲಂತೂ ಬರುತ್ತದೆ” ಎಂಬ ಸಿದ್ಧ ಉತ್ತರ ಬರುತ್ತಿತ್ತು- ಸಾರು ಮಾಡಲು ಗೊತ್ತಿದ್ದರೆ ನೆಮ್ಮದಿಯಾಗಿ ಬದುಕಲಂತೂ ತೊಂದರೆಯಿಲ್ಲ ಎಂಬ ಕ್ಷೇಮ ಭಾವನೆಯೂ ಆ ಮಾತಿನ ಹಿಂದೆ ಪ್ರತಿಧ್ವನಿಸುತ್ತಿತ್ತು. ತಿಳಿಸಾರು ತಯಾರಿಸಲು ಪಾಕ ಪುಸ್ತಕವನ್ನು ತಿರುವಿ ಹಾಕುವುದೇನೂ ಬೇಕಾಗಿಲ್ಲ. ಕಷ್ಟದಿಂದ ಕಲಿಯುವ ಅಗತ್ಯವೂ ಇಲ್ಲ. ಎಲ್ಲರೂ ಕಲಿಯಬಹುದಾದ, ಎಲ್ಲರೂ ಮಾಡಬಹುದಾದ, “ಸುಲಭದ ಮುಕ್ತಿಗೆ ಸುಲಭವೆಂದೆನಿಸುವ” ಸರಳ ಅಡುಗೆಯಿದು.
ಸಾರು ರುಚಿಯೆನಿಸಬೇಕಾದರೆ, ಬೇಳೆಯನ್ನು ಮೆತ್ತಗಾಗುವಂತೆ ಬೇಯಿಸಿಕೊಳ್ಳುವುದು ಅತ್ಯಗತ್ಯ. ಕುಕ್ಕರುಗಳಲ್ಲಿ ಕೇಳುವುದೇ ಬೇಡ. ನಿಮಿಷಗಳಲ್ಲಿ ಎಂತಹ ಗಟ್ಟಿ ಬೇಳೆಯಾದರೂ ಹಣ್ಣಾಗಿ ಬೆಂದು ಹೋಗಿರುತ್ತದೆ. ತೆರೆದ ಪಾತ್ರೆಯಲ್ಲಿ ಬೇಳೆ ಬೇಯಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ವಿಭಿನ್ನ ರುಚಿಗೆ ಕೆಲವರು ತೊಗರಿ ಬೇಳೆಯ ಜೊತೆಗೆ ಹೆಸರು ಬೇಳೆ, ಕಡಲೆ ಬೇಳೆಯನ್ನು ಬೆರೆಸುತ್ತಾರಾದರೂ, ತೊಗರಿಬೇಳೆಯಂತೂ ಕಡ್ಡಾಯ. ಕೆಲವು ದಿನಗಳ ಹಿಂದೆ, ಅಮೆರಿಕದಲ್ಲಿ ತೊಗರಿಬೇಳೆಯ ಬೆಲೆ ಗಗನಕ್ಕೇರಿದಾಗ ಹೌಹಾರಿದ ಸಾರು ಪ್ರಿಯರಲ್ಲಿ ನಾನೂ ಒಬ್ಬಳು! ತೊಗರಿಬೇಳೆಯ ಜೊತೆ ಒಂದು ಟೊಮ್ಯಾಟೊ ಬೇಯಲು ಹಾಕಿದರೆ ಸಾರಿಗೆ ಹೆಚ್ಚುವರಿ ರುಚಿ ಲಭ್ಯವಾಗುತ್ತದೆ.
