ಕವಿ- ಎಚ್. ಎಸ್. ವೆಂಕಟೇಶಮೂರ್ತಿ

ಎಲ್ಲಿ ಅರಿವಿಗಿರದೊ ಬೇಲಿ
ಎಲ್ಲಿ ಇರದೋ ಭಯದ ಗಾಳಿ
ಅಂಥ ನೆಲೆಯಿದೆಯೇನು ಹೇಳಿ
ಸ್ವರ್ಗವನ್ನು ಅದರೆದುರು ಹೂಳಿ

ಹಸಿದಂಥ ಕೂಸಿರದ ನಾಡು
ಉಸಿರೆಲ್ಲ ಪರಿಮಳದ ಹಾಡು
ಎಲ್ಲಿ ಬೀಸುವುದೋ ನೆಮ್ಮದಿಯ ಗಾಳಿ
ಸ್ವಾತಂತ್ರ್ಯ ನಗುತಲಿದೆ ಅಲ್ಲಿ

ಕಣ್ಣೋ ಹಿಗ್ಗಿನ ಗೂಡು
ಮಣ್ಣೋ ಸುಗ್ಗಿಯ ಬೀಡು
ದುಡಿವೆವೋ ಎಲ್ಲಿ ಕೈಯಲ್ಲಿ
ಬಿಡುಗಡೆಯು ಹಾಡುತಿದೆ ಅಲ್ಲಿ

ಪ್ರೀತಿ ನೀತಿಯ ಸೂತ್ರವಾಗಿ
ನೀತಿ ಮಾತಿನ ಪಾತ್ರವಾಗಿ
ಅರಳೀತು ಎಲ್ಲಿ ಎದೆ ಹೂವು
ಅಂತ ನೆಲವಾಗಲಿ ನಾಡು

9 thoughts on “ಎಲ್ಲಿ ಅರಿವಿಗಿರದೊ ಬೇಲಿ”

  1. ಜ್ಯೋತಿ, ನೀನು ಹೇಳಿರುವುದು ಕುವೆಂಪು ಅವರ ಅನುವಾದವೇ ಇರಬಹುದು. ಯಾಕೆಂದರೆ ಬಿ.ಎಂ.ಶ್ರೀಯವರ ಅನುವಾದವನ್ನು ಮೈಸೂರು ಅನಂತಸ್ವಾಮಿಯವರು ಹಾಡಿದ್ದಾರೆ. ಅದು “ಭಯವಿರದ ಮನವೆಲ್ಲೊ…ಶಿರ ಬಾಗದಿಹುದೆಲ್ಲೊ. ..” ಎಂದು ಶುರುವಾಗುತ್ತದೆ. ಹಳೆಯ ಹಾಡಿನ ಉಗ್ರಾಣದಲ್ಲಿ ಹುಡುಕಿದರೆ ಈ ಹಾಡು ಸಿಕ್ಕೀತು.

  2. ಎಚ್.ಎಸ್. ವೆಂಕಟೇಶಮೂರ್ತಿಯವರ ಈ ಕವನವು ಇದೇ ಆಶಯದ ಇಂಗ್ಲಿಶ್ ಕವನವೊಂದನ್ನು ನೆನಪಿಸುತ್ತದೆ. ಅದನ್ನು ಬರೆದವರು ರವೀಂದ್ರನಾಥ ಠಾಕೂರ. ಆ ಕವಿತೆಯ ಮೊದಲ ಹಾಗು ಕೊನೆಯ ಸಾಲುಗಳು ಹೀಗಿವೆಃ
    “Where tha mind is without fear and the head is held high;

    Where knowlege is free;
    . . . . . . . . . . . . . . . . . . . . . . . . . . . . . . . . . . . . . . . . . . .

    Into that heaven of freedom, my Father, let my country awake.

  3. ಠಾಕೂರರ ಆ ಪದ್ಯದ ಕನ್ನಡ ಭಾವಾಂತರ ಹೀಗೆ ಶುರುವಾಗುತ್ತದೆ:
    “ಎಲ್ಲಿ ಮನಕಳುಕಿರದೊ, ಎಲ್ಲಿ ತಲೆ ಬಾಗಿರದೊ,
    ಎಲ್ಲಿ ತಿಳಿವಿಗೆ ತೊಡಕು ತೋರದಿಹುದಲ್ಲಿ…”

    ಬಿ.ಎಮ್.ಶ್ರೀ. ಅಥವಾ ಕುವೆಂಪು ಇದರ ಕರ್ತೃ (ಯಾರೆಂದು ಸರಿಯಾಗಿ ನೆನಪಿಲ್ಲ).

