ರಚನೆ : ಕುವೆಂಪು
ತೇನ ವಿನಾ ತೇನ ವಿನಾ
ತೃಣಮಪಿ ನ ಚಲತಿ ತೇನ ವಿನಾ
ಮಮತೆಯ ಬಿಡು, ಹೇ ಮೂಢಮನಾ,
ಮೂಢಮನಾ, ಹೇ ಮೂಢಮನಾ !
ರವಿಗಿಲ್ಲದ ಭಯ, ಶಶಿಗಿಲ್ಲದ ಭಯ,
ತಾರಾನಿವಹಕೆ ಇರದ ಭಯ,
ನಿನಗೇತಕೆ ಬಿಡು, ಅಣು ! ಶ್ರದ್ಧೆಯನಿಡು;
ನಿನ್ನನೆ ನೈವೇದ್ಯವ ನೀಡು !
ತೇನ ವಿನಾ . . .
ಎಲ್ಲೆಲ್ಲಿಯು ಕಯ್, ಎಲ್ಲೆಲಿಯು ಕಾಲ್
ಎಲ್ಲೆಲ್ಲಿಯು ಕಣ್ ತಾನಾದ
ಸತ್ ಚಿತ್ ಶಕ್ತಿಯ ಆನಂದವಿರಲ್
ಬಿಡು ಏತಕೆ ನಿನಗೆ ವಿಷಾದ !
ತೇನ ವಿನಾ . . .
(‘ಅಗ್ನಿಹಂಸ’ ಸಂಕಲನದಿಂದ)
ಕುವೆಂಪು ರಚಿತ ಈ ಕವನದಲ್ಲಿ ಭಕ್ತಿ ಹಾಗು ಶ್ರದ್ಧೆ ಸಾಂದ್ರವಾಗಿರುವದನ್ನು ಗಮನಿಸಬಹುದು. ತ್ರಿವೇಣಿಯವರಿಗೆ ಧನ್ಯವಾದಗಳು.
ಕಾಕಾ, ನಿಮ್ಮ ಧನ್ಯವಾದವನ್ನು ,ಈ ಕವಿತೆಯನ್ನು `ತುಳಸಿವನ’ದ ಸಂಗ್ರಹಕ್ಕೆಂದು ಕಳಿಸಿಕೊಟ್ಟ ಶಶಿಕಲಾ ಅವರಿಗೆ ತಲುಪಿಸುತ್ತಿದ್ದೇನೆ.
ತುಳಸಿಯಮ್ಮಾ,
ತುಂಬಾ ಇಷ್ಟವಾಯ್ತು ಕವಿತೆ. ಪೂರ್ತಿ ಸಿಕ್ಕಿರ್ಲಿಲ್ಲ… ನಿಮ್ಮಲ್ಲಿ ದೊರಕಿತು. ಧನ್ಯವಾದಗಳು.
ಪ್ರೀತಿಯಿಂದ,
ತೇಜು.
ತೇಜಸ್ವಿನಿ, ನನಗಿಷ್ಟವಾದ ಕವಿತೆಗಳನ್ನು ಹಂಚಿಕೊಳ್ಳುವ ಖುಷಿ ನನ್ನದು. ಧನ್ಯವಾದದ ಅಗತ್ಯವಿಲ್ಲ. 🙂 ಈ ಕವಿತೆ ಹಾಡಿನ ರೂಪದಲ್ಲಿ ಕೇಳಲು ಕೂಡ ಬಹಳ ಚೆನ್ನಾಗಿದೆ.
ಕುವೆಂಪು ಅವರ ಸಾಹಿತ್ಯಗಳಲ್ಲಿ.. ಭಗವತ್ ಶಕ್ತಿಯ ಬಗ್ಗೆ, ಎಲ್ಲೆಲ್ಲೂ ಇರುವ ಒಂದು ಚೈತನ್ಯ ಶಕ್ತಿಯ ಬಗ್ಗೆ ಅವರಿಗಿದ್ದ ನಂಬಿಕೆ ಶ್ರದ್ಧೆ ಭಕ್ತಿಯನ್ನು ಅಗಾಧವಾಗಿ ಕಾಣಬಹುದು. ಉತ್ಕೃಷ್ಟ ಮಟ್ಟದ ಆಲೋಚನೆಗಳನ್ನು ಅವರ ಒಂದೊಂದು ಕವಿತೆಗಳಲ್ಲಿ ಕಾಣಬಹುದು. ಕವಿ ಋಷಿ ಯೋಗೀ ಸಂತ ಎಲ್ಲರನ್ನೂ ನಾವು ಕುವೆಫು ಅವರಲ್ಲಿ ಕಾಣಬಹುದು