ನುಣ್ಣಗೆ ಬೆಂದ ಬೇಳೆಯನ್ನು ನೋಡಿದಾಗಲೆಲ್ಲ ನನಗೆ ಬೇಂದ್ರೆಯವರ “ಬೆಳಗು” ಕವಿತೆಯ “…ನುಣ್ಣನೆ ಎರಕವ ಹೊಯ್ದಾ…” ಸಾಲು ನೆನಪಾಗುವುದೊಂದು ವಿಶೇಷ. ಈ ನುಣ್ಣನೆಯ ಬೇಳೆಯನ್ನು ಕಡೆದು, ಆ ಬೇಳೆಯ ಕಟ್ಟಿಗೆ, ಸಾರಿನ ಪುಡಿ, ಹುಣಿಸೆ ರಸ, ಉಪ್ಪು ಬೆರೆಸಿ ಹದವಾಗಿ ಕುದಿಸಬೇಕು. ಸಾರಿನ ಪುಡಿ ಮನೆಯಲ್ಲಿ ಮಾಡಿಕೊಳ್ಳಲು ಆಗದಿದ್ದರೆ, ಅಂಗಡಿಗಳಲ್ಲಿ ಸಿಗುವ ಸಿದ್ಧ ಸಾರಿನ ಪುಡಿಗಳಿಗೆ ಮೊರೆ ಹೋಗಬಹುದು. ಸಿಹಿ ಇಷ್ಟವಾಗುವಂತಿದ್ದರೆ ಮಾತ್ರ ಒಂದು ಪುಟ್ಟ ಚೂರು ಬೆಲ್ಲ, ಇಲ್ಲದಿದ್ದರೆ ಇಲ್ಲ. ಸಾರಿನ ಪುಡಿಯ ಘಾಟು ವಾಸನೆ ಹೋಗುವ ತನಕ ಸಾರು ಕುದಿಯಬೇಕು. ಹೀಗೆ ಕುದಿಯುವಾಗಲೇ ಕೊತ್ತಂಬರಿ ಸೊಪ್ಪನ್ನು ಹಾಕಬೇಕು. ಕೊನೆಗೆ ಒಂದು ಸೌಟಿನಲ್ಲಿ ತುಪ್ಪವನ್ನು ಕಾಯಿಸಿ, ಅದಕ್ಕೆ ಸಾಸಿವೆ, ಇಂಗು, ಕರಿಬೇವಿನ ಒಗ್ಗರಣೆ ಕೊಟ್ಟರೆ ಅಲ್ಲಿಗೆ ಘಮಘಮಿಸುವ ತಿಳಿಸಾರಿನ ಅವತಾರವಾದಂತೆ!
ಸಾರು ಕುದಿಯುವ ಹಂತದಲ್ಲಿ ಮನೆ ತುಂಬ ಹರಡುವ ಪರಿಮಳವನ್ನು ಆಸ್ವಾದಿಸಿಯೇ ಸವಿಯಬೇಕು. ಸಾರು ಕುದಿದಷ್ಟು ರುಚಿ ಹೆಚ್ಚು ಎನ್ನುತ್ತಾರೆ. ಹಾಗೆಂದು ವಿಪರೀತ ಕುದಿಸಿದರೆ ಸಾರಿನಲ್ಲಿರುವ ನೀರೆಲ್ಲಾ ಆವಿಯಾಗಿ, ತಿಳಿಸಾರಿನ ಬದಲು, ಬಗ್ಗಡದಂತಹ ಗಟ್ಟಿ ಸಾರಿನ ರುಚಿ ನೋಡಬೇಕಾದ ಪಾಡು ನಮ್ಮದಾಗುತ್ತದೆ. ಸಾರು ಹದವಾಗಿ ಕುದಿಯಬೇಕು. ಆದರೆ ಉಕ್ಕಿ ಸುರಿದು ಹೋದರೆ, ಅದರಲ್ಲಿರುವ ಸಾರವೆಲ್ಲವೂ ನಷ್ಟವಾದಂತೆಯೇ. “ಉಕ್ಕಿದರೆ ಸಾರಲ್ಲ, ಸೊಕ್ಕಿದರೆ ಹೆಣ್ಣಲ್ಲ” ಎಂಬ ಗಾದೆಯೂ ಸಾರು ಉಕ್ಕಿದರೆ ರುಚಿ ಕೆಡುತ್ತದೆ ಎಂದು ನಮ್ಮನ್ನು ಎಚ್ಚರಿಸುತ್ತದೆ.
ನಮ್ಮ ಮನೆಗೆ ಒಮ್ಮೆ ಗುಜರಾತಿ ಮಿತ್ರರು ಬಂದಿದ್ದರು. ಅವರ ಮಗು ನಾನು ಮಾಡಿದ್ದ ಸಾರನ್ನು ನೋಡಿ “ಸೂಪ್, ಸೂಪ್” ಎಂದು ಬಾಯಲ್ಲಿ ನೀರೂರಿಸುತ್ತಿತ್ತು. ಸಾರನ್ನು ಕೆಲವರು ಸೂಪ್ ಎಂದು ಅನುವಾದಿಸುತ್ತಾರೆ. ಸಾರನ್ನೂ ಸೂಪಿನಂತೆ ಬಟ್ಟಲಿನಲ್ಲಿ ಹಾಕಿಕೊಂಡು ಕುಡಿಯಬಹುದಾದರೂ ಸೂಪೇ ಬೇರೆ; ಸಾರೇ ಬೇರೆ. ಕನ್ನಡೇತರರು- ಈಚೆಗೆ ಕನ್ನಡಿಗರೂ- ಸಾರನ್ನು “ರಸಂ” ಎಂದು ಕರೆಯುತ್ತಾರಾದರೂ ನನಗೇಕೋ ‘ಸಾರು’ ಪದದಲ್ಲಿರುವ ಮಾಧುರ್ಯ ಆ ಪದದಲ್ಲಿ ಕಂಡುಬಂದಿಲ್ಲ! ಬಹುಶಃ ಇದಕ್ಕೆ ನನ್ನ ಪೂರ್ವಗ್ರಹವೂ ಕಾರಣವಿರಬಹುದು.