  4. ಅಂದ ಹಾಗೆ, ಕನ್ನಡದ ಅತ್ಯಧಿಕ ಪ್ರಸಾರದ ಪತ್ರಿಕೆಯಾದ ‘ಮಜಾವಾಣಿ’ , ಈ ಕವಿತೆಯ ಸಾಲನ್ನು “ಎಲ್ಲಿ ಬೇಲಿಗಿಲ್ಲವೋ ಅರಿವು, ಎಲ್ಲಿ ಗಾಳಿಗಿಲ್ಲವೋ ಭಯವು, ಎಲ್ಲಿಲ್ಲವೋ ಸತ್ಯದ ಸುಳಿವು…” ಎಂದು ಬೇಕಾದಂತೆ ತಿರುಚಿ,(ಠಾಗೋರ್, ಎಚ್ಚೆಸ್ವಿ.. ಯಾರ ಅನುಮತಿಯನ್ನೂ ಪಡೆಯದೆ ) ತನ್ನ ಸ್ಲೋಗನ್ ಮಾಡಿ ಹಾಕಿಕೊಂಡಿದೆ. 🙂

  5. ಶ್ರೀತ್ರಿಯವರಿಗೆ,

    ನಮಸ್ಕಾರ.
    ಮೂರೂವರೆ ಓದುಗರ ಮಜಾವಾಣಿಯನ್ನು “ಕನ್ನಡದ ಅತ್ಯಧಿಕ ಪ್ರಸಾರದ ಪತ್ರಿಕೆ” ಎಂದು ಅಪಹಾಸ್ಯಮಾಡಿರುವುದಲ್ಲದೆ, ಅನುಮತಿ ಪಡೆಯದೆ ಸ್ಲೋಗನ್ ಮಾಡಿಕೊಂಡಿರುವ ಗುರುತರವಾದ ಆಪಾದನೆ ಸಹ ಮಾಡಿದ್ದೀರಿ.

    ಠಾಗೋರ್ ಮತ್ತು ಎಚ್ಚೆಸ್ವಿ ಕಾಲಯಂತ್ರದಲ್ಲಿ ಪ್ರಯಾಣ ಮಾಡಿ ಮಜಾವಾಣಿ ಸ್ಲೋಗನ್ನಿನಿಂದ ಪ್ರೇರಿತರಾಗಿ ತಮ್ಮ ಕವನಗಳನ್ನು ಬರೆದಿಲ್ಲ ಎಂಬುದನ್ನು ಕೋರ್ಟಿನ ಕಟಕಟೆಯಲ್ಲಿ ಹೇಗೆ ನಿರೂಪಿಸುತ್ತೀರಿ ನೋಡೋಣ!

    ಅರಿವು ಮತ್ತು ಭಯ ಎರಡೂ ಇಲ್ಲದ ನಮ್ಮ ಪತ್ರಿಕೆಗೆ ಗೆಲವು ಶತಸಿದ್ಧ. ಇದರಲ್ಲಿ ಯಾವ ಆಮಶಂಕೆಯೂ ಇಲ್ಲ!!!

    ವಂದನೆಗಳೊಂದಿಗೆ,

    ವಿ.ವಿ.
    ಮಜಾವಾಣಿ ಕಾನೂನು ಸಲಹೆಗಾರ

  6. ಮಜಾವಾಣಿಯವರೇ, ನೀವು ಎಲ್ಲೆಲ್ಲೂ ಬೇಹುಗಾರನ್ನಿರಿಸಿರುವ ವಿಚಾರ ನನಗೆ ತಿಳಿದಿರಲಿಲ್ಲ. ನಿಮ್ಮ ಪತ್ರಿಕೆ ಮೇಲಿನ ಎಲ್ಲಾ ಆರೋಪಗಳನ್ನು ಹಿಂತೆಗೆದುಕೊಳ್ಳುತ್ತಿದ್ದೇನೆ. ಕೋರ್ಟ್, ಕಟಕಟೆ ಎಂದು ದಯವಿಟ್ಟು ನನ್ನನ್ನು ಹೆದರಿಸಬೇಡಿ.

  7. ರಾಘು ಅವರೇ, ತುಳಸಿವನಕ್ಕೆ ಸ್ವಾಗತ.

    `where the mind’ – ಕವಿತೆಯನ್ನು ಬಿ.ಎಂ.ಶ್ರೀಯವರು ಅನುವಾದಿಸಿದ್ದಾರೆಂಬುದು ನಿರ್ವಿವಾದ. ಆದರೆ, ಅದೇ ಕವಿತೆಯ ಇನ್ನೊಂದು ಅನುವಾದ – ‘ಎಲ್ಲಿ ಮನಕಳುಕಿರದೊ, ಎಲ್ಲಿ ತಲೆ ಬಾಗಿರದೊ, ಎಲ್ಲಿ ತಿಳಿವಿಗೆ ತೊಡಕು ತೋರದಿಹುದಲ್ಲಿ…’ ಯಾರದು? ಎಂಬುದು ಈಗಿರುವ ಪ್ರಶ್ನೆ(ಪ್ರತಿಕ್ರಿಯೆಗಳನ್ನು ಗಮನಿಸಿ) . ಆ ಬಗ್ಗೆ ನಿಮಗೆ ಗೊತ್ತಿದ್ದರೆ, ನಿಮ್ಮ ಬಳಿ ಆ ಕವಿತೆಯಿದ್ದಲ್ಲಿ ಹಂಚಿಕೊಳ್ಳಿ.

Leave a Reply to Nayak Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.