ಮೊಸರನ್ನವನ್ನು ತಾಯಿಗೆ ಹೋಲಿಸುತ್ತಾರೆ. ಭೋಜನದ ಪ್ರಾರಂಭದಲ್ಲಿ ಬಡಿಸುವ ಪಾಯಸವನ್ನು‘ ತಾಯಿ’ ಎನ್ನುತ್ತಾರೆ. ಎಲೆ ತುದಿಯಲ್ಲಿ ಬಡಿಸುವ ತೊವ್ವೆಯನ್ನೂ ಕೆಲವರು‘ ತಾಯಿ’ ಅನ್ನುವುದಿದೆ. ಸಾರನ್ನು ಯಾರೂ ತಾಯಿ ಎಂದಿಲ್ಲವಾದರೂ, ಅದೇಕೋ ತಿಳಿಸಾರು ನನಗೆ ತಾಯಿಯ ನೆನಪನ್ನೇ ತರುತ್ತದೆ. ಬಾಲ್ಯದಲ್ಲಿ ಅಮ್ಮ ಮಾಡಿ ಹಾಕಿದ ತಿಳಿಸಾರಿನ ನೆನಪು ನನ್ನ ಮನದಾಳದಲ್ಲಿ ಗಟ್ಟಿಯಾಗಿ ನಿಂತಿರುವುದರಿಂದ ಹೀಗನ್ನಿಸಬಹುದು. ಅಮ್ಮ ಮಾಡುತ್ತಿದ್ದ ಬೇಳೆ ಸಾರು ಮಾತ್ರವಲ್ಲದೆ, ಬೇಳೆಯ ಹಂಗೇ ಇಲ್ಲದ ಗೊಡ್ಡು ಸಾರು, ಮಾವಿನ ಕಾಯಿ ಸಾರು, ಬಾಣಂತನದ ಸಮಯದಲ್ಲಿ ಮಾಡಿ ಹಾಕುತ್ತಿದ್ದ ಮೆಣಸಿನ ಸಾರು- ಇವೆಲ್ಲವೂ ಅಮ್ಮನ ನೆನಪನ್ನು ಸಾರಿನೊಡನೆ ಕಟ್ಟಿಹಾಕಿರಬೇಕೆಂದು ಭಾವಿಸುತ್ತೇನೆ.
ನಾನು ಬರೆದಿರುವ “ಅಮ್ಮ” ಎಂಬ ಕವನದಲ್ಲಿಯೂ ಅಮ್ಮನ ನೆನಪನ್ನು ನಾನು ತಿಳಿಸಾರಿಗೇ ಹೋಲಿಸಿದ್ದೇನೆ. ಆ ಸಾಲುಗಳು ಹೀಗಿವೆ- “ಇಲ್ಲಿ ಅಮೆರಿಕಾದ ಅಡುಗೆ ಮನೆಯಲ್ಲಿ ತಿಳಿಸಾರು ಕುದಿವಾಗ ಕರಿಬೇವ ಘಮದಂತೆ ಹಿತವಾಗಿ ಸುಳಿಯುತ್ತಾಳೆ”. ತಿಳಿಸಾರು ಕುದಿವಾಗ ಅಮ್ಮ ಏಕೆ ನೆನಪಾಗುತ್ತಾಳೋ ಗೊತ್ತಿಲ್ಲ. ನನ್ನಲ್ಲಿ ತಾಯಿ, ತಾಯ್ನಾಡಿನ ಬಗೆಗೆ ಭಾವನಾತ್ಮಕ ಸೆಳೆತಗಳು ಹೆಚ್ಚಾಗಿರುವುದರಿಂದ ನನಗೆ ಮಾತ್ರ ಹೀಗನ್ನಿಸುತ್ತಿದೆಯೆಂದು ಮೊದಲು ತಿಳಿದಿದ್ದೆ. ಆದರೆ ಅನೇಕರಿಗೆ ನನ್ನಂತೆ ತಿಳಿಸಾರು ತಾಯಿಯ ಕೈಯಡುಗೆಯನ್ನು ನೆನಪಿಸುತ್ತದೆಂದು ನಂತರ ತಿಳಿಯಿತು.
ನನ್ನ ಅಮ್ಮನಿಗಂತೂ ಅಡುಗೆ ಮಾಡಲು ನನಗಿರುವ ಅನುಕೂಲದ ನಾಲ್ಕನೆಯ ಒಂದು ಭಾಗವೂ ಇರಲಿಲ್ಲವೆನ್ನಬಹುದು. ಕುಕ್ಕರ್ ಬಳಕೆಯಲ್ಲಿಲ್ಲದ ಕಾರಣ ತೆರೆದ ಪಾತ್ರೆಯಲ್ಲಿ ಬೇಳೆ ಬೇಯಿಸಬೇಕಾಗಿತ್ತು. ನಮ್ಮೂರಿನ ಗಡಸು ನೀರಿನಲ್ಲಿ ಬೇಳೆ ಎಂದೂ ಮೆತ್ತಗೆ ಬೇಯುತ್ತಿರಲಿಲ್ಲ. ಆದರೂ ಆ ಸಾರಿಗೆ ರುಚಿ ತುಂಬುತ್ತಿದ್ದುದು ಅಮ್ಮನ ಅಕ್ಕರೆಯಲ್ಲದೆ, ಬೇರೇನೂ ಅಲ್ಲವೆಂಬುದು ನನ್ನ ಗಟ್ಟಿ ನಂಬಿಕೆ. ಇದೇ ಮಾತನ್ನು ನನ್ನ ಅಕ್ಕನೂ ಈಚೆಗೆ ದೃಢಪಡಿಸಿದಳು.
ತಿಳಿಸಾರು ಎಲ್ಲರಿಗೂ ಇಷ್ಟವೆನ್ನಿಸಬೇಕಾಗಿಲ್ಲ. “ದಿನವೂ ಅನ್ನ, ಸಾರಿನ ಸಪ್ಪೆ ಊಟವೆ?” ಎಂದು ಮೂಗೆಳೆಯುವವರೂ ಇದ್ದಾರೆ. ಯಾವುದೇ ಸಂತಸ, ಸಂಭ್ರಮ, ವಿಶೇಷಗಳಿಲ್ಲದ ಸಪ್ಪೆ ಬದುಕನ್ನು “ಸಾರನ್ನದಂತಹ ಬದುಕು” ಎಂದು ನಗೆಯಾಡಬಹುದು. ಸಸ್ಯಾಹಾರಿಗಳನ್ನು “ಪುಳಿಚಾರು” ಎಂದು ವಿನೋದ ಮಾಡಲಾಗುತ್ತದೆ. ಅದೇನೇ ಇರಲಿ, “ಊಟ ತನ್ನಿಚ್ಛೆ, ನೋಟ ಪರರಿಚ್ಛೆ” ಎಂಬುದಂತೂ ಅಂತಿಮ ಸತ್ಯ. ನಾವು ತಿನ್ನುವ ಅಡುಗೆ ಯಾವುದೇ ಇರಲಿ ಸತ್ವಪೂರ್ಣವಾಗಿರಲಿ. ಸಾರಯುಕ್ತವಾಗಿರಲಿ. ನನ್ನ ಪಾಲಿಗಂತೂ ಏನೇ ಬರಲಿ, ಸಾರಿರಲಿ!
***
(ಏಪ್ರಿಲ್, ೧೧, ೨೦೦೭ `ದಟ್ಸ್ ಕನ್ನಡ’ ತುಳಸಿವನ’ ಆಂಕಣ)
ನನಗೆ ಸೊಪ್ಪಿನ ಸಾರು + ರಾಗಿ ಮುದ್ದೆ + ತುಪ್ಪ ಭೋ ಇಷ್ಟ ಕಣಕ್ಕಾ!
ನೀವು ರಸಂ ಎಂದ ಕೂಡಲೇ ನೆನಪಾದದ್ದು ನನ್ನ ನಳ ಪಾಕ. ಮೊದಲು ಸಂಬರು ಅಂತಲೇ ಶುರುವಾದರೂ ಅದು ಸಾಮಾನ್ಯವಾಗಿ (+) ಅಥವಾ (-)ಏ… ಯಾಮಾರಿದರೆ ಕೂಟು, ಖಾರ ಜಾಸ್ತಿಯಾದಾಗ ನೀರು ಹಾಕೀ ಹಾಕೀ ತಿಳಿ ಸಾರೂ… Triveni Rao ಅಕ್ಕ.
ಸೊಪ್ಪಿನ ಸಾರು+ರಾಗಿ ಮುದ್ದೆ + ತುಪ್ಪ!- ಅಹಾಹಾ!! ಈ ಕಾಂಬಿನೇಷನ್ ಇಷ್ಟಪಡದೋರು ಯಾರಾದರೂ ಇದಾರಾ ಅಂತ ನನಗೆ ಡೌಟು! 🙂 ಧನ್ಯವಾದಗಳು, ಬದರಿನಾಥ್!